ಹಳಿಯಾಳ :
ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣಕ್ಕೆ ಪಾಲಿಟೆಕ್ನಿಕ್ ಕಾಲೇಜು (ತಾಂತ್ರಿಕ ಮಹಾವಿದ್ಯಾಲಯ) ಮಂಜೂರಿ ಮಾಡಲಾಗಿದ್ದು ಇದಕ್ಕಾಗಿ 8 ಕೋಟಿ ರೂ. ಸರ್ಕಾರ ಮಂಜೂರಿ ಮಾಡಿದ್ದು ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು ಕಾಲೇಜು ನಿರ್ಮಾಣಕ್ಕೆ ಸೂಕ್ತ ನಿವೇಶನದ ಹುಡುಕಾಟದಲ್ಲಿದ್ದು ಮುಂದಿನ ಕೇಲವೆ ದಿನಗಳಲ್ಲಿ ನಿವೇಶನ ಪಡೆದು ಕಾಲೇಜ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಇಲ್ಲಿಯ ಜನರ ದಶಕಗಳ ಆಶಯವನ್ನು ಪೂರೈಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಇಲ್ಲಿಯ ರುಡಸೆಟ್ನ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ರಾಜ್ಯ ಕಾಂಗ್ರೇಸ್ ಸರ್ಕಾರ ಅಭಿವೃದ್ದಿಯ ಪರ್ವವನ್ನೆ ಮಾಡಿದ್ದು ಜನರು ಕೇಳದೆಯೇ ಅಭಿವೃದ್ದಿಗೆ ಕೊಟ್ಯಂತರ ರೂ. ಹಣ ನೀರಿನಂತೆ ವ್ಯಯಿಸಲಾಗುತ್ತಿದ್ದು ಜನರು ಅರಿಯಬೇಕಾಗಿದ್ದು ಅಭಿವೃದ್ದಿಗೆ ಸಹಕಾರ ನೀಡುವಂತೆ ಕರೆ ನೀಡಿದರು.
ಕ್ಷೇತ್ರದ ಅಭಿವೃದ್ದಿಗಾಗಿ ಅನುದಾನವನ್ನು ಹೇರಳವಾಗಿ ನೀಡಲಾಗುತ್ತಿದೆ. ಸಮಗ್ರ ಅಭಿವೃದ್ದಿಯೇ ತಮ್ಮ ಮಂತ್ರವಾಗಿದ್ದು ಸಾರ್ವಜನಿಕರು ಅಭಿವೃದ್ದಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕಾಗಿದೆ. ಕೇವಲ ಒಂದು ತಿಂಗಳ ಅವಧಿಯಲ್ಲಿ ಒಟ್ಟೂ 50 ಕೋಟಿಗೂ ಅಧಿಕ ಅನುದಾನವನ್ನು ವಿವಿಧ ಕಾಮಗಾರಿಗಳಿಗಾಗಿ ಮಂಜೂರು ಮಾಡಲಾಗಿದೆ, ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದ್ದು ಖೇಲೋ ಇಂಡಿಯಾ ಯೋಜನೆಯಲ್ಲಿ ಹಳಿಯಾಳದಲ್ಲಿ ವಿವಿದ್ದೋದ್ದೇಶ ಕ್ರೀಡಾ ಸಮುದಾಯ ಭವನದ ನಿರ್ಮಾಣಕ್ಕಾಗಿ 7.50 ಕೋಟಿ ರೂಗಳಿಗೆ ಮಂಜೂರಾತಿ ನೀಡಲಾಗಿದೆ. ಕುಡಿಯುವ ನೀರಿನ ಯೋಜನೆಗಾಗಿ 1 ಕೋಟಿ ರೂ ಅನುದಾನವು ಮಂಜೂರಾಗಿದ್ದು ಜೋಯಿಡಾ ಮತ್ತು ಹಳಿಯಾಳ ತಾಲೂಕುಗಳಲ್ಲಿ ವಿಶೇಷ ವರ್ಗಗಳಿಗಾಗಿ ದೇವರಾಜು ಅರಸು ನಿಗಮದಿಂದ 181 ಮನೆಗಳನ್ನು ಮಂಜೂರಿ ನೀಡಲಾಗಿದ್ದು ಅರ್ಹ ಬಡವರಿಗೆ ಮನೆಗಳನ್ನು ಹಂಚಿಕೆ ಮಾಡಲಾಗುವುದೆಂದರು.
