ಕಾರವಾರ: ಹೊನ್ನಾವರ ತಾಲೂಕಿನ ಶರಾವತಿ ಅಳಿವೆಯಲ್ಲಿ ತುಂಬಿಕೊಂಡಿರುವ ಹೂಳನ್ನು ತಿಂಗಳೊಳಗೆ ಎತ್ತಿ ಮೀನುಗಾರಿಕೆ ನಡೆಸಲು ಅವಕಾಶ ಮಾಡಿಕೊಡುವಂತೆ ಜಿಲ್ಲಾಧಿಕಾರಿ ಎಸ್ ಎಸ್. ನಕುಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಸಭಾಭವನದಲ್ಲಿ ನಡೆದ ಮೀನುಗಾರರೊಂದಿಗೆ ಮೀನುಗಾರರ ಬೇಡಿಕೆ ಹಾಗೂ ಸಂವಾದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶರಾವತಿ ಅಳವೆಯಲ್ಲಿ ಹೂಳು ತುಂಬಿಕೊಂಡ ಕಾರಣ ಮೀನುಗಾರಿಕೆಗೆ ತೆರಳು ಕಷ್ಟವಾಗುತ್ತಿದೆ. ಈಗಾಗಲೇ ಪ್ರಸಕ್ತ ವರ್ಷದಲ್ಲಿ ಹಲವು ದೋಣಿಗಳ ದುರಂತ ಸಂಭವಿಸಿದ್ದು, ಅದೃಷ್ಟವಸಾತ್ ಮೀನುಗಾರರು ಪ್ರಾಣಾಪಯದಿಂದ ಪಾರಾಗಿದ್ದಾರೆ. ಹೂಳು ವಿಪರಿತವಿರುವುದರಿಂದ ದೋಣಿಗಳಿಗೆ ಮುಂದೆ ಸಾಗಲು ತೊಂದರೆಯಾಗುತ್ತಿದೆ ಕೂಡಲೇ ಇಲ್ಲಿನ ಹೂಳನ್ನು ತೆರವು ಮಾಡುವಂತೆ ಮೀನುಗಾರ ಮುಖಂಡರು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಈ ಬಗ್ಗೆ ಕೆಲ ಹೊತ್ತು ಚರ್ಚೆ ನಡೆಸಿದ ಜಿಲ್ಲಾಧಿಕಾರಿ ಮೀನುಗಾರರಿಗೆ ತೊಂದರೆಯಾಗದಂತೆ ಅಳವೆಯಲ್ಲಿ ಒಂದು ತಿಂಗಳ ಒಳಗಾಗಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಕರಾವಳಿ ಸಮುದ್ರದಲ್ಲಿ ಕೆಲವರು ಲೈಟ್ ಫಿಶಿಂಗ್, ಬುಲ್ ಟ್ರಾಲ್, ಡೀಪ್ಸಿ ಮೀನುಗಾರಿಕೆ ಮಾಡುತ್ತಿದ್ದು, ಇದರಿಂದ ಮೀನಿನ ಸಂತತಿ ಮೇಲೆ ಪರಿಣಾಮ ಬೀರುತ್ತದೆ. ಕೂಡಲೇ 12 ಕಿ. ಮೀ ಒಳಗಾಗಿ ಲೈಟ್ ಫಿಶಿಂಗ್ ಮಾಡುವುದನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಒತ್ತಾಯಿಸಲಾಯಿತು. ಇಂತಹ ಮೀನುಗಾರಿಕೆ ಮಾಡುತ್ತಿರುವುದು ಕಂಡು ಬಂದಲ್ಲಿ ಕೋಸ್ಟ್ ಗಾರ್ಡ್ನವರಿಗೆ ತಿಳಿಸಬೇಕು ಹಾಗೆ ಈ ಬಗ್ಗೆ ಕೋಸ್ಟ್ಗಾರ್ಡ್ ಅಧಿಕಾರಿಗಳು ನಿಗಾ ಇಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಮೀನುಗಾರಿಕೆಗೆ ತೆರಳುವ ಸಮಯದಲ್ಲಿ ಮೀನುಗಾರರು ಬಯೋಮೆಟ್ರಿಕ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು ಎಂದುಕೋಸ್ಟ್ ಗಾರ್ಡ್ ಅಧಿಕಾರಿಗಳು ಸೂಚಿಸಿದರು. ಮಳೆಗಾಲವಾಗಿದ್ದರಿಂದ ಇನ್ನೆರಡು ತಿಂಗಳುಗಳ ಕಾಲ ಅವಕಾಶ ನೀಡಬೇಕು. ಅಲ್ಲದೆ ದೋಣಿಗಳ ತಪಾಸಣೆ ಸಂದರ್ಭದಲ್ಲಿ ಅನಗತ್ಯವಾಗಿ ಹೆಚ್ಚು ಸಮಯ ತೆಗೆದುಕೊಳ್ಳದೆ ಹಿಡುವಳಿಯಾದ ಮೀನುಗಳನ್ನು ಡಂಪಿಂಗ್ ಆದ ಬಳಿಕವೇ ತಪಾಸಣೆ ನಡೆಸಬೇಕು ಎಂದು ಮೀನುಗಾರರು ಒತ್ತಾಯಿಸಿದರು.
ಸಭೆಯಲ್ಲಿ ಮೀನುಗಾರಿಕಾ ಇಲಾಖೆ ಉಪನಿರ್ದೆಶಕ ಎಂ. ಎಲ್ ದೊಡ್ಮನಿ, ಉತ್ತರಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಗಣಪತಿ ಮಾಂಗ್ರೆ, ಜು ತಾಂಡೇಲ್, ಮೋಹನ್ ಬೋಳಶೆಟ್ಟಿಕರ್ ಹೊನ್ನಾವರದ ಯಾಂತ್ರಿಕೃತ ಬೋಟ್ ಯುನಿಯನ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
Leave a Comment