ಕಾರವಾರ: ಅಲಿಗದ್ದಾ ಕಡಲ ತೀರದಲ್ಲಿ ತ್ಯಾಜ್ಯದ ರಾಶಿ ಸಂಗ್ರಹವಾಗಿದ್ದು, ಸುತ್ತಲಿನ ವಾತಾವರಣ ಹದಗೆಟ್ಟಿದೆ.
ನಗರ ಆರಂಭಕ್ಕೂ ಮುನ್ನವೇ ಕಡಲ ತೀರ ಕಾಣಿಸುತ್ತಿದ್ದು, ಇಲ್ಲಿ ತ್ಯಾಜ್ಯ ತುಂಬಿರುವದರಿಂದ ಪ್ರವಾಸಿಗರು ವಾಕರಿಕೆಯಿಂದ ಮುಂದೆ ಸಂಚರಿಸುವಂತಾಗಿದೆ. ಸುರಿದ ಮಳೆಯಿಂದಾಗಿ ಕಾಡು, ನಗರ ಸೇರಿದಂತೆ ಹಲವು ಪ್ರದೇಶದ ಕಸ-ಕಡ್ಡಿಗಳು ಮಳೆಯ ನೀರಿನೊಂದಿಗೆ ಹರಿದು ಬಂದು ಸಮುದ್ರ ಸೇರಿವೆ. ಸಮುದ್ರವು ತನ್ನ ಬಳಿ ಯಾವುದೇ ಅನವಶ್ಯಕ ವಸ್ತುಗಳನ್ನು ಇಟ್ಟುಕೊಳ್ಳದೆ ಎಲ್ಲವನ್ನು ತೀರಕ್ಕೆ ತಂದು ಹಾಕುತ್ತದೆ. ಈ ರೀತಿ ಸಂಗ್ರಹವಾದ ಕಸವು ಅಲಿಗದ್ದಾದ ಕಡಲ ತೀರದಲ್ಲಿ ರಾಶಿ ರಾಶಿಯಾಗಿ ಬಿದ್ದಿದೆ. ಅಲ್ಲದೇ ಈ ಕಸವು ಸಮುದ್ರದೊಂದಿಗೆ ಸಂಪರ್ಕದಲ್ಲಿರುವ ಕಾರಣ ಸಮುದ್ರದ ನೀರು ಕೂಡ ಕೊಳಕಾಗಿದೆ. ಕಸವು ಸಂಗ್ರಹವಾಗಿ ಕೆಲವು ದಿನಗಳೆ ಕಳೆದರೂ ಇದುವರೆಗೂ ಜಿಲ್ಲಾಡಳಿತ ಅಥವಾ ನಗರಸಭೆ ಈ ಕಡೆ ಗಮನ ಹರಿಸಿ ತೆರವುಗೊಳಿಸಲು ಕ್ರಮ ಕೈಗೊಂಡಿಲ್ಲ.
ಅರಣ್ಯದಲ್ಲಿನ ತರಗೆಲೆಗಳು ಹಾಗೂ ಇತರ ವಸ್ತಗಳನ್ನು ಸೇರಿ ಸಮುದ್ರ ಸೇರಿ ಬಳಿಕ ದಡಕ್ಕೆ ಬಂದಿರುವ ಈ ತ್ಯಾಜ್ಯವು ಫಲವತ್ತಾಗಿದೆ ಎಂದು ಹೇಳಲಾಗುತ್ತಿದೆ. ಈ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಬಳಸಿ ಸಸಿಗಳನ್ನು ಬೆಳೆಸಬಹುದು ಎಂಬುದು ಕೆಲವರ ಅಭಿಪ್ರಾಯವಾಗಿದೆ. ಅಲ್ಲದೆ ಟಾಗೋರ್ ಕಡಲ ತೀರ ಅಭಿವೃದ್ಧಿ ಸಮಿತಿಯು ಖಾಲಿ ಇದ್ದ ಪ್ರದೇಶದಲ್ಲಿ ತೆಂಗಿನ ಸಸಿಗಳನ್ನು ನೆಡುವ ಯೋಜನೆ ಹಾಕಿಕೊಂಡಿದ್ದು ಅವುಗಳನ್ನು ನೆಡುವಾಗ ಈ ತ್ಯಾಜ್ಯವನ್ನು ಗೊಬ್ಬರವಾಗಿ ಬಳಸಿಕೊಳ್ಳಬಹುದಾಗಿದೆ. ಆದರೆ ಈ ತ್ಯಾಜ್ಯದಲ್ಲಿ ಪ್ಲಾಸ್ಟಿಕ್ಗಳು ಸೇರಿರುವುದರಿಂದ ಉಪಯೋಗಿಸುವ ಮುನ್ನ ಅವುಗಳನ್ನು ಬೇರ್ಪಡಿಸಬೇಕಿದೆ.
ರವೀಂದ್ರನಾಥ ಕಡಲ ತೀರದಂತೆಯೇ ಅಲಿಗದ್ದಾ ಕಡಲ ತೀರ ಕೂಡ ಆಕರ್ಷಕ ಪ್ರವಾಸಿ ತಾಣವಾಗಿದೆ. ಆದರೆ ಇಲ್ಲಿನ ಅಸಹ್ಯಕರ ವಾತಾವರಣದಿಂದಾಗಿ ಹೆಚ್ಚಿನ ಪ್ರವಾಸಿಗರೂ ಇಲ್ಲಿ ಬರುವದಿಲ್ಲ. ಪ್ರತಿದಿನ ಬೆಳಿಗ್ಗೆ ಈಜು ಕಲಿಯಲು ಹಲವಾರು ಜನರು ಇಲ್ಲಿ ಬರುತ್ತಾರೆ. ಇನ್ನು ಹಲವರು ವಾಯು ವಿಹಾರಕ್ಕಾಗಿ, ವಾಕಿಂಗ್ಗಾಗಿ ಬರುತ್ತಿರುತ್ತಾರೆ. ಸ್ಥಳೀಯರು ಇಲ್ಲಿಯೇ ಕಬ್ಬಡ್ಡಿ, ವಾಲಿಬಾಲ್ ಕ್ರೀಡೆಗಳನ್ನು ಆಡುತ್ತಾರೆ. ಇಷ್ಟೆಲ್ಲ ಚಟುವಟಿಕೆಗಳು ಇಲ್ಲಿ ನಡೆದರೂ ಸ್ವಚ್ಛತೆಯ ವಿಷಯದಲ್ಲಿ ಈ ಕಡಲ ತೀರವು ತೀರಾ ಹಿಂದುಳಿದಿದೆ. ಬಯಲು ಮಲ ವಿಸರ್ಜನೆಯ ನಿಷೇಧವಿದ್ದರೂ ಅದನ್ನು ಪಾಲಿಸುವವರಿಲ್ಲ ಎಂಬತಾಗಿದೆ.
ವಾಣಿಜ್ಯ ಬಂದರು ಹಾಗೂ ಬಾವಟಿಕಟ್ಟೆ ಇವುಗಳ ಮಧ್ಯ ಇರುವ ಪುಟ್ಟದಾದ ಈ ಅಲಿಗದ್ದಾ ಕಡಲ ತೀರವು ನೈಸರ್ಗಿಕ ಸೌಂದರ್ಯವನ್ನು ಹೊಂದಿದೆ. ನಗರದ ರವೀಂದ್ರನಾಥ ಕಡಲ ತೀರದಲ್ಲಿ ಪ್ರವಾಸೋದ್ಯಮ ಬೆಳೆಸುವ ನಿಟ್ಟಿನಲ್ಲಿ ಅನೇಕ ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿವೆ. ಕಡಲ ತೀರವನ್ನು ಸ್ವಚ್ಛವಾಗಿಡಲು ಕೂಡ ಯೋಗ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಪಕ್ಕದಲ್ಲಿಯೇ ಇರುವ ಅಲಿಗದ್ದಾ ಕಡಲ ತೀರದ ಬಗ್ಗೆ ಕಾಳಜಿ ವಹಿಸಿಲ್ಲ. ಕಡಲತೀರದ ಮುಂಭಾಗದಲ್ಲಿಯೇ ಕೇಂದ್ರ ಸರಕಾರಿ ಕಚೇರಿಗಳು, ಭಾರತೀಯ ಸ್ಟೇಟ್ ಬ್ಯಾಂಕ್, ಸರಕಾರಿ ಶಾಲೆಗಳು ಇವೆ.
ಟಾಗೋರ್ ಕಡಲ ತೀರದ ಸ್ವಚ್ಛತೆಗೆ ಇತ್ತೀಚೆಗೆ ಅತ್ಯಾಧುನಿಕ ಜರ್ಮನ್ ನಿರ್ಮಿತ ಬೀಚ್ ಕ್ಲೀನಿಂಗ್ ಯಂತ್ರವನ್ನು ತರಿಸಲಾಗಿದ್ದು ಕಾರ್ಯ ನಿರ್ವಹಿಸುತ್ತಿದೆ. ಆದರೆ ಈ ಯಂತ್ರವನ್ನು ಕೇವಲ ಟಾಗೋರ್ ಕಡಲ ತೀರದ ಸ್ವಚ್ಛತೆಗೆ ಮಾತ್ರ ಬಳಸಲಾಗುತ್ತಿದೆ. ಪಕ್ಕದಲ್ಲಿರುವ ಅಲಿಗದ್ದಾ ಕಡಲ ತೀರದ ಸ್ವಚ್ಛತೆಗೆ ಈ ಯಂತ್ರವನ್ನು ಬಳಸಲಾಗುತ್ತಿಲ್ಲ. ವಾರಕ್ಕೊಂದು ದಿನವಾದರೂ ಯಂತ್ರದ ಮೂಲಕ ಸ್ವಚ್ಛತೆ ಮಾಡಿದರೆ ಅಲಿಗದ್ದಾ ಕಡಲ ತೀರವನ್ನು ಆಕರ್ಷಕವಾಗಿ ಮಾಡಬಹುದಾಗಿದೆ.
Leave a Comment