ಕಾರವಾರ:
2017-18 ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆ ಮತ್ಸ್ಯಕೃಷಿ ಆಶಾಕಿರಣ ಯೋಜನೆಯನ್ನು ಅನುಷ್ಟಾನಗೊಳಿಸಿದೆ.
ಒಳನಾಡು ಮೀನುಗಾರಿಕೆ ಅಭಿವೃದ್ಧಿಗಾಗಿ ಇಲಾಖಾ ವ್ಯಾಪ್ತಿಯಲ್ಲಿ ಕನಿಷ್ಟ 8 ತಿಂಗಳುಗಳ ಕಾಲ 5 ಅಡಿಗಳಿಗಿಂತ ಹೆಚ್ಚಿನ ನೀರಿನ ಮಟ್ಟ ಹೊಂದಿರುವ ಕೆರೆಗಳಲ್ಲಿ ಅರೆತೀವ್ರ ಮೀನು ಕೃಷಿ ಕೈಕೊಳ್ಳಲು, ಪ್ರತಿ ಹೆಕ್ಟೇರ್ ಉಪಯುಕ್ತತಾ ಜಲವಿಸ್ತೀರ್ಣಕ್ಕೆ 4000 ಬಲಿತ ಮೀನುಮರಿಗಳು ಹಾಗೂ 2 ಟನ್ ಕೃತಕ ಆಹಾರ (ಪೆಲೆಟೆಡ್ ಫೀಡ್) ಖರೀದಿಸಲು ಶೇ. 50 ರಂತೆ ಗರಿಷ್ಟ ರೂ.27000 ಸಹಾಯಧನವನ್ನು 4 ಕಂತುಗಳಲ್ಲಿ ನೀಡಲಾಗುತ್ತದೆ. ಈ ಯೋಜನೆಯಡಿ ಮೀನು ಮರಿ ಮತ್ತು ಆಹಾರ ಹೂಡಿಕೆಗಳ ವೆಚ್ಚವನ್ನು ತಮ್ಮ ಬ್ಯಾಂಕ್ ಖಾತೆಯ ಮೂಲಕ ವಹಿವಾಟು ನಡೆಸಲು ಮೀನು ಕೃಷಿಕರು ಆರ್ಥಿಕವಾಗಿ ಸಬಲರಾಗಿರಬೇಕು. ಈ ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳನ್ನು ಮೀನುಗಾರಿಕೆ ಇಲಾಖೆಯ ವಲಯ ಮಟ್ಟದ ಸಮಿತಿಯಲ್ಲಿ ಆಯ್ಕೆ ಮಾಡಲಾಗುವದು. ಯೋಜನೆಯ ನಿಯಮ ಮತ್ತು ಮಾರ್ಗಸೂಚಿಗಳಿಗಾಗಿ ಇಲಾಖಾ ವ್ಯಾಪ್ತಿಯ ಕೆರೆಗಳ ಮೀನುಪಾಶುವಾರು ಹಕ್ಕನ್ನು ಪಡೆದ ಮೀನು ಕೃಷಿಕರು ಸಮೀಪದ ಮೀನುಗಾರಿಕೆ ಕಛೇರಿಯನ್ನು ಸಂಪರ್ಕಿಸಲು ಹಳಿಯಾಳ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
Leave a Comment