ಕಾರವಾರ:
ದೇಶದ ಕೋಟಿ ಕೋಟಿ ಜನರ ಕನಸು ಪ್ರಧಾನಿ ಮಂತ್ರಾಲಯದ ಜೊತೆ ಬೆಸೆದುಕೊಂಡಿದ್ದು, ವರ್ಷಕ್ಕೆ 1.96 ಕೋಟಿ ಜನರಿಗೆ ಹೊಸ ಉದ್ಯೋಗ ಸೃಷ್ಠಿಸುವ ಸವಾಲು ಸ್ವೀಕರಿಸಿರುವದಾಗಿ ಕೇಂದ್ರ ಕೌಶಲ್ಯಾಭಿವೃದ್ದಿ ಹಾಗೂ ಉದ್ಯಮಶೀಲತೆ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಮದ್ಯಾಹ್ನ ನಡೆದ ಭಾರತೀಯ ಜನತಾ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ನೂತನ ಸಚಿವರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಎಪ್ಪತ್ತು ವರ್ಷಗಳಲ್ಲಿ ಭಾರತಲ್ಲಿ 4600 ಐಟಿಐ (ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್ಸಟಿಟ್ಯೂಟ್)ಗಳನ್ನು ಸ್ಥಾಪಿಸಲಾಗಿತ್ತು. ದೇಶದ ಬೆಳವಣಿಗೆಗೆ ಇದು ಸಾಲುವದಿಲ್ಲ ಎಂಬುದನ್ನು ಮನಗಂಡು ಮುಂದಿನ ಒಂದು ವರ್ಷದಲ್ಲಿ 20 ಸಾವಿರ ಐಟಿಐ ಸ್ಥಾಪನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆ ಹಾಗೂ ಕನಸು ಕಟ್ಟಿರುವ ಕೌಶಲ್ಯಾಭಿವೃದ್ದಿ ಮಂತ್ರಾಲಯ ದೇಶದ ಯುವಕರಿಗೆ ಅವಕಾಶ ನೀಡಲು ಮೂರು ವರ್ಷದ ಹಿಂದೆ ಹೊಸದಾಗಿ ರಚನೆಯಾಯಿತು. ಉದ್ಯೋಗ ಅವಷ್ಯಕತೆ ಇರುವವರಿಗೆ ಸೂಕ್ತ ತರಭೇತಿ ನೀಡಿ ಅವರಿಗೆ ಉದ್ಯೋಗ ಒದಗಿಸುವ ಸವಾಲು ