ಹಳಿಯಾಳ : ಚುನಾವಣಾ ಪೂರ್ವದಲ್ಲಿ ತಾವು ಹೇಳಿದಂತೆ ಹಳಿಯಾಳವನ್ನು ಗುಡಿಸಲು ಮುಕ್ತ ನಗರವನ್ನಾಗಿ ಮಾಡುವ ಕೆಲಸ ಕಾಂಗ್ರೇಸ್ ಸರ್ಕಾರದಿಂದ ನಡೆದಿದ್ದು ಪ್ರಸ್ತುತ ಹಳಿಯಾಳದಲ್ಲಿ ಎಲ್ಲಿಯೂ ಗುಡಿಸಲು ಮನೆ ಕಾಣಸಿಗುತ್ತಿಲ್ಲ ಆದರೇ ಇನ್ನೂ ಆಶ್ರಯ ಮನೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು ಅರ್ಹತೆಗೆ ತಕ್ಕಂತೆ ಆಶ್ರಯ ಮನೆ ಮಂಜೂರು ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಮಂಗಳವಾರ ಸಚಿವರ ಅಧ್ಯಕ್ಷತೆಯಲ್ಲಿ ಪಟ್ಟಣದ ಪುರಸಭಾ ಭವನದಲ್ಲಿ ನಡೆದ ಆಶ್ರಯ ಸಮೀತಿಯ ಸಭೆಯಲ್ಲಿ ಮಾತನಾಡಿದ ಅವರು ಮನೆಗಳಿಲ್ಲದ ಅರ್ಹ ಫಲಾನುಭವಿಗಳ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ “ ಜಿ ಪ್ಲಸ್ ಟೂ” ಮಾದರಿ ವಸತಿ ಸಮುಚ್ಚಯಗಳನ್ನು ನಿರ್ಮಾಣ ಮಾಡಲು ಕ್ರಮ ಕೈಗೊಂಡಿದ್ದು ಈಗಾಗಲೇ ಸರ್ಕಾರ ಮೊದಲ ಹಂತವಾಗಿ 504 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಿದೆ ಎಂದರು.
ಜಿ.ಪ್ಲಸ್ ಟೂ ನಲ್ಲಿ ಒಂದು ಮನೆಯ ನಿರ್ಮಾಣಕ್ಕೆ ಅಂದಾಜು ಮೊತ್ತ 4.30 ಲಕ್ಷ ರೂ. ಇದ್ದು ಅದರಲ್ಲಿ ಸರ್ಕಾರದಿಂದ 2.70 ಲಕ್ಷ ರೂ.ಸಹಾಯಧನ ಹಾಗೂ ಎಸ್ಸಿಎಸ್ಟಿ ಅವರಿಗೆ 3.30 ಲಕ್ಷ ರೂ. ಸಹಾಯ ಧನ ನಿಡಲಾಗುವುದು. ಅರ್ಹ ಫಲಾನುಭವಿಗಳಿಂದ ಉಳಿದ ಮೊತ್ತವನ್ನು ಭರಣ ಮಾಡಿಕೊಳ್ಳಲಾಗುವುದು ಎಂದ ಸಚಿವರು ಸಾಮಾನ್ಯ ವರ್ಗದವರಿಗೆ 60ಸಾವಿರ ರೂ. ವಂತಿಗೆ ಮತ್ತು 1 ಲಕ್ಷ ಬ್ಯಾಂಕಿನಿಂದ ಸಾಲ ಅದರಂತೆ 50 ಸಾವಿರ ಎಸ್ಸಿ ಎಸ್ಟಿ ಅವರಿಂದ ವಂತಿಗೆ ಉಳಿದ 50 ಸಾವಿರ ರೂ. ಬ್ಯಾಂಕಿನಿಂದ ಸಾಲ ಮಂಜೂರಾತಿಗಾಗಿ ಪುರಸಭೆಯಿಂದ ಕ್ರಮ ವಹಿಸಲಾಗುತ್ತದೆ ಎಂದು ವಿವರಿಸಿದ ಸಚಿವರು ಮನೆ ಕಟ್ಟುವ ಏಜೆನ್ಸಿಗಳು ಗುಣಮಟ್ಟದ ಕಾಮಗಾರಿ ಮಾಡಬೇಕು, ಅವಧಿಯೊಳಗೆ ಕಾಮಗಾರಿ ಮುಗಿಸಲೆಬೇಕು ನಿಗದಿ ಪಡಿಸಿದ 4.30 ಲಕ್ಷ ರೂಗಳಿಗೆ ಕಾಮಗಾರಿ ಸಿಮಿತವಾಗಿರಬೇಕೆಂದು ಸಚಿವರು ಜಿಲ್ಲಾಧಿಕಾರಿಯವರಿಗೆ ದೂರವಾಣಿ ಮೂಲಕ ಸೂಚಿಸಿದರು.
ಮುಖ್ಯಾಧಿಕಾರಿ ಕೇಶವ ಚೌಗಲೆ ಮಾತನಾಡಿ ಮಂಜೂರಾದ 504 ಜಿಪ್ಲಸ್ ಟೂ ಆಶ್ರಯ ಮನೆಗಾಗಿ ಈಗಾಲೇ 170 ಫಲಾನುಭವಿಗಳ ವಂತಿಗೆ ಹಣವನ್ನು ಭರಣ ಮಾಡಿದ್ದಾರೆ. ಇನ್ನೂ 30 ಫಲಾನುಭವಿಗಳು ವಂತಿಗೆ ಭರಣ ಮಾಡಲು ಬಂದಿದ್ದು ಸದ್ಯದಲ್ಲಿ 204 ಮನೆ ನಿರ್ಮಾಣ ಮಾಡಲಾಗುವುದು ಎಂದರು.
ಸಭೆಯಲ್ಲಿ ಪುರಸಭೆ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಉಪಾಧ್ಯಕ್ಷ ಅರುಣ ಬೊಬಾಟಿ, ಸ್ಥಾಯಿ ಕಮೀಟಿ ಗಾಯತ್ರಿ ನಿಲಜಕರ, ಆಶ್ರಯ ಸಮಿತಿ ಸದಸ್ಯರಾದ ಗುಲಾಬಷಾ ಲತಿಫನವರ, ವಿಮಲಾಬಾಯಿ ವಡ್ಡರ, ಜೆಡಿ ಗಂಗಾಧರ, ಪರಶುರಾಮ ಹರ್ಲಿ, ತಹಶೀಲ್ದಾರ್ ವಿದ್ಯಾಧರ ಗುಳಗುಳಿ, ಮುಖ್ಯಾಧಿಕಾರಿ ಕೇಶವ ಚೌಗಲೆ, ಆಶ್ರಯ ಗುಮಾಸ್ತ ರಾಮಚಂದ್ರ ಮೊಹಿತೆ, ಇಂಜಿನಿಯರ್ ಹರಿಶ್, ಪುರಸಭೆ ಸದಸ್ಯರಾದ ಶಾರದಾ ಕಿತ್ತೂರ, ಸುರೇಶ ತಳವಾರ ಇದ್ದರು.
Leave a Comment