ಕಾರವಾರ:
ಕಠಿಣ ಪರಿಶ್ರಮ ಹಾಗೂ ಆಸಕ್ತಿಯಿಂದ ಬದುಕನ್ನು ಸುಂದರವಾಗಿರಿಸಿಕೊಳ್ಳಬಹುದು ಎಂದು ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ನಾಯಕ ಹೇಳಿದರು.
ಭಾನುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಯಾಶೀಲತೆ ಶ್ರಮ, ಶ್ರದ್ದೆಯೂ ವ್ಯಕ್ತಿತ್ವವನ್ನು ರೂಪಿಸುತ್ತದೆ. ಕಠಿಣ ಪರಿಶ್ರಮದಿಂದ ಜಗತ್ತನ್ನು ಸೃಷ್ಟಿಸುವಲ್ಲಿ ಸಫಲರಾಗಿರುವ ವಿಶ್ವಕರ್ಮರಂತೆ ನಾವೆಲ್ಲರು ನಮ್ಮ ಬದುಕನ್ನು ಪರಿಶ್ರಮದಿಂದ ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು. ನಾವು ಕೌಶಲತೆಯನ್ನು ಅಳವಡಿಸಿಕೊಂಡಲ್ಲಿ ಬಹುಬೇಗ ಯಶಸ್ಸನ್ನು ಗಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೌಶಲಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವುದರ ಮೂಲಕ ಉದ್ಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಭಾರತೀಯ ವಿಶ್ವಕರ್ಮ ಸೇವಾ ಪರಿಷತ್ ರಾಜ್ಯ ಉಪಾಧ್ಯಕ್ಷ ರಾಘವೇಂದ್ರ ಆಚಾರ್ಯ ಉಪನ್ಯಾಸ ನೀಡಿ, ವಿಶ್ವಕರ್ಮ ಜಗತ್ತನ್ನು ಸೃಷ್ಟಿ ಮಾಡಿದವರು. ಬ್ರಹ್ಮ, ವಿಷ್ಣು, ಶಿವ ಮತ್ತು ಇತರೆ ದೇವತೆಗಳಿಗಿಂತಲೂ ಮುನ್ನವೇ ಅಸ್ತಿತ್ವದಲ್ಲಿದ್ದ ವಿಶ್ವಕರ್ಮನು ಸ್ವಂಯಭು ಎನ್ನಲಾಗುತ್ತದೆ. ವಿಶ್ವಕರ್ಮನಿಗೆ ಐದು ಮುಖಗಳಿದ್ದು ಇದರಿಂದ ಮನು, ಮಯಾ, ತ್ವಷ್ಠ್ರೀ, ಶಿಲ್ಪೀ ಮತ್ತು ವಿಶ್ವಜ್ಞ ಎಂಬ ಐದು ಮಕ್ಕಳು ಉದ್ಭೂತರಾದರೆಂದು ಮತ್ತು ಈ ಐದು ಜನರೇ ವಿಶ್ವಕರ್ಮ ಗೋತ್ರ ಪ್ರವರ್ತಕರೆಂದು ಪರಿಗಣಿಸಲಾಗಿದೆ ಎಂದರು. ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ, ವಿಶ್ವಕರ್ಮ ಸಮಾಜದ ವಾಸು ಆಚಾರ್ಯ ವೇದಿಕೆಯಲ್ಲಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಮಕೃಷ್ಣ ನಾಯಕ ಸ್ವಾಗತಿಸಿದರು. ವಿಶ್ವಕರ್ಮ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.
Leave a Comment