ಸಿದ್ದಾಪುರ ತಾಲೂಕಿನಲ್ಲಿ ಮೀನು ಮಾರುಕಟ್ಟೆ ಇಲ್ಲದ ಕಾರಣ ಮೀನುಗಾರ ಸಮುದಾಯದವರಿಗೆ ಅನ್ಯಾಯವಾಗುತ್ತಿದ್ದು ಇದನ್ನು ಸರಿಪಡಿಸುವಂತೆ ಆಗ್ರಹಿಸಿ ಅಲ್ಲಿನ ಜನ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಸಿದ್ದಾಪುರದ ರವೀಂದ್ರ ನಗರ ಹಾಗೂ ಇನ್ನಿತರ ಕಡೆಗಳಲ್ಲಿ ಅಂಬಿಗ ಸಮಾಜದವರು ವಾಸಿಸುತ್ತಿದ್ದು, ಬಹುತೇಕರು ಮೀನುಗಾರಿಕೆ ಹಾಗೂ ಮೀನು ಮಾರಾಟವನ್ನು ನಂಬಿದ್ದಾರೆ. ಆದರೆ, ತಾಲೂಕಿನಲ್ಲಿ ಮೀನು ಮಾರಾಟ ಮಾಡಲು ಸೂಕ್ತ ಸ್ಥಳವಿಲ್ಲ. ಸರ್ಕಾರದಿಂದಲೂ ಮೀನು ಮಾರಾಟಕ್ಕಾಗಿ ಮಾರುಕಟ್ಟೆ ಒದಗಿಸಿಲ್ಲ. ಅಮೀನಾ ಸರ್ಕಲ್ ಬಳಿ ಇರುವ ಮೀನು ಮಾರುಕಟ್ಟೆಯಲ್ಲಿ ಅಂಬಿಗ ಸಮುದಾಯದವರಿಗೆ ಅವಕಾಶ ಕೊಡುತ್ತಿಲ್ಲ. ಪ್ರತ್ಯೇಕ ಮೀನು ಮಾರುಕಟ್ಟೆಯೂ ಅಂಬಿಗರಿಗಿಲ್ಲ. ಹೀಗಾಗಿ ಅಂಬಿಗ ಸಮಾಜಕ್ಕೆ ಅನ್ಯಾಯವಾಗಿದ್ದು, ಮೀನುಗಾರಿಕಾ ಇಲಾಖೆಯಿಂದ ನೀಡುವ ಸೌಲಭ್ಯಗಳನ್ನು ಕೂಡ ಮೀನುಗಾರರಿಗೆ ವಿತರಿಸದೇ ಇತರರಿಗೆ ನೀಡಲಾಗುತ್ತಿದೆ ಎಂದು ದೂರಿದರು. ಸಿದ್ದಾಪುರ ಪಟ್ಟಣ ಪಂಚಾಯತ ಕೂಡ ನೈಜ ಮೀನುಗಾರರನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದರು. ಕೂಡಲೇ ಸಿದ್ದಾಪುರದಲ್ಲಿ ಮೀನು ಮಾರುಕಟ್ಟೆ ನಿರ್ಮಿಸುವ ನಿರ್ಣಯ ಕೈಗೊಂಡು ತಮ್ಮ ಬೇಡಿಕೆ ಈಡೇರಿಸಿಕೊಡಬೇಕು ಎಂದು ಆಗ್ರಹಿಸಿದರು. ಮೀನುಗಾರಿಕಾ ಫೇಡರೇಶನ್ ಅಧ್ಯಕ್ಷ ಗಣಪತಿ ಮಾಂಗ್ರೆ ಹಾಗೂ ಕೃಷ್ಣ ಲೋಕೇಶ ಅಂಬಿಗ ಈ ಕುರಿತು ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನಗೆ ಮನವಿ ಸಲ್ಲಿಸಿದರು.
Leave a Comment