ಹೊನ್ನಾವರ:
“ರಕ್ತದಾನ ಮಾಡುವುದರಿಂದ ದಾನಿಯ ಆರೋಗ್ಯ ಉತ್ತಮವಾಗುವ ಜೊತೆಗೆ ಇಂಥ ದಾನದಿಂದ ರಕ್ತದ ಅಗತ್ಯ ಇರುವವರಿಗೆ ಉಪಕಾರ ಮಾಡಿದ ತೃಪ್ತಿ ಸಿಗುತ್ತದೆ’ ಎಂದು ತಾಲೂಕಾ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ ಕಿಣಿ ಹೇಳಿದರು.
ಇಲ್ಲಿನ ಎಸ್.ಡಿ.ಎಂ. ಕಾಲೇಜಿನ ಯೂತ್ ರೆಡ್ ಕ್ರಾಸ್,ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮತ್ತು ಎನ್.ಎಸ್.ಎಸ್. ಘಟಕಗಳು,ಲಯನ್ಸ್ ಕ್ಲಬ್ ಹಾಗೂ ತಾಲೂಕಾ ಸರ್ಕಾರಿ ಆಸ್ಪತ್ರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಇಲ್ಲಿ ನಡೆದ ರಕ್ತದಾನ ಮಹತ್ವದ ಕುರಿತ ಜಾಗೃತಿ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು,ರಕ್ತದಾನದ ಬಗೆಗೆ ಇರುವ ತಪ್ಪು ಕಲ್ಪನೆಗೆ ಈ ಕುರಿತ ಅಜ್ಞಾನ ಕಾರಣ’ ಎಂದು ಹೇಳಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಡಿ.ಡಿ.ಮಡಿವಾಳ ಮಾತನಾಡಿ,”ಫಲಾಪೇಕ್ಷೆ ಇಲ್ಲದೆ ಇತರರಿಗೆ ನೀಡುವುದು ದಾನವೆನಿಸಿಕೊಳ್ಳುತ್ತದೆ.ರಕ್ತದಾನ ಶ್ರೇಷ್ಠ ದಾನಗಳಲ್ಲೊಂದು’ಎಂದು ಹೇಳಿದರು.
ತಾಲೂಕು ಆಸ್ಪತ್ರೆಯ ಆಪ್ತ ಸಮಾಲೋಚಕ ವಿನಾಯಕ ಮಾತನಾಡಿ”ಭಾರತದಲ್ಲಿ ಹಲವಾರು ಗರ್ಭಿಣಿ ಸ್ತ್ರೀಯರು,ಮಕ್ಕಳು ಅಗತ್ಯದ ಸಂದರ್ಭದಲ್ಲಿ ರಕ್ತ ಸಿಗದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.ರಕ್ತ ನೀಡಲು ದಾನಿಗಳು ಮುಂದೆ ಬರಬೇಕು’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಪ್ರೊ.ಎಸ್.ಎಸ್. ಹೆಗಡೆ ಮಾತನಾಡಿ,”ಸಮಾಜ ಸೇವೆ ಕೇವಲ ಫ್ಯಾಶನ್ ಆಗದೆ ಅದು ನಮ್ಮ ಸ್ವಭಾವವಾಗಬೇಕು’ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಡಾ.ಎಂ.ಪಿ.ಕರ್ಕಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರೊ.ಆರ್.ವಿ.ಹೆಗಡೆ ಸ್ವಾಗತಿಸಿದರು.ಪ್ರೊ.ಎಂ.ಜಿ.ಹೆಗಡೆ ನಿರೂಪಿಸಿದರು.ಪ್ರೊ.ಸುರೇಶ ಎಸ್.ವಂದಿಸಿದರು.
ಪ್ರಾಚಾರ್ಯ ಪ್ರೊ.ಎಸ್.ಎಸ್.ಹೆಗಡೆ,ಪ್ರಾಧ್ಯಾಪಕರು,ವಿದ್ಯಾರ್ಥಿಗಳು ಸೇರಿದಂತೆ ಅರ್ಹ 26 ಜನರು ಶಿಬಿರದಲ್ಲಿ ರಕ್ತದಾನ ಮಾಡಿದರು.ರಕ್ತನಿಧಿ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರಿಜ್ವಾನ್ ಹಾಗೂ ಕೇಂದ್ರದ ಸಿಬ್ಬಂದಿಗಳು ಅಗತ್ಯ ಸಹಕಾರ ನೀಡಿದರು.
Leave a Comment