ಕಾರವಾರ: ದುಡಿಯುವ ಕೈಗಳಿಗೆ ಕೆಲಸ ಕೊಡುವ ಉದ್ಯೋಗ ಖಾತರಿ ಯೋಜನೆಯಲ್ಲಿ ರಾಜ್ಯದ 30 ಜಿಲ್ಲೆಯ ಗ್ರಾಮ ಪಂಚಾಯತಗಳಲ್ಲಿ ಕೋಟ್ಯಾಂತರ ರೂ.ಗಳ ಅವ್ಯವಹಾರವ ನಡೆದಿರುವ ಬಗ್ಗೆ ಸಾಮಾಜಿಕ ಲೆಕ್ಕ ಪರಿಶೋಧನಾ ವಿಭಾಗ ಸರಕಾರಕ್ಕೆ ವರದಿ ನೀಡಿದೆ. ಈ ಕುರಿತಂತೆ ಪಂ.ರಾಜ್ ಇಲಾಖೆಯು ಅದರ ವಸೂಲಾತಿಗೆ ಆದೇಶಿಸಿದರೂ ಜಿಲ್ಲೆಯ ಅಧಿಕಾರಿಗಳು ಖ್ಯಾರೇ ಎನ್ನುತ್ತಿಲ್ಲ.
ಪಂ.ರಾಜ್ ಇಲಾಖೆಯ ಅಡಿಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನಾ ವಿಭಾಗವು 2011 ರಿಂದ ಕಾರ್ಯನಿರ್ವಹಿಸುತ್ತಿದ್ದು, ವರ್ಷದ ಎರಡು ಅವಧಿಯಲ್ಲಿ ಗ್ರಾಮ ಪಂಚಾಯಗಳಲ್ಲಿ ಮನರೆಗಾಯೋಜನೆಯಲ್ಲಿ ನಿಯಮಬಾಹೀರವಾಗಿ ಕಾಮಗಾರಿ, ಸತ್ತವರ ಹೆಸರಲ್ಲಿ ಹಣ ಪಾವತಿ, ಕಾಮಗಾರಿ ನಿರ್ವಹಿಸದೆ ಹಣ ಪಾವತಿ, ಅವಕಾಶವಿರದ ಕಾಮಗಾರಿ, ಬೇರೆ ಯೋಜನೆಯ ಕಾಮಗಾರಿಗೆ ಹಣ ಪಾವತಿ ಇತ್ಯಾದಿ ಮಾಡಿರುವ ಬಗ್ಗೆ ಗ್ರಾ.ಪಂಗಳಲ್ಲಿಯ ದಾಖಲೆ ಮತ್ತು ಸ್ಥಳ ಭೇಟಿ ಪರಿಶೀಲನೆ ನಡೆಸಿ ವರದಿಯನ್ನು ಸಾಮಾಜಿಕ ಪರಿಶೋಧನಾ ತಂಡವು ಸರಕಾರಕ್ಕೆ ನಿಡುತ್ತದೆ.
ಈ ಕುರಿತಂತೆ 2013-14 ಮತ್ತು 2014-15 ನೇ ಸಾಲಿನಲ್ಲಿ ರಾಜ್ಯದ 30 ಜಿಲ್ಲೆಯ ಗ್ರಾ.ಪಂಗಳಲ್ಲಿ ನಡೆದಿರುವ ಅವ್ಯವಹಾರದ ಮೊತ್ತವನ್ನು ವಸೂಲಾತಿ ಮಾಡುವಂತೆ ಎಲ್ಲ ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕ್ರಮವಹಿಸಲು ಕಟ್ಟು ನಿಟ್ಟಿನ ಸೂಚನೆಯನ್ನು ಲಿಖಿತ ಸುತ್ತೋಲೆಯ ಮೂಲಕ ಮೇಲಿಂದ ಮೇಲೆ ಪಂ.ರಾಜ್ ಇಲಾಖೆಯ ಕಾರ್ಯದರ್ಶಿ ಮತ್ತು ಆಯುಕ್ತರು ರವಾನಿಸಿದ್ದಾರೆ. 2013-14 ನೇ ಸಾಲಿನಲ್ಲಿ ವಸೂಲಾತಿಗೆ ಸೂಚಿಸಿರುವ ಮೊತ್ತವು ರೂ. 2647.30 ಲಕ್ಷರೂ. ಆಗಿದೆ. ಇದರಲ್ಲಿ ಅತಿ ಹೆಚ್ಚು ಅವ್ಯವಹಾರ ನಡೆದಿರುವದು ದಾವಣೆಗೆರೆ ಜಿಲ್ಲೆಯಲ್ಲಿ (823.32 ಲಕ್ಷರೂ). ನಂತರದಲ್ಲಿ ಮಂಡ್ಯ (.462.69 ಲಕ್ಷರೂ,) ಕೊಪ್ಪಳ (.66.53 ಲಕ್ಷರೂ), ತುಮಕೂರು (ರೂ.74.35 ಲಕ್ಷರೂ), ಧಾರವಾಡ (41.77 ಲಕ್ಷರೂ) ಹಾವೇರಿ (24.85ಲಕ್ಷರೂ) ಗದಗ (18.56 ಲಕ್ಷರೂ) ರಾಯಚೂರು (28.36 ಲಕ್ಷರೂ) ಬೆಂಗಳೂರು ಗ್ರಾ.(12.59 ಲಕ್ಷರೂ) ಆದರೆ ಈ ಪೈಕಿ ಕೇವಲ 12.21 ಲಕ್ಷರೂ.ಗಳನ್ನು ಮಾತ್ರ ಆಯಾ ಜಿ.ಪಂಗಳು ವಸೂಲಾತಿ ಮಾಡಿ ಸರ್ಕಾರಕ್ಕೆ ಭರಣ ಮಾಡಿವೆ.
