ಹೊನ್ನಾವರ:
ತಾಲೂಕಿನ ಶ್ರೀಕ್ಷೇತ್ರ ಬಂಗಾರಮಕ್ಕಿ ಗೇರಸೊಪ್ಪಾ ದಲ್ಲಿ ಸಿಲೆಕ್ಟ್ ಫೌಂಡೇಶನ್ (ರಿ.) ಇವರ ಆಶ್ರಯದಲ್ಲಿ ನಡೆಯುತ್ತಿದ್ದ ವಿಶೇಷ ಪೊರಕೆ ತಯಾರಿಕಾ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭವು ನಡೆಯಿತು. ಈ ಶಿಬಿರಕ್ಕೆ ಪಾಲ್ಗೊಂಡ ಪ್ರತಿಯೊಬ್ಬ ಶಿಬಿರಾರ್ಥಿಗಳಿಗೂ ಪ್ರಮಾಣ ಪತ್ರವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಂತಹ ಶಿಬಿರದ ತರಬೇತುದಾರರಾದ ಶರ್ಮಾ, ಗೋವಾ ಮಾತನಾಡಿ, ಇವತ್ತಿನ ದಿನಗಳಲ್ಲಿ ಕರಕುಶಲ ಕಲೆಗಳು ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ, ಇಂತಹ ವಿಶೇಷ ತರಬೇತಿಗಳ ಮೂಲಕ ಜನ ಸಾಮಾನ್ಯರಲ್ಲಿರುವ ಕೌಶಲ್ಯಗಳು ಅಭಿವೃದ್ಧಿಯಾಗಲು ಸಹಕಾರವಾಗಿದೆ ಎಂದು ಅಭಿಪ್ರಾಯಪಟ್ಟರು.
ನಂತರ ಕ್ಷೇತ್ರದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಮಾರುತಿ ಗುರೂಜಿ ಮಾತನಾಡಿ, ಯಾವುದೇ ಕೆಲಸ ಮಾಡುವಾಗ ತೋರಿಸುವ ನೈಪುಣ್ಯತೆಯೇ ಜೀವನ ಕೌಶಲ್ಯ. ಶಿಬಿರದಲ್ಲಿ ಕಲಿತಿರುವ ವಿದ್ಯೆಯನ್ನ ಇನ್ನೊಬ್ಬರಿಗೆ ಕಲಿಸುವ ನೈಪುಣ್ಯತೆಯನ್ನು ಶಿಬಿರಾರ್ಥಿಗಳು ಪಡೆದಿದ್ದಾರೆ, ಅದು ಬಹಳ ದೊಡ್ಡ ಕೊಡುಗೆಯಾಗಿದೆ. ಕಲಿತ ವಿದ್ಯೆಯನ್ನು ನಿರಂತರ ಅಭ್ಯಾಸ ಮಾಡಿದರೆ ಆ ವಿದ್ಯೆಯು ನಮ್ಮಲ್ಲಿ ನಿರಂತರವಾಗಿ ಇರುತ್ತದೆ, ಇಲ್ಲವಾದಲ್ಲಿ ಅದು ನಮ್ಮನ್ನು ಬಿಟ್ಟು ಹೊಗುತ್ತದೆ. ದೇವರೇ ಇಲ್ಲದ ಮನೆ ಇರಬಹುದು, ಆದರೆ ಸ್ವಚ್ಛತೆಯ ಸಂಕೇತವಾದ ಪೊರಕೆ ಇಲ್ಲದ ಮನೆ ಎಲ್ಲೂ ಕೂಡಾ ಇಲ್ಲ. ಬಡವನ ಮನೆಯಿಂದ ಶ್ರೀಮಂತನ ಮನೆಯವರೆಗೂ, ಆಸ್ತಿಕನ ಮನೆಯಿಂದ ನಾಸ್ತಿಕನ ಮನೆಯವರೆಗೂ ಗಮನಿಸಿದರೆ ಪೊರಕೆ ಇಲ್ಲದ ಮನೆಗಳಿಲ್ಲ. ಆದ್ದರಿಂದ ಸ್ವಚ್ಛತೆಯನ್ನು ಪ್ರತಿಬಿಂಬಿಸುವ ಪೊರಕೆಗೆ ಉತ್ತಮ ಸ್ಥಾನವನ್ನು ಕಲ್ಪಿಸಲಾಗಿದೆ. ಜೀವನಕ್ಕೆ ಸಾಧನವಾಗಿರುವ ಇಂತಹ ಕಲೆಗಳು ಅಳಿವಿನ ಅಂಚಿನಲ್ಲಿದ್ದು, ಅವುಗಳನ್ನು ಅಳಿಯಲು ಬಿಡದೆ ಉಳಿಸಿಕೊಂಡು ನಾವೂ ಬೆಳೆಯೋಣ ಹಾಗೂ ನಮ್ಮವರನ್ನೂ ಬೆಳೆಸೋಣ ಎನ್ನುತ್ತಾ ತರಬೇತಿಯನ್ನು ಪಡೆದ ಶಿಬಿರಾರ್ಥಿಗಳನ್ನು ಹಾಗೂ ತರಬೇತಿದಾರರನ್ನು ಆಶೀರ್ವದಿಸಿದರು.
ಈ ಕಾರ್ಯಕ್ರಮದಲ್ಲಿ ಶಿಬಿರದ ತರಬೇತುದಾರರಾದ ಶಿವರಾಮ ಕೃಷ್ಣ ಮಜಗಾಂವ್ಕರ್ ಹಾಗೂ ಅವರ ಪತ್ನಿ ಸೀಮಾ ಶಿವರಾಮ ಮಜಗಾಂವ್ಕರ್ ಹಾಗೂ ಸಂಸ್ಥೆಯ ಕಾರ್ಯಕರ್ತರು ಉಪಸ್ಥಿತರಿದ್ದರು.
Leave a Comment