ಹಳಿಯಾಳ:
ಕಟ್ಟಡ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬುಧವಾರ ರಾಜ್ಯಾದ್ಯಂತ ಸಚಿವ, ಶಾಸಕರ, ಜಿಲ್ಲಾಧಿಕಾರಿ, ಕಾರ್ಮಿಕ ಅಧಿಕಾರಿಗಳ ಮನೆಯ ಮುಂದೆ ಪ್ರತಿಭಟನೆ ನಡೆಸುವ ರಾಜ್ಯ ಸಂಘಟನೆಯ ಕರೆಯ ಮೇರೆಗೆ ಹಳಿಯಾಳದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಮನೆ ಎದುರು ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೆಷನ್ ಸಂಘಟನೆಯವರು ಪ್ರತಿಭಟನೆ ನಡೆಸಿದರು.
ಬುಧವಾರ ಇಲ್ಲಿಯ ಅರ್ಬನ್ ಬ್ಯಾಂಕ್ ವೃತ್ತದಿಂದ ಪ್ರತಿಭಟನಾ ಮೇರವಣಿಗೆಯಲ್ಲಿ ಸಾಗಿ ಸಚಿವ ದೇಶಪಾಂಡೆ ಮನೆ ಎದುರು 1 ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಿದರು. ಬಳಿಕ ಸಚಿವರ ಆಪ್ತ ಸಹಾಯಕ ಅಣ್ಣಪ್ಪಾ ಮಡಿವಾಳ ಅವರಿಗೆ ಸಚಿವರಿಗೆ ಬರೆದ ಮನವಿಯನ್ನು ಸಲ್ಲಿಸಿದರು.
ಮನವಿಯಲ್ಲಿ ಸುಮಾರು 42 ಸಾವಿರಕಟ್ಟಡ ಕಾರ್ಮಿಕರು ಕರ್ನಾಟಕ ಸರಕಾರ ರಚಿಸಿದ ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿಯಲ್ಲಿ ಕಾರ್ಮಿಕರು ಸದಸ್ಯರಾಗಿದ್ದು ಹಳಿಯಾಳ ಜೋಯಿಡಾ ತಾಲೂಕುಗಳಲ್ಲಿ 12 ಸಾವಿರ ಕಾರ್ಮಿಕರು ನೊಂದಾಯಿತರಾಗಿದ್ದಾರೆ. 11 ತಾಲೂಕುಗಳಲ್ಲಿ ಒಬ್ಬರೇ ಒಬ್ಬ ಕಾರ್ಮಿಕ ನಿರೀಕ್ಷಕರಿದ್ದು ಕಟ್ಟಡ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಲು ಅವರಿಂದ ಆಗುತ್ತಿಲ್ಲ ಎಂದು ದೂರಿರುವ ಅವರು ಜಿಲ್ಲಾ ಕೇಂದ್ರದಲ್ಲಿರುವ ಕಾರ್ಮಿಕ ಅಧಿಕಾರಿಗಳಿಗೆ ವರ್ಗವಾಗಿದ್ದು ಸೌಲಭ್ಯಗಳ ಮಂಜೂರಿಗೆ ವಿಳಂಬವಾಗುತ್ತಿದೆ. ಹಳಿಯಾಳ ಮತ್ತು ದಾಂಡೇಲಿಯಲ್ಲಿ 2 ಕಾರ್ಮಿಕ ನಿರೀಕ್ಷಕರ ಕಛೇರಿಗಳಿದ್ದು ಎರಡು ಕಛೇರಿಗೆ ಒಬ್ಬರೇ ಡಾಟಾ ಎಂಟ್ರಿಯವರಿದ್ದಾರೆ. ಕಾರ್ಮಿಕರ ನೊಂದಣಿ ಅಂತರ್ಜಾಲ ಮೂಲಕವೇ ಮಾಡಬೇಕಾಗಿರುವುದರಿಂದ ಸರ್ವರ್ ಸಮಸ್ಯೆಯಿಂದ ದಿನಕ್ಕೆ ಒಂದೆರಡು ಮಾತ್ರ ನೊಂದಾಯಿಸಲಾಗುತ್ತ್ತಿದ್ದು ಇದರಿಂದ ಕಾರ್ಮಿಕರಿಗೆ ಸಮಸ್ಯೆಯಾಗಿದೆ ಎಂದು ದೂರಲಾಗಿದೆ.
