ಹಳಿಯಾಳ : ಮಕ್ಕಳು ದೇಶದ ಆಸ್ತಿಯಾಗಿದ್ದು ಅವರ ಆರೋಗ್ಯ ಕುರಿತು ಪಾಲಕರು ಹಾಗೂ ಶಿಕ್ಷಕರು ಹೆಚ್ಚಿನ ಜವಾಬ್ದಾರಿ ವಹಿಸಿ ಮಕ್ಕಳಿಗೆ ಉತ್ತಮ ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ಅರಿವು ಮೂಡಿಸುವುದರೊಂದಿಗೆ ರೋಗಮುಕ್ತ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು.
ಗುರುವಾರ ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಇಲಾಖೆಯವರು ಆಯೋಜಿಸಿದ್ದ ಜಿಲ್ಲಾ ಮಟ್ಟದ ರಾಷ್ಟ್ರೀಯ ಜಂತು ಹುಳು ನಿವಾರಣೆ ದಿನ ಆಚರಣೆಯಲ್ಲಿ ಮಕ್ಕಳಿಗೆ ಜಂತು ಹುಳು ನಿವಾರಣಾ ಜೌಷಧಿಯನ್ನು ನೀಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಸಚಿವರು ಮಾತನಾಡಿದರು.
ವೈಯಕ್ತಿಕ ಶುಚಿತ್ವ ಮತ್ತು ಪರಿಸರದ ಶುಚಿತ್ವದ ಕೊರತೆಯಿಂದಾಗಿ ಮಕ್ಕಳು ಜಂತುಹುಳು ಬಾಧೆಗೆ ಒಳಗಾಗಿ ಅನೇಕ ದೈಹಿಕ ಮತ್ತು ಮಾನಸಿಕ ಅನಾರೋಗ್ಯಕ್ಕೆ ತುತ್ತಾಗುವ ಸಂಭವವಿರುತ್ತದೆ. ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ನಿವಾರಿಸಲು ಮತ್ತು ಒಳ್ಳೆಯ ಆರೋಗ್ಯವನ್ನು ಪಡೆಯಲು ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಎಲ್ಲಾ ವಿಧ್ಯಾರ್ಥಿಗಳು ಜಂತು ನಿವಾರಣಾ ಮಾತ್ರೆಯನ್ನು ತೆಗೆದುಕೊಂಡು ಉತ್ತಮ ಆರೋಗ್ಯಕ್ಕೆ ಮುಂದಾಗಬೇಕೆಂದು ಕರೆ ನೀಡಿದ ಅವರು ತಮ್ಮ ಮನೆ ಮತ್ತು ಶಾಲೆಗಳ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿಡಲು ಮಕ್ಕಳು ಮುಂದಾಗಬೇಕು. ಬಹಳ ಕಾಲದಿಂದ ಹಲವು ಹಳೆ ರೋಗಗಳು ಇನ್ನುವರೆಗೂ ಜೀವಂತವಾಗಿದ್ದು ಅವುಗಳ ನಿವಾರಣೆ ಸರಕಾರವು ಹಲವಾರು ಯೋಜನೆಗಳನ್ನು ರೂಪಿಸುವುದರ ಮೂಲಕ ರೋಗಮುಕ್ತ ಸಮಾಜದ ನಿರ್ಮಾಣಕ್ಕೆ ಕಂಕಣ ಬದ್ದವಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ|| ಜಿ.ಎನ್.ಅಶೋಕಕುಮಾರ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ ವರ್ಷದಲ್ಲಿ ಎರಡು ಸಲ ಫೆಬ್ರವರಿ 10 ಮತ್ತು ಅಗಸ್ಟ 10 ರಂದು 1 ವರ್ಷದಿಂದ 19 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಜಂತು ನಿವಾರಣಾ ಮಾತ್ರೆ ನೀಡುವುದರ ಮುಖಾಂತರ ಮಕ್ಕಳ ಅಪೌಷ್ಠಿಕತೆ, ರಕ್ತಹೀನತೆ, ಮತ್ತು ಅನೇಕ ಆರೋಗ್ಯದ ಸಮಸ್ಯೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 3.42.260 ಮಕ್ಕಳಿಗೆ ಜಂತು ನಿವಾರಣಾ ಮಾತ್ರೆ ನೀಡುವ ಗುರಿಯನ್ನು ಹೊಂದಲಾಗಿದೆ ಎಂದರು.
ಪುರಸಭೆ ಅಧ್ಯಕ್ಷ ಉಮೇಶ ಬೋಳಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರಅಹ್ಮದ ಮುಲ್ಲಾ, ಪುರಸಭೆಯ ಸದಸ್ಯರಾದ ಸತ್ಯಜೀತ ಗಿರಿ, ಮಾಲಾ ಬ್ರಗಾಂಜಾ, ತಾಲೂಕಾ ಪಂಚಾಯತ ಅಧ್ಯಕ್ಷರಾದ ರೀಟಾ ಫ್ರಾನ್ಸಿಸ ಸಿದ್ದಿ, ತಹಶಿಲ್ದಾರ ವಿ.ಜಿ ಗುಳಗುಳೆ, ಕಾರ್ಯನಿವಾರ್ಹಕ ಅಧಿಕಾರಿ ಲಕ್ಷ್ಮಣರಾವ ಎಕ್ಕಂಡಿ, ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ, ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ|| ಮಹಾಬಲೇಶ್ವರ ಹೆಗಡೆ, ಡಾ|| ಸಮೀರ ಸಾನು, ಶಿಶು ಅಭಿವೃದ್ದಿ ಯೋಜನಾಧಿಕಾರಿ ಶಾರದಾ ಮರಾಠೆ ಹಾಗೂ ಶಾಲಾ ಸುಧಾರಣಾ ಸಮಿತಿಯ ಉಪಾಧ್ಯಕ್ಷ ಮಂಜುನಾಥ ಮೂಳೆ ಇದ್ದರು.
Leave a Comment