ತಾಲೂಕಿನ ಮಾವಿನಕುರ್ವಾದ ಪ್ರಸಿದ್ಧ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ವರ್ಷಂಪ್ರತಿಯಂತೆ ನಡೆಯುವ ಅಹೋರಾತ್ರಿ ಅಖಂಡ ಹರಿನಾಮ ಸಂಕೀರ್ತನೆಯ ಪುಣ್ಯಪಾವನ `ಭಜನಾ ಸಪ್ತಾಹ’ ಕಾರ್ಯಕ್ರಮ ಅ.2 ರಂದು ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ.
ಹೇಮಲಂಬಿ ನಾಮ ಸಂವತ್ಸರದ ಭಾದ್ರಪದ ಶುದ್ಧ ಏಕಾದಶಿಯ ನಿಮಿತ್ತ ಶನಿವಾರ ಶ್ರೀ ದೇವರ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯಲಿದ್ದು, ಬೆಳಿಗ್ಗೆ 9 ಗಂಟೆಯಿಂದ ಭಜನಾ ಸಪ್ತಾಹ ಪ್ರಾರಂಭವಾಗಿ ಅ.3ರ ಬೆಳಗಿನ ಅವಧಿಯ ವರೆಗೂ ಸಪ್ತಾಹ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಶ್ರೀ ದೇವತಾ ಪ್ರಾರ್ಥನೆಯೊಂದಿಗೆ ವಿವಿಧ ಭಜನಾ ತಂಡದವರಿಂದ ಭಜನಾ ಸಪ್ತಾಹ ಪ್ರಾರಂಭಗೊಳ್ಳಲಿದ್ದು, ಭಜನಾ ಸಪ್ತಾಹದಲ್ಲಿ ಜಿಲ್ಲೆಯ ವಿವಿಧ ಹೆಸರಾಂತ ಭಜನಾ ತಂಡಗಳು ಪಾಲ್ಗೊಳ್ಳಲಿದೆ. ಭಜನಾ ತಂಡದಲ್ಲಿ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಮಾವಿನಕುರ್ವಾ, ಶ್ರೀ ಮಹಾವಿಷ್ಣು ಭಜನಾ ಮಂಡಳಿ ಬಳಕೂರ, ಶ್ರೀ ಲಕ್ಷ್ಮೀ ವೆಂಕಟೇಶ್ವರ ಭಜನಾ ಮಂಡಳಿ ಬೇರೊಳ್ಳಿ, ಶ್ರೀ ವೀರ ಮಾರುತಿ ಭಜನಾ ಮಂಡಳಿ ಹೊನ್ನಾವರ, ಶ್ರೀ ಮುಖ್ಯಪ್ರಾಣ ಲಕ್ಷ್ಮೀ ವೆಂಕಟೇಶ ಭಜನಾ ಮಂಡಳಿ ಗುಂಡಬಾಳ, ಶ್ರೀ ಶಾಂತೇರಿ ಕಾಮಾಕ್ಷಿ ಭಜನಾ ಮಂಡಳಿ ಭಟ್ಕಳ ಹಾಗೂ ಶ್ರೀ ಅನಿಲ್ ಭಟ್ಟ ಹೆರವಟ್ಟಾ ಕುಮಟಾ ತಂಡದವರಿಂದ ಅಹೋರಾತ್ರಿ ಭಜನಾ ಸಪ್ತಾಹ ಕಾರ್ಯಕ್ರಮ ನಡೆಯಲಿದೆ.
ವಿಶೇಷ: ರಾತ್ರಿ 9 ಗಂಟೆಯಿಂದ 12ರ ವರೆಗೆ ವಿಶೇಷ ಭಜನಾ ಕಾರ್ಯಕ್ರಮ ನಡೆಯಲಿದ್ದು, ಸಂಗೀತದಲ್ಲಿ ವಿದ್ವಾನ್ ವಿನಾಯಕ ಹೆಗಡೆ ಶಿರಸಿ ಹಾಗೂ ತಬಲಾದಲ್ಲಿ ವಿದ್ವಾನ್ ಎನ್.ಜಿ.ಹೆಗಡೆ ಕಪ್ಪೆಕೆರೆ ಸಾಥ್ ನೀಡಲಿದ್ದಾರೆ.
ಅ.5 ರಂದು ಭಾದ್ರಪದ ಶುದ್ಧ ಚತುರ್ದಶಿ ಮಂಗಳವಾರದಂದು `ಅನಂತ ಚತುರ್ದಶಿ’ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದೆ ಎಂದು ಮಾವಿನಕುರ್ವಾ ಶ್ರೀ ಗೋಪಾಲಕೃಷ್ಣ ದೇವಾಲಯದ ಕಾರ್ಯಕಾರಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
Leave a Comment