ಮಂಡಳಿಯಲ್ಲಿ 11,20,097ಕಾರ್ಮಿಕರು ನೊಂದಾಯಿತರಾಗಿದ್ದು ಸೆಸ್ಸ್ ಮತ್ತು ಕಾರ್ಮಿಕರ ವಂತಿಗೆಯ ಮೂಲಕ ರೂ. 5650.71/- ಕೋಟಿ ಹಣ ಸಂಗ್ರಹವಾಗಿದ್ದರೂ ಕಳೆದ 11 ವರ್ಷಗಳಲ್ಲಿ ಕೇವಲ 177 ಕೋಟಿರೂಪಾಯಿ ಮಾತ್ರ ಫಲಾನುಭವಿಗಳಿಗೆ ಸೌಲಭ್ಯ ಸಿಕ್ಕಿದ್ದು ಸರ್ಕಾರದಿಂದ ಕಾರ್ಮಿಕರ ಕಡೆಗಣನೆಯಾಗುತ್ತಿದ್ದು ಕೂಡಲೇ ತಮ್ಮ ಬೇಡಿಕೆಗಳಾದ ಕಾರ್ಮಿಕ ಇಲಾಖೆಯಲ್ಲಿ ಕಟ್ಟಡ ಮತ್ತು ನಿರ್ಮಾಣ ಮಂಡಳಿಗೆ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡುವುದು, ಕಾರ್ಮಿಕರ ಅರ್ಜಿ ಸಲ್ಲಿಸಿ 2-3 ವರ್ಷಗಳು ಕಳೆದರೂ ಸೌಲಭ್ಯಗಳು ಕಾರ್ಮಿಕರಿಗೆ ಸಿಗುತ್ತಿಲ್ಲ. ಕಾರ್ಮಿಕರಿಗೆಅರ್ಜಿ ಸಲ್ಲಿಸಿದ 30 ದಿನಗಳ ಒಳಗಾಗಿ ಸೌಲಭ್ಯ ವಿತರಿಸುವುದು, ಆನಲೈನ್ ಸರ್ವರ್ ಸಮಸ್ಯೆ ಇದ್ದಲ್ಲಿ ಅರ್ಜಿ ಸಲ್ಲಿಸಿದ ಏಳುದಿನಗಳೊಳಗೆ ಕೈಬರಹದ ಮೂಲಕ ತಾತ್ಕಾಲಿಕ ನೊಂದಣಿ ಕಾರ್ಡುಗಳನ್ನು ನೀಡಿ ನಂತರ ಆನ್ಲೈನ್ನಲ್ಲಿ ದಾಖಲಿಸುವುದು, ನೊಂದಾಯಿತ ಕೇಂದ್ರಕಾರ್ಮಿಕಸಂಘಟನೆಗೆ ಕಟ್ಟಡ ಕಾರ್ಮಿಕರನ್ನು ನೊಂದಾಯಿಸುವ ಅಧಿಕಾರವನ್ನು ಮಂಡಳಿ ಕೊಟ್ಟಿದೆ. ಆದರೆ ಕಾರ್ಮಿಕ ಇಲಾಖೆಯಲ್ಲಿ ಏಜೆಂಟರನ್ನು ನೇಮಿಸಿಕೊಂಡು ಕಾರ್ಮಿಕರಿಂದ ಹೆಚ್ಚು ಹಣ ವಸೂಲು ಮಾಡಿ ಭೃಷ್ಟಾಚಾರಕ್ಕೆ ಎಡೆ ಮಾಡಿಕೊಟ್ಟಿರುವುದರಿಂದ ಕೂಡಲೇ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು, ಕಾರ್ಮಿಕ ಕಛೇರಿಯಲ್ಲಿ ಅಗತ್ಯ ಸಿಬ್ಬಂದಿಯನ್ನು ನೇಮಿಸಿ 2-3 ವರ್ಷಗಳಿಂದ ಸಲ್ಲಿಸಿದ ಸೌಲಭ್ಯದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು,ಚೆಕ್ಲಿಸ್ಟ್ ಹೊರತುಪಡಿಸಿ ಅನಗತ್ಯ ದಾಖಲೆಗಳನ್ನು ಕೇಳಿ ಕಾರ್ಮಿಕರಿಗೆ ಪೀಡಿಸುವುದನ್ನು ನಿಲ್ಲಿಸಿ, ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಂದ ಪರಿಶೀಲನೆಯ ನೆಪದಲ್ಲಿ ಹಣ ಕೇಳುವುದನ್ನು ನಿಲ್ಲಿಸಬೇಕು, ಹುಬ್ಬಳ್ಳಿಯ ಸಹಾಯಕ ಕಾರ್ಮಿಕ ಆಯುಕ್ತರ ಕಛೇರಿಯಲ್ಲಿ ಕಳೆದ 5 ವರ್ಷದಿಂದ ಸಲ್ಲಿಸಿದ ಮದುವೆ ಮತ್ತು ಮರಣದ ಅರ್ಜಿಗಳಿಗೆ ಇಂದಿಗೂ ಸೌಲಭ್ಯ ಸಿಗದೆ ಇರುವುದರಿಂದ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು, ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ಕಾರ್ಮಿಕ ಮಂಡಳಿಯ ಠೇವಣಿಯನ್ನು ಸಹಕಾರಿ ಬ್ಯಾಂಕಿಗೆ ವರ್ಗಾವಣೆ ಮಾಡಬಾರದೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಹರೀಶ ನಾಯ್ಕ, ಕಾರ್ಮಿಕ ಮುಖಂಡರಾದ ಆರ್.ಎಮ.ಮುಲ್ಲಾ, ಜಯಶ್ರೀ ಹಿರೆಕರ, ಹನುಮಂತ ಸಿಂದೊಗಿ, ಅಕ್ರಮಖಾನ್, ಪ್ರಕಾಶ ಚನಾಬತ್ತಿ, ಪರಶುರಾಮ ಮುತಗೇಕರ, ಕೃಷ್ಣಾ ಭಟ್ಟ, ರೇಣುಕಾ ಹಣಬರ, ಅರುಣ ಭೋಸಲೆ ಮೊದಲಾದ ಪ್ರಮುಖರು ಇದ್ದರು.
Leave a Comment