ಹೊನ್ನಾವರ: ಪಟ್ಟಣದ ಪ್ರಭಾತನಗರ ಮತ್ತು ಗಾಂಧೀನಗರದಲ್ಲಿ ಕೆಲವು ಕಡೆಗಳಲ್ಲಿ ಪಟ್ಟಣ ಪಂಚಾಯತಿಯಿಂದ ನೀರು ಸರಬರಾಜು ಮಾಡುವ ಪೈಪುಗಳಲ್ಲಿ ಪದೇಪದೇ ಸಮಸ್ಯೆ ಉಂಟಾಗುತ್ತಿರುವುದರಿಂದ ನೀರು ಬಳಕೆದಾರರು ನೀರಿಲ್ಲದೆ ಪರದಾಡುವಂತಾಗಿದೆ.
ಪಟ್ಟಣದ ಪ್ರಭಾತನಗರ, ಗಾಂಧಿನಗರ, ಫಾರೆಸ್ಟ್ ಕಾಲನಿಗಳಲ್ಲಿ ನೀರು ಸರಬರಾಜು ಮಾಡುವ ಪೈಪ್ ಒಡೆದು ನೀರು ಪೋಲಾಗುತ್ತಿದ್ದು, ಪಟ್ಟಣ ಪಂಚಾಯತಿಯವರ ನಿಷ್ಕಾಳಜಿಯಿಂದಾಗಿ ಬೇಸಿಗೆಯ ಮೊದಲೇ ನೀರಿಗಾಗಿ ಹಾಹಾಕಾರವೆದ್ದಿದೆ.
ಪೈಪ್ ಒಡೆದು ನೀರು ಪೋಲು: ಪಟ್ಟಣದ ಪ್ರಭಾತನಗರದ ಗಾಂಧಿನಗರದಲ್ಲಿ ಟ್ಯಾಂಕ್ಗೆ ನೀರು ಸರಬರಾಜು ಮಾಡುವ ಪೈಪ್ ಒಡೆದು ನೀರು ಚಿಮ್ಮುತ್ತಿತ್ತು. ಟ್ಯಾಂಕ್ ಭರ್ತಿಯಾಗಿ ನೀರು ಚೆಲ್ಲಿದ್ದು ಇದರಿಂದಾಗಿ ಸಾವಿರಾರು ಲೀಟರ್ ನೀರು ಪೋಲಾಗಿದೆ. ಶುಕ್ರವಾರ ಮಾಧ್ಯಮದವರು ಪಟ್ಟಣ ಪಂಚಾಯತಿಯ ಗಮನಕ್ಕೆ ತಂದ ನಂತರ ಇದನ್ನು ಸರಿಪಡಿಸಲಾಯಿತು. ಆದರೆ ಪ್ರಭಾತನಗದಲ್ಲಿ ಇನ್ನೂ ಕೆಲವೆಡೆ ನೆಲದಲ್ಲಿ ಹೂಳಲಾದ ಪೈಪುಗಳು ಒಡೆದಿದ್ದು, ಒಡೆದ ಪೈಪುಗಳಿಂದ ದಿನಕ್ಕೆ ಸಾವಿರಾರು ಲೀಟರು ನೀರು ಪೊಲಾಗುತ್ತಿದೆ. ಮನೆಗಳಿಗೆ ನೀರು ಸರಿಯಾಗಿ ಪೂರೈಕೆಯಾಗದೇ ಜನರು ಪರದಾಡುತ್ತಿದ್ದಾರೆ.