2014-15 ನೇ ಸಾಲಿನಲ್ಲಿ ಮನರೆಗಾ ದಲ್ಲಿ ಒಟ್ಟು 6802.51 ಲಕ್ಷರೂ.ಗಳನ್ನು ವಸೂಲಾತಿಗೆ ಸೂಚಿಸಲಾಗಿದೆ. ಇದರಲ್ಲಿ ಚಿತ್ರದುರ್ಗ ಜಿಲ್ಲೆ (2640 ಲಕ್ಷರೂ.), ಶಿವಮೊಗ್ಗ (1148.44 ಲಕ್ಷರೂ), ಧಾರವಾಡ (906.96 ಲಕ್ಷರೂ) ಮಂಡ್ಯ (624.88 ಲಕ್ಷರೂ.)ರಾಮನಗರ (208.05 ಲಕ್ಷರೂ.) ಕೊಪ್ಪಳ (186.79 ಲಕ್ಷರೂ) ತುಮಕೂರು (121.98 ಲಕ್ಷರೂ), ರಾಯಚೂರು(62.40 ಲಕ್ಷರೂ) ಗದಗ(68.54 ಲಕ್ಷರೂ), ಚಾಮರಾಜ ನಗರ (64.53ಲಕ್ಷರೂ) ಬೀದರ (144.10 ಲಕ್ಷರೂ), ಉತ್ತರ ಕನ್ನಡ (25.39 ಲಕ್ಷರೂ) ಅವ್ಯವಹಾರಗಳು ನಡದಿದೆ. ಇದರಲ್ಲಿ ಕೇವಲ 15.87 ಲಕ್ಷರೂ.ಗಳನ್ನು ಮಾತ್ರ ಆಯಾ ಜಿಲ್ಲಾ ಪಂಚಾಯತಗಳು ವಸೂಲಾತಿ ಮಾಡಿ ಸರಕಾರಕ್ಕೆ ಭರಣ ಮಾಡಿದೆ.
ಈ ಬಗ್ಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಮತ್ತು ಪಂ.ರಾಜ್ ಇಲಾಖೆಯ ಯೋಜನೆಯ ಆಯುಕ್ತರು ಎಲ್ಲ ಜಿ.ಪಂಗಳಿಗೆ 2013-14 ಮತ್ತು 2014-15 ರಲ್ಲಿ ಸಾಮಾಜಿಕ ಪರಿಶೋಧನಾ ವಿಭಾಗವು ನೀಡಿದ ಆಕ್ಷೆಪಣೆ ಮತ್ತು ವಸೂಲಾತಿಗೆ ಸಂಬಂಧಿಸಿದಂತೆ ಅನುಪಾಲನಾ ವರದಿಯನ್ನು ಕೇಳಿದ್ದಾರೆ. ಕೋಟ್ಯಾಂತರ ರೂ.ಗಳ ಅವ್ಯವಹಾರವು ಯೋಜನೆಯಲ್ಲಿ ನಡೆದಿರುವದು ಬೆಳಕಿಗೆ ಬಂದಿದ್ದರೂ ಕೂಡ ಇದರ ವಸೂಲಾತಿಗೆ ಜಿ.ಪಂ ಮುಖ್ಯಕಾರ್ಯನಿರ್ವಹಕ ಅಧಿಕಾರಿಗಳು ಕ್ರಮವಹಿಸದೇ ಇರುವದರ ಬಗ್ಗೆ ಗ್ರಾಮೀಣಾಭಿವೃದ್ದಿ ಮತ್ತು ಪಂ.ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎನ್.ನಾಗಾಂಬೀಕಾ ದೇವಿ ಮತ್ತು ಮನರೆಗಾ ಯೋಜನೆಯ ಅಂದಿನ ಆಯುಕ್ತರಾಗಿದ್ದ ವಿಪುಲ್ ಬನ್ಸಾಲ್ ಅಧಿಕಾರಿಗಳ ಕರ್ತವ್ಯಲೋಪದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೋಟಿಸ್ನ್ನು ನೀಡಿದ್ದಾರೆ.
Leave a Comment