ಕಾರವಾರ:
ಸಾರ್ವಜನಿಕರು ಮತ್ತು ಪೊಲೀಸರ ನಡುವಿನ ಸಂವಹನದ ಕೊರತೆ ತುಂಬಲು ಸುಧಾರಿತ ಬೀಟ್ ವ್ಯವಸ್ಥೆ ಸಹಕಾರಿಯಾಗಿದೆ ಎಂದು ಜಿಲ್ಲಾ ಪೊಲೀಸ್ವರಿಷ್ಠಾಧಿಕಾರಿ ವಿನಾಯಕ ವಿ. ಪಾಟೀಲ್ ಹೇಳಿದರು.ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ `ಸುಧಾರಿತ ಬೀಟ್ ವ್ಯವಸ್ಥೆ ಹಾಗೂ ಬೀಟ್ ನಾಗರಿಕ ಸದಸ್ಯರ ಸಭೆ’ಯಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ನಡೆಯುವ ಅಹಿತಕರ ಘಟನೆಗಳನ್ನು ತಡೆಯಲು ಸದಾ ಪೊಲೀಸರು ಸಜ್ಜಾಗಿರುತ್ತಾರೆ. ಪೊಲೀಸರಿಂದ ಯಾವುದೇ ದೋಷಗಳು ಕಂಡಲ್ಲಿ ಅದನ್ನು ಟೀಕಿಸಬಹುದು. ಆದರೆ ಅದೆ ರಿತಿ ಅವರು ಮಾಡುವ ಒಳ್ಳೆಯ ಕೆಲಸಗಳನ್ನು ಶ್ಲಾಘಿಸಬೇಕು. ಆಗ ಅವರಿಗೂ ಪ್ರೋತ್ಸಾಹ ದೊರೆಯುತ್ತದೆ. ಆದ್ದರಿಂದ ಈ ಬೀಟ್ ವ್ಯವಸ್ಥೆಯಿಂದ ಸಾಕಷ್ಟು ಉಪಯೋಗಗಳಿದ್ದು, ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿದ್ದಲ್ಲಿ ಜಿಲ್ಲೆಯಲ್ಲಿ ಅಪರಾಧಗಳು ನಡೆಯದಂತೆ ತಡೆಗಟ್ಟಲು ಸಾಧ್ಯವಿದೆ ಎಂದರು. ಪೊಲೀಸರೊಂದಿಗೆ ಸಾರ್ವಜನಿಕರು ಉತ್ತಮ ಸಂಬಂಧವನ್ನು ಹೊಂದುವುದರ ಜತೆಗೆ ಸಮಾಜದಲ್ಲಿ ನಡೆಯುವ ಅಹಿತಕರ ಘಟನೆಗಳನ್ನು ತಡೆಗಟ್ಟಲು ಸುಧಾರಿತ ಬೀಟ್ ಪದ್ಧತಿ ಹೆಚ್ಚು ಅವಶ್ಯವಾಗಿದೆ. ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಜಿಲ್ಲೆಯಲ್ಲಿ ಎಲ್ಲ ಜನರಿಗೂ ಪೊಲೀಸರಿಂದ ರಕ್ಷಣೆ ನೀಡಲು ಸಾಧ್ಯವಿಲ್ಲ. ಈ ಹಿಂದೆ ಮೂರ್ನಾಲ್ಕು ಹಳ್ಳಿಗಳಿಗೆ ಒಂದು ಬೀಟ್ ಪದ್ಧತಿ ಇತ್ತು. ಇದರಿಂದ ಪೋಲಿಸರಿಗೆ ಎಲ್ಲ ಮಾಹಿತಿ ಕಲೆ ಹಾಕಲು ಹಾಗೂ ಶೀಘ್ರ ಸ್ಪಂದನೆಗೆ ಸಾಧ್ಯವಾಗುತ್ತಿರಲಿಲ್ಲ. ಆದರೆ ಈ ಪದ್ಧತಿಯಿಂದ ಪ್ರತಿ ಹಳ್ಳಿಗೆ ಒಬ್ಬ ಸಿಬ್ಬಂದಿಯನ್ನು ನೇಮಕ ಮಾಡಿ, ಆಯಾ ಬೀಟ್ಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪ್ರಯತ್ನಿಸಲಾಗುತ್ತದೆ’ ಎಂದು ಹೇಳಿದರು.ಪತ್ರಕರ್ತ ಗಂಗಾಧರ ಹಿರೇಗುತ್ತಿ ಮಾತನಾಡಿ, ಸಮಾಜದಲ್ಲಿ ಏನೆ ತಪ್ಪುಗಳು ನಡೆದರು ನಾವು ಅಲ್ಲಿ ಪೊಲೀಸ್ ಇಲಾಖೆಯೆಡೆಗೆ ಬೊಟ್ಟು ಮಾಡುತ್ತೇವೆ. ಆದರೆ ಸಮಾಜದಲ್ಲಿ ಅಥವಾ ಪೊಲೀಸ್ ವ್ಯವಸ್ಥೆಗೆ ನಮ್ಮ ಕೋಡುಗೆ ಏನು ಎಂಬುದನ್ನು ತಿಳಿದುಕೊಳ್ಳುತ್ತಿಲ್ಲ. ಇದರಿಂದ ಪೊಲೀಸರು ಏಕಾಂಗಿಯಾಗಿದ್ದಾರೆ. ಆದರೆ ಇದೀಗ ನಾಗರಿಕರನ್ನು ಜತೆಯಾಗಿಸಿಕೊಂಡಿರುವ ಸುಧಾರಿತ ಗಸ್ತು ಪದ್ಧತಿ ಹೆಚ್ಚು ಸಹಕಾರಿಯಾಗಿದೆ ಎಂದರು.
ಮೀನುಗಾರ ಮುಖಂಡ ಗಣಪತಿ ಮಾಂಗ್ರೆ ಮಾತನಾಡಿ, ನಾಗರಿಕರು ಪೊಲೀಸರು ಒಂದು ನಾಣ್ಯದ ಎರಡು ಮುಖಗಳಾಗಿವೆ ಎಂದರು. ಸಮಾಜ ಸೇವಕಿ ಅನು ಕಳಸ ಮಾತನಾಡಿ, ಪರಸ್ಪರ ಸಹಕಾರದೊಂದಿಗೆ ಸಮಾಜದಲ್ಲಿ ಶಾಂತಿ ನೆಲಸಲು ಸಹಕಾರ ನೀಡಬೇಕು ಎಂದರು. ಕೆಡಿಎ ಅಧ್ಯಕ್ಷ ಸಂದೀಪ್ ತಳೇಕರ್, ನಗರಸಭೆ ಉಪಾಧ್ಯಕ್ಷೆ ಲೀಲಾಬಾಯಿ ಠಾಣೇಕರ್, ನಿವೃತ್ತ ಎಸ್ಪಿ ಕೆ.ಎಸ್.ನಾಯ್ಕ, ಡಿವೈಎಸ್ಪಿ ಎನ್.ಟಿ.ಪ್ರಮೋದರಾವ್, ಜಿ.ಟಿ.ನಾಯ್ಕ ಇದ್ದರು.
Leave a Comment