ಹೊನ್ನಾವರ:
ಪ್ರಗತಿಪರ ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ ಕೊಲೆ ಆರೋಪಿಯನ್ನು ತಕ್ಷಣ ಬಂಧಿಸಿ, ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಬುಧವಾರ ತಾಲೂಕಾ ಪತ್ರಕರ್ತರ ಸಂಘದ ವತಿಯಿಂದ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಜನಪರ ಚಳುವಳಿಗೆ, ಪ್ರಗತಿಪರ ಚಿಂತನೆಗಳಿಗೆ, ಮಾನವೀಯ ಮೌಲ್ಯಗಳಿಗೆ ತಮ್ಮ ಲೇಖನಿಯ ಮೂಲಕ ಧ್ವನಿ ನೀಡಿದ, ಹೋರಾಟಕ್ಕೆ ಕಾವು ನೀಡಿದ, ಸರಳ, ಸಜ್ಜನಿಕೆಯ, ಮಾನವೀಯ ಸಂವೇದನಿಯ, ಗೌರಿ ಲಂಕೇಶ ಅವರ ಕೊಲೆ ಮಾನವ ಜನಾಂಗವೇ ತಲೆ ತಗ್ಗಿಸುವ ಹೇಯ ಕೃತ್ಯ. ತನ್ನ ಚಿಂತನೆಯ ಮೂಲಕ ಜನತೆಯನ್ನು ಮೌಢ್ಯದ ವಿರುದ್ಧ, ಕೋಮುವಾದದ ವಿರುದ್ಧ, ಹಿಂಸೆಯ ವಿರುದ್ಧ, ಶೋಷಣೆಯ ವಿರುದ್ಧ ಅಣಿಗೊಳಿಸುತ್ತಾ ಮಾನವೀಯ ಮೌಲ್ಯವನ್ನು ಅವರು ಎತ್ತಿ ಹಿಡಿಯುವ ಪರಿಯನ್ನು ಸಹಿಸದ ದುಷ್ಟ ಶಕ್ತಿಗಳು ಮತ್ತು ಸಂಘಟನೆಗಳು ಅವರನ್ನು ಅಮಾನುಷವಾಗಿ, ಹೇಡಿಗಳಂತೆ ಕೊಂದಿರುವುದು ಅವಮಾನದ ವಿಷಯ. ಮತಾಂಧಶಕ್ತಿಗಳ ವಿರುದ್ಧ ಸತತ ಹೋರಾಟ ನಡೆಸಿದ ಅವರು ಈದ್ಗಾ ವಿವಾಧ, ಲವ್ಜಿಹಾದಿ, ನೈತಿಕ ಪೋಲೀಸ್ಗಿರಿ, ಮಂಗಳೂರು ಚರ್ಚ್ ಮೇಲಿನ ದಾಳಿ, ನಕ್ಸಲೈಟ್ ಸಮಸ್ಯೆಗಳ ಕುರಿತು ತನ್ನದೇ ಆದ ಧ್ಯೇಯ ಧೋರಣೆಯಿಂದ ಮೂಲಭೂತ ವಾದಿಗಳ ಕೋಪಗಳಿಗೆ ತುತ್ತಾಗಿಯೂ, ಸಮಾಜದ ಮಾನವೀಯ ಮೌಲ್ಯಗಳಿಗೆ ಜೀವ ತುಂಬಲು ಪ್ರಯತ್ನಿಸಿದವರು. ರಾಜ್ಯ ಸರ್ಕಾರವು ತಕ್ಷಣ ಗೌರಿ ಲಂಕೇಶ ಅವರ ಕೊಲೆಗೆ ಕಾರಣರಾದ ವ್ಯಕ್ತಿಗಳನ್ನು ಬಂಧಿಸಿ, ಈ ಹತ್ಯೆಯಲ್ಲಿ ಪಾಲ್ಗೊಂಡ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಸುಬ್ರಹ್ಮಣ್ಯ, ಕಾರ್ಯದರ್ಶಿ ಸತೀಶ ತಾಂಡೇಲ, ಪತ್ರಕರ್ತರಾದ ಕೃಷ್ಣಮೂರ್ತಿ ಭಟ್, ದಿನೇಶ ಹೆಗಡೆ, ಎಚ್.ಎಂ.ಮಾರುತಿ, ಸುಧೀರ ಕಡ್ನೀರ, ಗೋಪಾಲಕೃಷ್ಣ ಭಟ್, ಗಜು ಗೋಕರ್ಣ, ಮುರಳಿಧರ ಗಾಯತೊಂಡೆ ಇತರರು ಉಪಸ್ಥಿತರಿದ್ದರು.
Leave a Comment