ಭಟ್ಕಳ: ಉದ್ದೇಶಿತ ಮಂಗಳೂರು ಚಲೋ ಬೈಕ್ ರ್ಯಾಲಿಗೆ ಭಟ್ಕಳದಲ್ಲಿ ತಡೆಯೊಡ್ಡಿದ ಪೊಲೀಸರು ನೂರಾರು ಬಿ.ಜೆ.ಪಿ. ಕಾರ್ಯಕರ್ತರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.
ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಕೆ.ಜಿ. ನಾಯ್ಕ ಸಿದ್ದಾಪುರ ಅವರ ನೇತೃತ್ವದಲ್ಲಿ ಮಂಗಳೂರಿಗೆ ಬೈಕ್ ರ್ಯಾಲಿಯ ಮೂಲಕ ಹೊರಡಲು ಸಿದ್ದರಾದ ಕಾರ್ಯಕರ್ತರನ್ನು ಸರಕಾರ ಪರವಾನಿಗೆ ನೀಡದಿರುವ ಹಿನ್ನೆಲೆಯಲ್ಲಿ ಭಟ್ಕಳದಲ್ಲಿಯೇ ತಡೆದ ಪೊಲೀಸರು ಎಲ್ಲರನ್ನು ಬಂಧಿಸಿರುವುದಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ಬಿ.ಜೆ.ಪಿ. ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆದು, ಶಂಶುದ್ಧೀನ್ ಸರ್ಕಲ್ನಲ್ಲಿ ರಾಷ್ಟ್ರೀಯ ಹೆದ್ದಾರಿ ಕೆಲ ಕಾಲ ಬಂದ್ ಆಯಿತು. ಆದರೂ ಪಟ್ಟು ಬಿಡದ ಬಿ.ಜೆ.ಪಿ. ಕಾರ್ಯಕರ್ತರು ಪೊಲೀಸರೊಂದಿಗೆ ಸೆಣಸಿ ಮುಂದೆ ನುಗ್ಗಲು ಪ್ರಯತ್ನಿಸಿದರಾದರೂ ಫಲ ನೀಡಲಿಲ್ಲ. ಈ ಸಂದರ್ಭದಲ್ಲಿ ಮಾತನಾಡಿದ ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಕೆ.ಜಿ. ನಾಯ್ಕ ರಾಜ್ಯ ಸರಕಾರ ಒಬ್ಬರಿಗೊಂದು ನ್ಯಾಯ ಇನ್ನೊಬ್ಬರಿಗೊಂದು ನ್ಯಾಯ ಎನ್ನುವ ಧೋರಣೆ ತಳೆದಿದೆ. ಕೇವಲ ಸಂಘ ಪರಿವಾರದವರನ್ನೇ ಗುರಿಯಾಗಿಸಿ ಹತ್ಯೆಗೈಯಲು ಸರಕಾರ ಧೋರಣೆಯೇ ಕಾರಣವಾಗಿದೆ. ಇದನ್ನು ಖಂಡಿಸಿ ನಡೆಸುತ್ತಿರುವ ಬೈಕ್ ರ್ಯಾಲಿಯನ್ನು ಹತ್ತಿಕ್ಕಿ ವಿಫಲಗೊಳಿಸಲು ಮುಂದಾದ ಸರಕಾರ ತಕ್ಕ ಪಾಠ ಕಲಿಯಲಿದೆ ಎಂದರು.
ಮಾಜಿ ಶಾಸಕ ಜೆ.ಡಿ.ನಾಯ್ಕ, ಭಟ್ಕಳ ಬಿಜೆಪಿ ಅಧ್ಯಕ್ಷ ರಾಜೇಶ ನಾಯ್ಕ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಜನ್ನು, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಖಾ ಹೆಗಡೆ, ಸೂರಜ್ ನಾಯ್ಕ ಸೋನಿ, ಸುನಿಲ್ ಬಿ. ನಾಯ್ಕ, ಭಟ್ಕಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಲಕ್ಷ್ಮಣ ನಾಯ್ಕ, ಸುಬ್ರಾಯ ದೇವಡಿಗ, ಭಾಸ್ಕರ ದೈಮನೆ, ರವಿ ನಾಯ್ಕ ಜಾಲಿ, ಮಂಜುನಾಥ ನಾಯ್ಕ ಜಾಲಿ, ದಾಸ ನಾಯ್ಕ ತಲಗೋಡ, ಧನ್ಯಕುಮಾರ ಜೈನ್, ಸಂತೋಷ ನಾಯ್ಕ ಮುರುಡೇಶ್ವರ, ಹನ್ಮಂತ ನಾಯ್ಕ, ಮೋಹನ ನಾಯ್ಕ, ಮೂರ್ತಿ ಭಟ್, ಲಕ್ಷ್ಮೀನಾರಾಯಣ ನಾಯ್ಕ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು. ಪೊಲೀಸರು ಬಂಧಿತರನ್ನು ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿ ತುಂಬಿಸಿಕೊಂಡು ಕರೆದುಕೊಂಡು ಹೋದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ಪಾಟೀಲ್, ಹೆಚ್ಚುವರಿ ಎಸ್ಪಿ ಗೋಪಾಲ ಬ್ಯಾಕೋಡ್, ಡಿವಾಯ್ಎಸ್ಪಿ ಶಿವಕುಮಾರ, ಸಿಪಿಐ ಸುರೇಶ ನಾಯಕ್ ನೇತೃತ್ವದಲ್ಲಿ ಸಿವಿಲ್ ಹಾಗೂ ಕಾಯ್ದಿಟ್ಟ ಪೊಲೀಸ್ ಪಡೆ ಬಂದೋಬಸ್ತ ಎರ್ಪಡಿಸಿತ್ತು.
Leave a Comment