ಪ್ರಭಾತನಗರದ ಕೆಇಬಿ ಎದುರಿನಲ್ಲಿ ಫಾರೆಸ್ಟ್ ಕಾಲನಿಯ 2ನೇ ಅಡ್ಡರಸ್ತೆಯಲ್ಲಿ ಮನೆಯೊಂದಕ್ಕೆ ನೀರು ಸರಬರಾಜು ಮಾಡುವ ಪೈಪ್ ಒಡೆದು ಕಳೆದ ಹದಿನೈದು ದಿನಗಳಿಂದ ನೀರು ಪೂರೈಕೆ ಸ್ಥಗಿತವಾಗಿದೆ. ಹಾಳಾಗಿರುವ ಪೈಪ್ಗಳನ್ನು ದುರಸ್ತಿ ಮಾಡಲು ಪಟ್ಟಣ ಪಂಚಾಯತಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪಟ್ಟಣ ಪಂಚಾಯತಿ ಶಿಪಾರಸ್ಸು ಮಾಡಿದ ಪ್ಲಂಬರ್ ಬಂದು ಹಾಳಾದ ಪೈಪ್ ದುರಸ್ತಿ ಮಾಡದೇ ಇನ್ಯಾವುದೋ ಪೈಪನ್ನು ಬದಲಾಯಿಸಿ ಹಣ ತೆಗೆದುಕೊಂಡು ಹೋಗಿದ್ದಾರೆ. ಹಾಳಾದ ಪೈಪ್ ದುರಸ್ತಿಯಾಗದೇ ಈ ಮನೆಯವರು ನೀರಿಗಾಗಿ ಪರದಾಡುತ್ತಿದ್ದಾರೆ. ಹಲವಾರು ಬಾರಿ ದೂರಿದರೂ ಯಾವುದೇ ಕಾಳಜಿ ತೋರಿಸುತ್ತಿಲ್ಲ ಎಂದು ಅಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲುಷಿತ ನೀರು: ಪ್ರಭಾತನಗರ ವ್ಯಾಪ್ತಿಯಲ್ಲಿ ನೀರಿನ ಪೈಪ್ಗಳು ಒಡೆದು ನೀರು ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಕುಡಿಯುವ ನೀರಿನಲ್ಲಿ ಸೀಮೆಎಣ್ಣೆ ವಾಸನೆ ಬರುತ್ತಿದೆ. ಕಲುಷಿತ ನೀರು ಪೂರೈಕೆ ಯಾಗುತ್ತಿರುವುದರಿಂದ ಈ ನೀರಿನ ಸೇವನೆಯಿಂದ ರೋಗ ರುಜಿನಗಳ ಭಯ ಕಾಡುತ್ತಿದೆ. ಹಣವಿದ್ದವರು ಖಾಸಗೀ ಟ್ಯಾಂಕರ್ಗಳಿಂದ ಗಾಡಿಯೊಂದಕ್ಕೆ 300 ರಿಂದ 500 ರೂ. ರವರೆಗೆ ಹಣ ನೀಡಿ ನೀರು ತರಿಸಿಕೊಳ್ಳುತ್ತಿದ್ದಾರೆ. ಆದರೆ ಬಡವರು ನೀರಿಗಾಗಿ ಪರಿತಪಿಸುವ ಕಾಲ ಬಂದಿದೆ. ಪ್ರಭಾತನಗರ, ಗಾಂಧಿನಗರ, ಫಾರೆಸ್ಟ್ ಕಾಲನಿ ಸೇರಿದಂತೆ ಹಲವೆಡೆ ಪೈಪ್ಲೈನ್ಗಳಲ್ಲಿ ಉಂಟಾದ ದೋಷವನ್ನು ಸರಿಪಡಿಸಬೇಕು. ವರ್ಷದಲ್ಲಿ ಹಲವು ಬಾರಿ ಬೇರೆಬೇರೆ ಕಾರಣಗಳಿಂದ ರಿಪೇರಿಗೆ ಒಳಗಾಗುವ ಪೈಪ್ಲೈನ್ಗಳಿಂದ ಜನ ಪರದಾಡುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ಇದಕ್ಕಾಗಿ ಹೋರಾಟ ನಡೆಸಲಾಗುವುದು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
Leave a Comment