ಕಾರವಾರ:
ಕಾಮಗಾರಿ ಪಡೆದು ಮೂರ್ನಾಲ್ಕು ವರ್ಷಗಳಿಂದ ಕೆಲಸ ನಡೆಸದೆ ಬಾಕಿ ಉಳಿಸಿಕೊಂಡಿರುವ ಗುತ್ತೆಗಾದರರನ್ನು ಬ್ಲಾಕ್ ಲೀಸ್ಟ್ಗೆ ಸೇರಿಸಿ ಮತ್ತೆ ಟೆಂಡರ್ ಪ್ರಕ್ರಿಯೇಯಲ್ಲಿ ಪಾಲ್ಗೊಳ್ಳದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರ ಆರ್.ವಿ. ದೇಶಪಾಂಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ ನಡೆಸಿ ಕ್ರಮಕ್ಕೆ ಸೂಚಿಸಿದರು. ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಶಾಸಕ ಮಂಕಾಳ ವೈದ್ಯ ನಗರೋತ್ತಾನದ 2ನೇ ಹಂತದ ಕಾಮಗಾರಿ ಅವಧಿ ಮುಗಿದರು ಈವರೆಗೂ ಕೆಲ ಭಾಗಗಳಲ್ಲಿ ಕೆಲಸಗಳು ಬಾಕಿ ಇದೆ. ನಿಯಮದಂತೆ ಗುತ್ತಿಗೆದಾರರು 18 ತಿಂಗಳಿನಲ್ಲಿ ಕೆಲಸ ಮುಗಿಸಬೇಕು. ಆದರೆ ಮೂರ್ನಾಲ್ಕು ವರ್ಷಗಳಿಂದ ಕೆಲಸ ಮುಗಿಸದೆ ಬಾಕಿ ಉಳಿಸಿಕೊಂಡಿದ್ದಾರೆ. ಈ ಬಗ್ಗೆ ಜನರು ಜನಪ್ರತಿನಿಧಿಗಳನ್ನು ಪ್ರಶ್ನಿಸುತ್ತಿದ್ದಾರೆ. ಇಷ್ಟಾದರು ಅಧಿಕಾರಿಗಳು ಕೆಲಸ ಪೂರ್ತಿಗೊಳಿಸದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅವರಿಗೆ ಕಾಮಗಾರಿ ಮುಂದುವರಿಸಲು ಅವಕಾಶ ನೀಡಿದ್ದಾರೆ. ಇದೀಗ 3ನೇ ಹಂತದ ನಗರೋತ್ತಾನದ ಕಾಮಗಾರಿಗೆ ಹಣ ಬಂದಿದೆಯಾದರು 2ನೇ ಹಂತದ ಕಾಮಗಾರಿಗಳು ಬಾಕಿ ಉಳಿಸಿಕೊಂಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಧ್ವನಿಗೂಡಿಸಿದ ಶಾಸಕ ಸತಿಸ್ ಸೈಲ್ ಅಧಿಕಾರಿಗಳು ಗುತ್ತಿಗೆ ನೀಡುವ ಮುನ್ನ ಗುತ್ತಿಗೆದಾರರ ಆರ್ಥಿಕ ಸ್ಥಿತಿಗೆ ನೋಡಿ ಅದಕ್ಕೆ ತಕ್ಕಂತೆ ಗುತ್ತಿಗೆಗಳನ್ನು ನೀಡಬೇಕು. ಆದರೆ ಒಬ್ಬ ಗುತ್ತಿಗೆದಾರರ ವಿವಿಧ ಇಲಾಖೆಗಳಲ್ಲಿ ತನ್ನ ವಾರ್ಷಿಕ ಆದಾಯದ ವಿವರವನ್ನು ನೀಡಿ ಟೆಂಡರ್ ಪಡೆಯುತ್ತಿದ್ದಾನೆ. ಇದರಿಂದ ಆತನಿಗೆ ಲಾಭವಾಗುವ ಕಾಮಗಾರಿಗಳನ್ನು ಮುಗಿಸಿ ಇನ್ನುಳಿದ ಕಾಮಗಾರಿಗಳನ್ನು ಹಾಗೆ ಬಿಡುತ್ತಿದ್ದು, ಇದರಿಂದ ಕಾಮಗಾರಿಗಳು ಅವಧಿಗು ಮುನ್ನ ಪೂರ್ಣಗೊಳ್ಳುತ್ತಿಲ್ಲ ಎಂದು ದೂರಿದರು. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ಸರಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಹೀಗೆ ಕಾಮಗಾರಿಗಳನ್ನು ಪೂರ್ಣಗೊಳಿಸದೆ ಇದ್ದಲ್ಲಿ ಅನುದಾನ ತರುವುದಾದರು ಹೇಗೆ. ಕೂಡಲೇ ಬಾಕಿ ಉಳಿದ ಕಾಮಗಾರಿಗಳ ಪಟ್ಟಿ ಮಾಡಿ ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚಿಸದರು.
