ಹಳಿಯಾಳ :
ಅತಿಯಾದ ಜನಸಂಖ್ಯಾವೃದ್ದಿಯು ಅಭಿವೃದ್ದಿಗೆ ಮಾರಕವಾಗಿದ್ದು ಬೆಳೆಯುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವುದು ಅತಿ ಅಗತ್ಯವಾಗಿದ್ದು ಜನಸಂಖ್ಯಾ ನಿಯಂತ್ರಣದಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದ್ದು ಕುಟುಂಬ ಕಲ್ಯಾಣ ಯೋಜನೆಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳುವ ಮುಖಾಂತರ ಚಿಕ್ಕ ಕುಟುಂಬ ಹೊಂದಿ ದೇಶದ ಅಭಿವೃದ್ದಿಗೆ ಸಹಕರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕಾ ಆಡಳಿತ ಹಾಗೂ ವಿವಿಧ ಸಂಘ ಸಂಸ್ಥೆಯ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹಳಿಯಾಳ ತಾಲೂಕಾ ಮಟ್ಟದ ವಿಶ್ವ ಜನಸಂಖ್ಯಾ ದಿನಾಚಾರಣೆ ಕಾರ್ಯಕ್ರಮದ ಜಾಥಾಕ್ಕೆ ಹಸೀರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಸಚಿವರು ಮಾತನಾಡಿದರು.
ದೇಶದಲ್ಲಿ ಅಭಿವೃದ್ದಿಗಳು ಸಾಕಷ್ಟು ಆಗುತ್ತಿದ್ದರು ಕೂಡ ಅತಿಯಾದ ಜನಸಂಖ್ಯೆಯಿಂದ ಪ್ರಗತಿಯಾಗುತ್ತಿಲ್ಲ ಸಮಾಜದಲ್ಲಿ ಗೌರವದಿಂದ ಬಾಳಲು ಚಿಕ್ಕ ಕುಟುಂಬದ ಅವಶ್ಯಕತೆಯಿದ್ದು ಇದಕ್ಕಾಗಿ ಜನಸಂಖ್ಯೆ ನಿಯಂತ್ರಣಕ್ಕೆ ಕಾಯ್ದೆ ಕಾನೂನು ಜಾರಿ ಮಾಡಲು ಸಾಧ್ಯವಿಲ್ಲ, ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮಲ್ಲಿ ರಾಷ್ಟ್ರಾಭಿಮಾನ, ಸ್ವಾಭಿಮಾನ ಅವಶ್ಯಕತೆ ಇದ್ದು ನಾವೆಲ್ಲರೂ ಸಹಕಾರ ನೀಡಿದರೇ ಮಕ್ಕಳ ಭವಿಷ್ಯವನ್ನು ರೂಪಿಸಿ ದೇಶದ ಅಭಿವೃದ್ದಿ ಮಾಡಲು ಸಾಧ್ಯವಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ಮಾತನಾಡಿ ಕುಟುಂಬ ಕಲ್ಯಾಣ ಯೋಜನೆಗಳ ಬಗ್ಗೆ ಎಲ್ಲರೂ ಮಾಹಿತಿ ಪಡೆದು ಜನಸಂಖ್ಯೆ ನಿಯಂತ್ರಣ ಮಾಡುವಲ್ಲಿ ಮನಸ್ಸು ಮಾಡಬೇಕೆಂದರು. ಈ ಸಂದರ್ಭದಲ್ಲಿ ಜಿಪಂ ಉಪಾದ್ಯಕ್ಷ ಸಂತೋಷ ರೇಣಕೆ, ಸದಸ್ಯರಾದ ಕೃಷ್ಣಾ ಪಾಟೀಲ್, ಲಕ್ಷ್ಮೀ ಕೊರ್ವೆಕರ, ತಾಪಂ ಅಧ್ಯಕ್ಷೆ ರೀಟಾ ಸಿದ್ದಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ, ಬಾಬು ಮಿರಾಶಿ ಮೊದಲಾದ ಪ್ರಮುಖರು ಇದ್ದರು.
ಬಳಿಕ ಇಲ್ಲಿಯ ಸರ್ಕಾರಿ ಶಿವಾಜಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಹಳಿಯಾಳ ಪುರಸಭೆ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ತಾಲೂಕಾ ಆರೋಗ್ಯಾಧಿಕಾರಿ ಡಾ||ಮಹಾಬಲೇಶ್ವರ ಹೆಗಡೆ, ಡಾ.ರಮೇಶ ಕದಂ, ತಹಶೀಲ್ದಾರ್ ವಿದ್ಯಾಧರ ಗುಳಗುಳಿ, ಪ್ರಾಚಾರ್ಯ ಡಾ|| ಶೇಖರಪ್ಪಾ ಇದ್ದರು.
ಉಪನ್ಯಾಸಕ ಎಸ್.ವಿ.ಮಾನೆ ದೇಶದ ಅಭಿವೃದ್ದಿಯಲ್ಲಿ ಜನಸಂಖ್ಯಾ ಸ್ಥಿರತೆ ಮಹತ್ವ ಕುರಿತು ಉಪನ್ಯಾಸ ನೀಡಿದರು. ಉಪನ್ಯಾಸಕ ವಿಠ್ಠಲ ನಿರೂಪಿಸಿದರು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಪ್ರಕಾಶ ಮಾನೆ ಸ್ವಾಗತಿಸಿ ವಂದಿಸಿದರು.
Leave a Comment