ಪಟ್ಟಣದ ಗುತ್ತೀಗೇರಿಯಲ್ಲಿರುವ ಹಿಂದೂ ರುದ್ರಭೂಮಿಯ ಅಭಿವೃದ್ದಿಗಾಗಿ 40 ಲಕ್ಷ ರೂಗಳನ್ನು ಮಂಜೂರಿ ಮಾಡಲಾಗಿದೆ. ಕ್ರಿಶ್ಚಿಯನ್ ಭಾಂದವರ ಚರ್ಚಗಳಾದ ಲೇಡಿ ಆಫ್ ಮಿರಾಕಲ್ ಚರ್ಚ ಮತ್ತು ಸೆಂಟ್ ಪ್ರಾನ್ಸಿಸ್ ಸೇವೆರಾ ಚರ್ಚ, ದಾಂಡೇಲಿಯ ಸಿ.ಎಸ್.ಐ ಚರ್ಚ ಮತ್ತು ಹೊನ್ನಾವರದ ಹೊಲಿ ಕ್ರಾಸ್ ಚರ್ಚಗಳ ಅಭಿವೃದ್ದಿಗಳಿಗಾಗಿ ಒಟ್ಟೂ 57 ಲಕ್ಷ ರೂ, ಹಳಿಯಾಳ – ತೇರಗಾಂವ ನಡುವಿನ ರಸ್ತೆಯ ಸೇತುವೆಯ ದುರಸ್ಥಿಗಾಗಿ 16 ಲಕ್ಷ ರೂ ಮಂಜೂರಾಗಿದೆ.
ದಾಂಡೇಲಿಯ ಬೈಲಪಾರ್ ದಲ್ಲಿ 217, ಸುಭಾಸ ನಗರದಲ್ಲಿ 70 , ಹಳಿಯಾಳದ ಯಲ್ಲಾಪೂರ ರಸ್ತೆಯಲ್ಲಿ 155 ಮತ್ತು ಹೂಸುರುಗಲ್ಲಿಯಲ್ಲಿ 37 ಸೇರಿದಂತೆ ಇಂದಿರಾನಗರದಲ್ಲಿ 21 ಕೊಳಚೆ ನಿರ್ಮೂಲನಾ ಮಂಡಳಿಯಿಂದ ಒಟ್ಟೂ 500 ಮನೆಗಳ ನಿರ್ಮಾಣಕ್ಕಾಗಿ 26 ಕೋಟಿ ರೂ ಅನುದಾನ ನೀಡಲಾಗಿದೆ ಎಂದು ಸಚಿವ ದೇಶಪಾಂಡೆ ಸೃಷ್ಟ ಪಡಿಸಿದರು. ವಿವಿಧ ಕೈಗಾರಿಕೆಗಳ ಸಿ.ಎಸ್.ಆರ್ ಅನುದಾನದಲ್ಲಿ ಜಿಲ್ಲೆಯ ಎಲ್ಲಾ ಕ್ರೀಡಾ ಮತ್ತು ಇನ್ನಿತರ ಹಾಸ್ಟೇಲ್ಗಳಿಗೆ 7500 ಬೆಡ್ ಸೀಟ್ಗಳನ್ನು ವಿತರಿಸಲಾಗುವುದೆಂದರು.
ಗಂಗಾ ಕಲ್ಯಾಣ ಯೋಜನೆಯಲ್ಲಿ 300 ಎಸ್ಟಿ ಕುಟುಂಬಗಳಿಗೆ ಉಚಿತವಾಗಿ ಬೋರವೆಲ್ಗಳನ್ನು ಕೊರೆಯಿಸಲು ಅನುದಾನ ಮಂಜೂರಿ ನೀಡಲಾಗಿದ್ದು ಜೊತೆಗೆ ಪ್ರತಿಯೊಂದು ಸ್ವ ಸಹಾಯ ಗುಂಪುಗಳಿಗೆ ತಲಾ 1 ಲಕ್ಷ ರೂ ನೀಡಲು ಮುಂದಾಗಿದ್ದೇವೆ. ಅತೀ ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಗೆ ಚಾಲನೆ ನೀಡುವುದರ ಮೂಲಕ ಬಡ ಅರ್ಹ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ಮತ್ತು ಒಲೆಗಳನ್ನು ವಿತರಿಲಾಗುವುದೆಂದ ಅವರು ಅಭಿವೃದ್ದಿಯನ್ನು ಜನರು ಗಮನಿಸುವುದರ ಮೂಲಕ ಅಭಿವೃದ್ದಿಗೆ ತಮ್ಮ ಸಹಕಾರ ನೀಡಬೇಕಾಗಿದೆ ಎಂದರು.
Leave a Comment