ಹೊನ್ನಾವರ:
ತನ್ನ ಹಿತ್ತಲಿನಲ್ಲಿ ದೇವರಿಗೆ ಹೂ ಕೊಯ್ಯಲು ಹೋದ ವೇಳೆ ವಿದ್ಯುತ್ ತಂತಿ ತಗುಲಿ ವೃದ್ಧರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಹಳದೀಪುರ ಗ್ರಾ.ಪಂ ವ್ಯಾಪ್ತಿಯ ಅಗ್ರಹಾರದಲ್ಲಿ ಸಂಭವಿಸಿದೆ.
ಅಗ್ರಹಾರ ನಿವಾಸಿ ದೇವಿದಾಸ ಗಜಾನನ ಕಲ್ಯಾಣಕರ (76) ಮೃತ ವ್ಯಕ್ತಿ. ಇವರು ಮನೆಯ ಹಿತ್ತಲಲ್ಲಿ ಹೂ ಕೊಯ್ಯಲು ಹೋದ ಸಂದರ್ಭದಲ್ಲಿ ಪ್ರವಹಿಸುತ್ತಿದ್ದ ವಿದ್ಯುತ್ ತಂತಿ ತುಂಡಾಗಿ ನೆಲದಲ್ಲಿ ಹರಿದುಬಿದ್ದಿತ್ತು. ಈ ವೇಳೆ ಹೂ ಕೊಯ್ಯುವಾಗ ವಿದ್ಯುತ್ ಸ್ಪರ್ಶವಾಗಿ ಶಾಖ್ ಹೊಡೆದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
————-
ಘಟನೆ ಹಿನ್ನೆಲೆಯಲ್ಲಿ ಶಾಸಕಿ ಶಾರದಾ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿನೆ ನಡೆಸಿ, ಮೃತರ ಕುಟುಂಬಕ್ಕೆ 6 ಸಾವಿರ ರೂ. ಗಳ ವೈಯಕ್ತಿಕ ಧನಸಹಾಯ ನೀಡಿ ಸಾಂತ್ವನ ಹೇಳಿದರು. ಈ ವೇಳೆ ಸಾರ್ವಜನಿಕರು ಹೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷ್ಯತನದ ಆರೋಪಗಳನ್ನು ಶಾಸಕರೆದುರು ಬಿಚ್ಚಿಟ್ಟರು. ಹಳದೀಪರ ವ್ಯಾಪ್ತಿಯಲ್ಲಿ ಸರಿಯಾಗಿ ಜಂಗಲ್ ಕಟಿಂಗ್ ಮಾಡುತ್ತಿಲ್ಲ. ಹಳೆಯ ವಿದ್ಯುತ್ ತಂತಿಗಳನ್ನು ಬದಲಿಸದೇ ಇರುವುದರಿಂದ ಮಳೆ ನೀರಿಗೆ ತಂತಿಗಳು ತುಂಡು-ತುಂಡಾಗಿ ಬೀಳುತ್ತಿದೆ. ತುಂಡಾದ ವಿದ್ಯುತ್ ತಂತಿಗಳನ್ನು ಮರುಜೋಡಣೆ ಮಾಡಿ ಜನ-ಜಾನುವಾರುಗಳು ಅಪಾಯಕ್ಕೆ ಸಿಲುಕುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
±ಮೃತರ ಕುಟುಂಬಕ್ಕೆ ಬಿಜೆಪಿ ಮುಖಂಡ ಸೂರಜ ನಾಯ್ಕ ಸೋನಿ, ಮಾಜಿ ಶಾಸಕ ದಿನಕರ ಶೆಟ್ಟಿ, ಜಿ.ಪಂ ಸದಸ್ಯ ಶಿವಾನಂದ ಕಡತೋಕಾ ಹಾಗೂ ಸ್ಥಳೀಯ ಗ್ರಾ.ಪಂ ಅಧ್ಯಕ್ಷೆ ಗುಣಮಾಲಾ ಇಂದ್ರ ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
Leave a Comment