ಕಾರವಾರ:
ಮುದಗಾ ಬಂದರಿನಲ್ಲಿ ಗೂಡಂಗಡಿ ನಿರ್ಮಿಸಿಕೊಂಡಿರುವ ನೌಕಾನೆಲೆ ನಿರಾಶ್ರಿತರನ್ನು ಖುಲ್ಲಾಪಡಿಸದಂತೆ ಆಗ್ರಹಿಸಿ ಸ್ಥಳೀಯ ಗೂಡಂಗಡಿಕಾರರು ಶಾಸಕ ಸತೀಶ್ ಸೈಲ್ ಹಾಗೂ ಜಿಲ್ಲಾಡಳಿತಕ್ಕೆ ಶುಕ್ರವಾರ ಮನವಿ ಸಲ್ಲಿಸಿದರು.
ನಮ್ಮ ಬೇಡಿಕೆಯಂತೆ ಸರ್ಕಾರ ಮುದುಗಾದಲ್ಲಿ ಬಂದರು ನಿರ್ಮಿಸಿದೆ. ಆದರೆ ಬಂದರು ಹಿಂಭಾಗದಲ್ಲಿ ಗೂಡಂಗಡಿ ಮಾಡಿಕೊಂಡಿರುವವರಿಗೆ ಸೂಕ್ತ ವ್ಯವಸ್ಥೆ ಕೊಡಲಿಲ್ಲ. ಗೂಡಂಗಡಿಕಾರರಲ್ಲಿ ಅಂಗವಿಕಲರು, ಮಹಿಳೆಯರು ಇದ್ದು ಮಕ್ಕಳ ಶಿಕ್ಷಣ ಹಾಗೂ ಬದುಕಿಗಾಗಿ ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿದ್ದಾರೆ. ಹೀಗಿರುವಾಗ ಮೀನುಗಾರಿಕಾ ಇಲಾಖೆಯವರು ತಮ್ಮ ಅಂಗಡಿಗಳನ್ನು ತೆರವು ಮಾಡುವಂತೆ ನೋಟಿಸ್ ನೀಡಿದ್ದು, ಇದರಿಂದ ಗೂಡಂಗಡಿಕಾರರಿಗೆ ಆಘಾತವಾಗಿದೆ. ಸರ್ಕಾರ ಈ ಹಿಂದೆ ತಮಗೆ ವ್ಯಾಪಾರ ಮಳಿಗೆ ನಿರ್ಮಿಸಿಕೊಡುವಂತೆ ಸೂಚಿಸಿತ್ತು. ಆದರೆ ಈವರೆಗೂ ವ್ಯಾಪಾರ ಮಳಿಗೆ ನಿರ್ಮಾಣವಾಗಲಿಲ್ಲ. ಈಗ ಇರುವ ಅಂಗಡಿಗಳನ್ನು ತೆರವು ಮಾಡಿದರೆ ಬದುಕಿಗೆ ತೊಂದರೆಯಾಗುತ್ತದೆ ಎಂದು ಅಳಲು ತೋಡಿಕೊಂಡರು. ಪ್ರಮುಖರಾದ ಚಂದ್ರಕಾಂತ ಮಾಣಿ ತಾಂಡೇಲ್, ವಿಷ್ಣು ಜನೋಭಾ ತಾಂಡೇಲ್, ಅನಿಲ ದುರ್ಗೇಕರ್, ನವಿನ ಅರ್ಗೇಕರ್, ನಾರಾಯಣ ತಾಂಡೇಲ್, ಜಾನು ಹರಿಕಂತ್ರ, ತುಳಿಸಿ ಹರಿಕಂತ್ರ ಇತರರಿದ್ದರು.
Leave a Comment