ಕಾರವಾರ: ಅಗಸ್ಟ್ 15ರ ಸ್ಪಾತಂತ್ರ್ಯೋತ್ಸವ ದಿನಾಚರಣೆ ವೇಳೆ ಪ್ಲಾಸಿಕ್ ಧ್ವಜದ ಮಾರಾಟ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿಯ ಸದಸ್ಯರು ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನಗೆ ಮನವಿ ಸಲ್ಲಿಸಿದರು.
ಸ್ಪಾತಂತ್ರ್ಯೋತ್ಸವ ದಿನಾಚರಣೆಯನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಈ ಸಂಭ್ರಮದಲ್ಲಿ ಬಳಸಿದ ಪ್ಲಾಸ್ಟಿಕ್, ಕಾಗದದ ರಾಷ್ಟ್ರಧ್ವಜವನ್ನು ಎಲ್ಲೆಂದರಲ್ಲಿ ಬಿಸಾಡಲಾಗುತ್ತದೆ. ಪ್ಲಾಸ್ಟಿಕ್ ಬೇಗ ನಾಶವಾಗದ ಕಾರಣ ಕೆಲ ದಿನಗಳವರೆಗೆ ಚರಂಡಿ, ರಸ್ತೆಯ ಇಕ್ಕೆಗಳಲ್ಲಿ ಬಿದ್ದಿರುತ್ತದೆ. ಇದರಿಂದ ರಾಷ್ಟ್ರಧ್ವಜಕ್ಕೆ ನಾವು ಅವಮಾನ ಮಾಡಿದಂತಾಗುತ್ತಿದೆ ಎಂದರು. ಈ ಬಗ್ಗೆ ಹಿಂದು ಜನಜಾಗೃತಿ ಸಮಿತಿಯು ಕಳೆದ 15 ವರ್ಷಗಳಿಂದ ರಾಷ್ಟ್ರಧ್ವಜದ ಗೌರ ಕಾಪಾಡುವುದರ ಬಗ್ಗೆ ಅಭಿಯಾನವನ್ನು ನಡೆಸುತ್ತಿದೆ. ಅಲ್ಲದೆ ರಾಷ್ಟ್ರಧ್ವಜವನ್ನು ಪ್ಲಾಸ್ಟಿಕ್ನಿಂದ ತಯಾರಿಸುವುದನ್ನು ಮತ್ತು ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಇಷ್ಟಾದರು ಎಲ್ಲ ಭಾಗಗಳಲ್ಲಿ ಪ್ಲಾಸ್ಟಿಕ್ ಧ್ವಜದ ಮಾರಾಟ ಹಾಗೂ ಬಳಕೆ ನಡೆಯುತ್ತಿದೆ. ಆದ್ದರಿಂದ ಕೂಡಲೇ ಜಿಲ್ಲೆಯಾದ್ಯಂತ ಸಂಪೂರ್ಣವಾಗಿ ಇದನ್ನು ಮಾರಾಟ ಮಾಡುವುದನ್ನು ನಿಷೇಧಿಸಬೇಕು. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗಣೇಶ ಚತುರ್ಥಿಯಂದು ಕೆಲ ಭಾಗಗಳಲ್ಲಿ ಡಿಜೆ ಸೇರಿದಂತೆ ಇನ್ನಿತರ ಧ್ವನಿವರ್ಧಕಗಳನ್ನು ಬಳಸಿ ರಾತ್ರಿವರೆಗೂ ಡ್ಯಾನ್ಸ್ ಮಾಡಲಾಗುತ್ತಿದೆ. ಇದರ ಶಬ್ದ ಆಯಾ ಭಾಗದಲ್ಲಿರುವ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬಿ.ಜಿ. ಮೋಹನ್, ಬಾಬು ಅಂಬೀಗ, ಗಿರೀಶ್ ಕುಡಾಳಕರ್, ನಾಗರಾಜ ಶೇಟ್, ಉಲ್ಲಾಸ್ ಮುಂಜೆ, ಪ್ರಭಾತ್ ಜನ್ನು, ಪ್ರಶಾಂತ ಪೆಡ್ನೇಕರ್, ಅಶೋಕ ವೇರ್ಣೆಕರ್, ರೇಖಾ ಹಿರೇಮಠ ಇದ್ದರು.
Leave a Comment