ನಗರೋತ್ಥಾನ ಮೂರನೇ ಹಂತಕ್ಕೆ ಕಳೆದ 6 ತಿಂಗಳ ಹಿಂದೆಯೇ ಮಂಜೂರಿ ದೊರೆತಿದೆ. ಆದರೆ ಈವರೆಗೂ ಪ್ರಕ್ರಿಯೆ ಪ್ರಾರಂಭಗೊಂಡಿಲ್ಲ ಎಂದು ಮಂಕಾಳ ವೈದ್ಯ ಸೇರಿದಂತೆ ಇನ್ನಿತರ ಶಾಸಕರು ಆರೋಪಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ನಗರೋತ್ಥಾನ ಕೋಶದ ಅಧಿಕಾರಿ, ಮೂರನೇ ಹಂತದ ನಗರೋತ್ಥಾನ ಯೋಜನೆಯನ್ನು ಘಟ್ಟದ ಮೇಲೆ ಮತ್ತು ಕೆಳಗೆ ಪ್ರತ್ಯೇಕವಾಗಿ ಗುತ್ತಿಗೆ ಕರೆಯಲಾಗಿತ್ತು. ಕರಾವಳಿ ಭಾಗದಲ್ಲಿ ಟೆಂಡರ್ ಹಾಕಿದ ಗುತ್ತಿಗೆದಾರರು ತಾಂತ್ರಿಕ ಪರಿಪೂರ್ಣತೆ ಇಲ್ಲದ ಕಾರಣ ಮರು ಟೆಂಡರ್ ಕರೆಯಲಾಗಿದೆ. ಘಟ್ಟದ ಮೇಲ್ಭಾಗದಲ್ಲಿ 10 ಕೋಟಿ ರೂ. ಒಳಗಿನ ಕಾಮಗಾರಿಗಳಿರುವ ಯಲ್ಲಾಪುರ, ಮುಂಡಗೋಡ ಮತ್ತು ಸಿದ್ದಾಪುರದಲ್ಲಿ ಟೆಂಡರ್ ಕರೆಯಲಾಗಿದೆ. ನಗರ ಪ್ರದೇಶವಾದ ಶಿರಸಿ ದಾಂಡೇಲಿ ಮತ್ತು ಹಳಿಯಾಳದಲ್ಲಿ ಟೆಂಡರ್ ಕರೆಯಲು ಡಿಎಂಎ ಕಚೇರಿಯಂದ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ವಿವರಿಸಿದರು.
