ಕಾರವಾರ:
ಗುರುವಾರ ಬೆಳಗ್ಗೆ ಹಸಿರು ಬಣ್ಣದಿಂದ ಕಾಣಿಸಿಕೊಂಡಿದ್ದ ಅರಬ್ಬಿ ಸಮುದ್ರ ತೀರ ಶುಕ್ರವಾರ ತಿಳಿಗೆಂಪು ಬಣ್ಣಕ್ಕೆ ತಿರುಗಿ ಅಚ್ಚರಿ ಮೂಡಿಸಿದೆ.
ಮಳೆಯಿಂದ ನದಿಗಳ ಮೂಲಕ ಹೇರಳವಾಗಿ ಸಮುದ್ರ ಸೇರಿದ್ದ ಖನಿಜಾಂಶವು ಸೂರ್ಯನ ಕಿರಣಗಳಿಗೆ ದ್ಯುತಿ ಸಂಶ್ಲೇಷಣೆ ಕ್ರಿಯೆ ನಡೆದು ಹೆರಳವಾಗಿ ಬೆಳೆದಿದ್ದ ಪಾಚಿಯೂ ಕಡಲಿ ಅಬ್ಬರಕ್ಕೆ ಕರಡಿ ಸಮುದ್ರ ಹಸಿರಾಗಿತ್ತು. ರಾತ್ರಿ ವೇಳೆ ಸಮುದ್ರ ಮಿನುಗುತ್ತಿತ್ತು. ಶುಕ್ರವಾರ ಮೋಡದ ವಾತಾವರಣವಿದ್ದ ಕಾರಣ ಸೂರ್ಯನ ಕಿರಣಗಳನ್ನು ಪಡೆಯಲು ವಿಫಲವಾದ ಸಮುದ್ರದಲ್ಲಿದ್ದ ಪಾಚಿಯು ಬೆಳೆವಣಿಗೆಯಾಗದೆ ನಾಶಗೊಂಡಿದೆ. ಇದರಿಂದ ಕಡಲತೀರದ ನೀರು ತಿಳಿ ಕೆಂಪು ಬಣ್ಣಕ್ಕೆ ತಿರುಗಿದೆ. ಇದು ಇನ್ನೂ ಒಂದೆರಡು ದಿನಗಳಲ್ಲಿ ಸಂಪೂರ್ಣವಾಗಿ ನಾಶವಾಗಲಿದ್ದು, ಸಮುದ್ರ ಸಾಮಾನ್ಯ ಸ್ಥಿತಿಗೆ ಮರಳಲಿದೆ. ಹೀಗೆ ನಡೆಯುವುದರಿಂದ ಕಡಲ ಜೀವಿಗೆ ಅಥವಾ ಮೀನುಗಾರರಿಗೆ ತೊಂದರೆಯಿಲ್ಲ ಎಂದು ಕಡಲ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಶಿವಕುಮಾರ್ ಹರಗಿ ತಿಳಿಸಿದ್ದಾರೆ.
ಇನ್ನು ಕಡಲತೀರದಲ್ಲಿ ನೀರಿನ ಬಣ್ಣ ಬದಲಾಗುತ್ತಿರುವುದರ ಬಗ್ಗೆ ತಿಳಿದ ಇಲ್ಲಿನ ಸೇಂಟ್ ಮೈಕಲ್ ಹಾಗೂ ಬಾಲ ಮಂದಿರ ಪ್ರೌಢಶಾಲೆ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ತೆರಳಿ ವೀಕ್ಷಿಸಿದರು. ಇನ್ನು ಕವಿವಿ ಸ್ನಾತಕೋತ್ತರ ಕೇಂದ್ರದ ಕಡಲ ಜೀವಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಿದರು. ಮೈಕ್ರೋಸಾಪ್ಟ ಬಳಸಿ ಸಸ್ಯ ಪ್ರಬೇಧ ಗಮನಿಸಿದ ಕಲಾ ಮತ್ತು ವಿಜ್ಞಾನ ಪದವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಶಿವಾನಂದ ಭಟ್, ಟ್ಯಾಗೋರ ಕಡಲತೀರದಲ್ಲಿ ಕಂಡುಬಂದಿರುವುದು ಡೈನೋಪ್ಲಾಜಿನಿಟಿ ಗುಂಪಿನಲ್ಲಿರುವ ನಾಕ್ಟಿಲೂಕಾ ಎಂದು ತಿಳಿಸಿದರು. ಈ ಪಾಚಿಯಿಂದ ಯಾವುದೇ ಅಪಾಯವಿಲ್ಲ ಎಂದು ಅಭಿಪ್ರಾಯ ಪಟ್ಟರು.
Leave a Comment