ಕಾರವಾರ: ಕುಮಟಾ ತಾಲೂಕಿನಲ್ಲಿ ಗುತ್ತಿಗೆದಾರರು ಕಾನೂನು ಬಾಹಿರವಾಗಿ ಮರಳು ಸಂಗ್ರಹಣೆ ಹಾಗೂ ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದ ಕುಮಟಾದ ಸಾರ್ವಜನಿಕರು ಕುಮಟಾ ತಾಲೂಕಿನಲ್ಲಿ 37 ಜನ ಗುತ್ತಿಗೆದಾರರಿಗೆ ಅಘನಾಶಿನಿ ನದಿಯಲ್ಲಿ ಮರಳುಗಾರಿಕೆ ನಡೆಸಲು ಗುತ್ತಿಗೆ ನೀಡಲಾಗಿದೆ. ಆದರೆ ಇವರಲ್ಲಿ ಯಾರೂ ಕೂಡ ಕಾನೂನಾತ್ಮಕವಾಗಿ ಮರಳು ಸಾಗಾಟ ನಡೆಸುತ್ತಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳು ಈ ಗುತ್ತಿಗೆದಾರರಿಂದ ಹಣ ಪಡೆದು ಸೈಟ್ ಮಾಡಲು ಪರವಾನಿಗೆ ನೀಡಿರುವುದರ ಬಗ್ಗೆ ಸಂಶಯ ಮೂಡುತ್ತಿದೆ. ಕೃಷಿಕನಿಗೆ ಕೃಷಿ ಜಮೀನನ್ನು ವ್ಯವಸಾಯ ಮಾಡುವ ಉದ್ದೇಶದಿಂದ ಮಂಜೂರಿ ಮಾಡಲಾಗುತ್ತದೆ. ಬೇರೆ ಕಾರಣಗಳಿಗೆ ಆ ಜಾಗವನ್ನು ಬಳಸುವುದಾದರೆ ಕೃಷಿಯೇತರ ಜಮೀನಾಗಿ ಪರಿವರ್ತಿಸಿ ಬಳಕೆ ಮಾಡಬೇಕಾಗುತ್ತದೆ. ಆದರೆ ಮಾಲಿಕನಿಗೆ ಹಣದಾಸೆ ತೋರಿಸಿ ಕೃಷಿ ಜಮೀನಿನಲ್ಲಿ ಮರಳು ಸಂಗ್ರಹಣೆಗೆ ಅವಕಾಶ ನೀಡಲಾಗಿದೆ. ಅಲ್ಲದೆ ಈ ಕೃಷಿ ಜಮೀನಿನಲ್ಲಿಯೇ ರಸ್ತೆಗಳನ್ನೂ ಕೂಡ ನಿರ್ಮಾಣ ಮಾಡಲಾಗಿದ್ದು ಇದಕ್ಕೆಲ್ಲ ಅಧಿಕಾರಿಗಳ ಕೈವಾಡ ಇರುವುದು ಗೋಚರವಾಗುತ್ತದೆ ಎಂದು ಆರೋಪಿಸಿದರು.
ಮರಳು ಸಂಗ್ರಹಣಾ ಸೈಟ್ ಗೆ ಪರವಾನಿಗೆ ನೀಡುವಾಗ ಅಧಿಕೃತವಾಗಿ ಸಾರ್ವಜನಿಕ ಸಂಪರ್ಕ ರಸ್ತೆ ಇರುವ ಕಡೆ ಬಂದರು ಇಲಾಖೆಯ ಸ್ಥಳ ಅಥವಾ ಕೃಷಿಯೇತರ ಜಮೀನಿನಲ್ಲಿ ಅವಕಾಶ ನೀಡಬೇಕಾಗುತ್ತದೆ ಎಂದು ಈ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ತಿಳಿಸಿರುತ್ತಾರೆ. ಹೀಗಿದ್ದೂ ಕಾಯಿದೆಗೆ ವಿರುದ್ಧವಾಗಿ ಗುತ್ತಿಗೆದಾರರಿಂದ ಹಣ ಪಡೆದು ಬೇಕಾ ಬಿಟ್ಟಿ ಅವಕಾಶ ಕಲ್ಪಿಸಿರುವುದು ಸಂಶಯಕ್ಕೆ ಕಾರಣವಾಗಿದೆ. ಪ್ರತಿ ಸೈಟ್ನಲ್ಲಿ ಮರಳು ತುಂಬುವ ಲಾರಿಗಳಿಗೆ ಪಾಸ್ನಲ್ಲಿ ಹಾಕಿರುವ ಪ್ರಯಾಣಕ್ಕೂ ವಾಹನದಲ್ಲಿ ತುಂಬಲಾಗಿರುವ ಪ್ರಮಾಣಕ್ಕೂ ಬಹಳಷ್ಟು ವ್ಯತ್ಯಾಸ ಕಂಡು ಬರುತ್ತಿದೆ. ಇದೆಲ್ಲಾ ಗೊತ್ತಿದ್ದೂ ಅಧಿಕಾರಿಗಳು ಜಾಣಕುರುಡತನ ಪ್ರದರ್ಶಿಸುತ್ತಿದ್ದಾರೆ ಎಂದು ಮನವಿಯಲ್ಲಿ ದೂರಿದರು.
