ಹೊನ್ನಾವರ:
ಆರ್ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣದ ತನಿಖೆಯನ್ನು `ಎನ್ಐಎ’ಗೆ ಒಪ್ಪಿಸಬೇಕು ಮತ್ತು ವಿಶೇಷ ತುರ್ತು ನ್ಯಾಯಾಲಯ ಸ್ಥಾಪಿಸಿ ಪ್ರಕರಣದ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಹಿಂದು ಜನಜಾಗೃತಿ ಸಮಿತಿ ಕಾರ್ಯಕರ್ತರು ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ, ಗೃಹ ಇಲಾಖೆಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಕಾರ್ಯಕರ್ತರು ಹಿಂದು ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು. ಹಿಂದು ಜನಜಾಗೃತಿ ಸಮಿತಿ ಕಾರ್ಯಕರ್ತರಾದ ಸತೀಶ ಶೇಟ್ ಮಾತನಾಡಿ, ಜಿಹಾದಿ ಭಯೋತ್ಪಾದಕರು ರಾಜ್ಯದಲ್ಲಿ ಕಳೆದ ಎರಡು ವರ್ಷದಲ್ಲಿ 24 ಹಿಂದು ನಾಯಕರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವ ಧ್ಯೇಯದಿಂದ ಯೋಜನಾಬದ್ಧವಾಗಿ ದಕ್ಷಿಣ ಭಾರತದಲ್ಲಿ ಹಿಂದು ನಾಯಕರನ್ನು ಗುರಿ ಮಾಡಿ ಹತ್ಯೆಗೈಯಲಾಗುತ್ತಿದೆ. ಅಲ್ಲದೇ ರಾಜ್ಯದ ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಿಗೆ ಈ ಬಗ್ಗೆ ತನಿಖೆ ಮಾಡಲೂ ಬಿಡುತ್ತಿಲ್ಲ. ಬದಲಾಗಿ ಅವರಿಗೆ ಕಿರುಕುಳ, ಎತ್ತಂಗಡಿ ಮುಂತಾದವುಗಳ ಮೂಲಕ ತನಿಖೆಗೆ ಅಡ್ಡಿಪಡಿಸುತ್ತಿದೆ. ಇದರ ಪರಿಣಾಮವಾಗಿ ಅನೇಕ ಹಿಂದು ನಾಯಕರ ಹತ್ಯೆಯ ಪ್ರಕರಣದಲ್ಲಿ ಅಪರಾಧಿಗಳು ನಿರ್ಭೀತಿಯಿಂದ ಓಡಾಡುತ್ತಿದ್ದಾರೆ. ಈ ಎಲ್ಲಾ ಪ್ರಕರಣಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರವಾಗಿ ಹಿಂದು ನಾಯಕರ ಹತ್ಯೆಯ ಪಿತೂರಿಯ ಹಿಂದೆ ಇದೆ ಎಂಬುದು ಸ್ಪಷ್ಟವಾಗುತ್ತಿದೆ. ಪ್ರಕರಣವನ್ನು ಶೀಘ್ರದಲ್ಲಿ ತನಿಖೆ ನಡೆಸಿ ಹತ್ಯೆಯ ಹಿಂದಿನ ನಿಜವಾದ ಕೈವಾಡ ಹೊರಬರಬೇಕು. ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಈ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ ಕೇಂದ್ರದ ರಾಷ್ಟ್ರೀಯ ತನಿಖಾದಳದಿಂದ ವಿಶೇಷ ಅನ್ವೇಷಣೆ ಆಗಬೇಕು ಮತ್ತು ಪ್ರಕರಣವನ್ನು ಬೇಧಿಸಲು ಪ್ರತ್ಯೇಕ ತುರ್ತು ನ್ಯಾಯಾಲಯ ಸ್ಥಾಪಿಸಬೇಕು ಎಂದರು.
ಮನವಿಯಲ್ಲಿ ಅಮರನಾಥ ಯಾತ್ರಿಕರ ಮೇಲೆ ಆಕ್ರಮಣ ನಡೆಸಿದ ಜಿಹಾದಿ ಉಗ್ರರನ್ನು ಹಾಗೂ ಪಾಕಿಸ್ತಾನವನ್ನು ನಾಶ ಮಾಡಬೇಕು. ಅಮರನಾಥ ಯಾತ್ರೆಗೆ ಬಿಗಿ ಭದ್ರತೆಯಿದ್ದರೂ ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದನೆಯ ಆಕ್ರಮಣವಾಗಿದೆ. ಈ ಘಟನೆ ಗಂಭೀರ ಸ್ವರೂಪದ್ದಾಗಿದೆ. ಎರಡು ವರ್ಷಗಳ ಹಿಂದೆಯೂ ಉಗ್ರರು ಇದೇ ರೀತಿ ಆಕ್ರಮಣ ನಡೆಸಿದ್ದರು. ಇವೆಲ್ಲವನ್ನೂ ಪಾಕಿಸ್ತಾನವೇ ಮಾಡಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ಯಾತ್ರಿಗಳ ಮೇಲೆ ಆಕ್ರಮಣ ಮಾಡುವ ಧೈರ್ಯವನ್ನು ಮಾಡದಿರಲು ಪಾಕಿಸ್ತಾನ ಹಾಗೂ ಕಾಶ್ಮೀರದ ಉಗ್ರರಿಗೆ ಕೇಂದ್ರ ಸರ್ಕಾರ ತಕ್ಕ ಪಾಠ ಕಲಿಸಬೇಕು ಎಂದು ಎಚ್ಚರಿಸಿದರು.
ಸಂಘಟನೆಯ ಪ್ರಮುಖರಾದ ವಾಸಂತಿ ಮುರ್ಡೇಶ್ವರ, ರತ್ನಾ ಭಟ್ಟ, ವಿಜು ಕಾಮತ್, ಸಂಜೀವ ಶೇಟ್, ಚಂದ್ರಶೇಖರ ಮೇಸ್ತ, ವಿವೇಕ ಶೇಟ್, ಮುರಳೀಧರ ಗಾಯತೊಂಡೆ ಇತರರು ಪಾಲ್ಗೊಂಡಿದ್ದರು
Leave a Comment