ಸಚಿವ ಆರ್.ವಿ. ದೇಶಪಾಂಡೆ ಪ್ರತಿಕ್ರಿಯೆ ನೀಡಿ 10 ಕೋಟಿ ರೂ.ವರೆಗಿನ ಕಾಮಗಾರಿಗಳಿಗೆ ಮಂಜೂರಾತಿ ನೀಡಲು ನನಗೆ ಅಧಿಕಾರವಿದೆ. 5 ಕೋಟಿ ರೂ.ವರೆಗಿನ ಕಾಮಗಾರಿಗಳಿಗೆ ಜಿಲ್ಲಾಕಾರಿ ಮಂಜೂರಾತಿ ನೀಡಲು ಅವಕಾಶವಿದೆ. ಶೀಘ್ರದಲ್ಲಿ ಟೆಂಡರ್ಗೆ ಅನುಮೋದನೆ ನೀಡಲಾಗುವುದು ಎಂದರು. ಶಿರಸಿ ತಾಲೂಕಿನ ಹುಲೇಕಲ್, ಜಾನ್ಮನೆ ಹೋಬಳಿಯಲ್ಲಿ ಮಳೆ ಚನ್ನಾಗಿ ಆಗಿದೆ. ಆದರೆ ಬನವಾಸಿ ಶಿರಸಿ ಹೋಬಳಿ ಬರಗಾಲಪೀಡಿತವಾಗಿದೆ. ಆದರೆ ಕೇಂದ್ರದ ಹೊಸ ನೀತಿಯಿಂದಾಗಿ ಬರಗಾಲವನ್ನು ಘೋಷಣೆ ಮಾಡುವಾಗ ಎರಡು ಹಳ್ಳಿಗಿಂತ ಹೆಚ್ಚಿದಲ್ಲಿ ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದರಿಂದ ಬರಗಾಲ ಎದುರಿಸುತ್ತಿರುವ ಈ ಭಾಗದ ರೈತರು ತೊಂದರೆ ಅನುಭವಿಸುವ ಸಂಕಷ್ಟ ದುರಾಗಿದೆ ಎಂದು ಶಾಸಕ ಶಿವರಾಮ್ ಹೆಬ್ಬಾರ್ ಸಚಿವರ ಗಮನಕ್ಕೆ ತಂದರು. ಜಿಲ್ಲೆಯಲ್ಲಿ ಮುಂಡಗೋಡ 13.78 ಕೋಟಿ ರೂ., ಶಿರಸಿ 6.75 ಕೋಟಿ ರೂ., ಯಲ್ಲಾಪುರ 26 ಲಕ್ಷ ರೂ., ಹಾಗೂ ಹಳಿಯಾಳ 27.59 ಕೋಟಿ ರೂ. ಸೇರಿದಂತೆ ಒಟ್ಟು ಸುಮಾರು 48 ಕೋಟಿ ರೂ.ಬೆಳೆ ವಿಮೆ ಮಂಜೂರಿಯಾಗಿದೆ. ಆದರೆ ಕೆಲ `Áಗದಲ್ಲಿ ವಿಮೆ ವಿಷಯ ವಿವಾದದಲ್ಲಿರುವುದರಿಂದ ಈ ವರೆಗೂ ಬಿಡುಗಡೆ ಆಗಿಲ್ಲ. ಮಂಜೂರಾದ ವಿಮಾ ಮೊತ್ತದ ಪೈಕಿ ಇದುವರೆಗೆ 29 ಕೋಟಿ ರೂ. ಮಾತ್ರ ರೈತರಿಗೆ ಸಂದಾಯವಾಗಿದೆ ಎಂದು ಜಂಟಿ ಕೃಷಿ ಇಲಾಖೆ ಉಪನಿರ್ದೆಶಕ ಗೋವಿಂದ ಹೊನ್ನಪ್ಪ ಗೌಡ ತಿಳಿಸಿದರು.
ಬರಗಾಲ ಗೋಷಣೆಯಲ್ಲಿ ಕೇಂದ್ರ ಸರಕಾರದ ನೀತಿ ಅವೈಜ್ಞಾನಿಕವಾಗಿದೆ. ಈ ಹಿಂದೆ ಹೊಬಳಿ ಮಟ್ಟದಲ್ಲಿ ಬರಗಾಲ ಪ್ರದೇಶವನ್ನು ಗುರುತಿಸಲಾಗುತಿತ್ತು. ಆದರೆ ಈ ಪ್ರತಿ ತಾಲೂಕನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದು ರಾಜ್ಯದ ರೈತರಿಗೆ ತೊಂದರೆಯಾಗುತ್ತಿರುವುದರ ಬಗ್ಗೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯುವಂತೆ ಜಿಲ್ಲಾಧಿಕಾರಿಗೆ ಸಚಿವರು ಸೂಚಿಸಿದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ, ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಜಿ. ಪಂ. ಅಧ್ಯಕ್ಷೆ ಜಯಶ್ರೀ ಮೊಗೇರ, ಜಿ.ಪಂ. ಸಿಇಒ ಚಂದ್ರಶೇಖರ ನಾಯಕ, ಎಸ್ಪಿ ವಿ.ವಿ. ಪಾಟೀಲ ಇದ್ದರು.
Leave a Comment