ಸಿ.ಆರ್.ಝಡ್. ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲಿ ಹಾಗೂ ಕೃಷಿ ಜಮೀನಿನಲ್ಲಿ ಸೈಟ್ಗಳಿಗೆ ರಸ್ತೆ ನಿರ್ಮಿಸಲು, ಗಣಿಗಾರಿಕೆ ನಡೆಸಲು ಅವಕಾಶ ಕಲ್ಪಿಸಿ ಕಾನೂನು ಬಾಹಿರವಾಗಿ ಗಣಿಗಾರಿಕೆ ನಡೆಸಲು ಉತ್ತೇಜನ ನೀಡುತ್ತಿರುವುದು ಕಂಡು ಬರುತ್ತಿದೆ. ಮರಳು ಸಂಗ್ರಹಿಸಿ ಸಾಗಿಸಲು ಯೋಗ್ಯವಾದ ಸ್ಥಳಗಳಿದ್ದರೂ ಉದ್ದೇಶ ಪೂರ್ವಕವಾಗಿ ಬೇಕಾಬಿಟ್ಟಿ ಸಾಗಿಸಲು ಸಾಧ್ಯವಾಗುವುದಿಲ್ಲ ಎನ್ನುವ ವಿಚಾರದಿಂದ ನಿಜವಾದ ಸಾರ್ವಜನಿಕ ಸಂಪರ್ಕವಿರುವ ಹಳೆಯ ಹೆದ್ದಾರಿ ರಸ್ತೆ ಆಗಿರುವ ಮಿರ್ಜಾನ ಹಾಗೂ ಹೆಗಡೆಯ ಎರಡು ಸ್ಥಳಗಳಲ್ಲಿ ಅವಕಾಶ ಕಲ್ಪಿಸದೆ ಇರುವುದನ್ನು ಗಮನಿಸಿದರೆ ಗುತ್ತಿಗೆದಾರ ಹಾಗೂ ಅಧಿಕಾರಿಗಳ ಸೇರಿ ಮರಳು ಕೊಳ್ಳೆ ಹೊಡೆಯುವ ವಿಚಾರ ಮಾಡುತ್ತಿರುವುದು ಕಂಡು ಬರುತ್ತದೆ ಎಂದರು.
ನಿಜವಾಗಿ ಮರಳು ಸಂಗ್ರಹಣಾ ಸೈಟ್ ಹಾಗೂ ಅನಾದಿಕಾಲದಿಂದಲೂ ಸಾರ್ವಜನಿಕ ಸಂಪರ್ಕ ಇರುವ ಮಿರ್ಜಾನ, ಹೆಗಡೆ, ಕೋಡ್ಕಣಿ, ಮಣಕಿ, ಶಿರಗುಂಜಿ ಧಕ್ಕೆಗಳ ಪಕ್ಕದಲ್ಲಿ ಸಾಗಿಸಲು ತುಂಬಾ ಅನುಕೂಲಕರ ಸ್ಥಳವಾಗಿದ್ದು ಇದನ್ನು ಹೊರತು ಪಡಿಸಿ ರಾ.ಹೆ. ಪಕ್ಕದಲ್ಲಿ 50 ರಿಂದ 75ಮೀ. ಅಂತರದಲ್ಲಿ ಮರಳು ಸಂಗ್ರಹಣಾ ಸೈಟ್ ಹಾಗೂ ಸಂಪರ್ಕ ರಸ್ತೆಗಳನ್ನು ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಮರಳು ಗುತ್ತಿಗೆ ಪಡೆದವರು ಬೇರೆ ತಾಲೂಕಿನಿಂದ ಬಂದು ಸ್ಥಳೀಯರೆಂದು ಕೆಲವು ಅನಧಿಕೃತ ದಾಖಲೆಗಳನ್ನು ನೀಡಿ ರಹವಾಸಿ ಪ್ರಮಾಣ ಪತ್ರ ಪಡೆದು ಮರಳುಗಾರಿಕೆ ನಡೆಸುತ್ತಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯತಿ ಪರವಾನಿಗೆ ಪಡೆಯದೇ ಮರಳನ್ನು ಕೊಳ್ಳೆ ಹೊಡೆಯಲು ಅನುಕೂಲವಾಗುವಂತೆ ಹೊಸದಾಗಿ ಸೈಟ್ ನಿರ್ಮಿಸಲು ಸಂಬಂಧಿಸಿದ ಅಧಿಕಾರಿಗಳು ಪರವಾನಿಗೆ ನಿಡಿರುವುದು ಕಾನೂನು ಬಾಹಿರವಾಗಿದೆ. ಆದ್ದರಿಂದ ಕಾನೂನು ಬಾಹಿರವಾಗಿ ವರ್ತಿಸುತ್ತಿರುವ ಮರಳು ಗಣಿಗಾರಿಕೆಯನ್ನು ಕೂಡಲೇ ನಿಲ್ಲಿಸ ಬೇಕು ಎಂದು ಮನವಿ ಮೂಲಕ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗಣೇಶ ಸುಕ್ರು ಅಂಬಿಗ, ವಾಸುದೇವ ಎಸ್.ಅಂಬಿಗ, ವಿನೋದ ಡಿ. ಅಂಬಿಗ, ರಾಘವೇಂದ್ರ ಪಿ. ಅಂಬಿಗ, ಜನಾರ್ಧನ ಅಂಬಿಗ ಮುಂತಾದವರು ಇದ್ದರು.
Leave a Comment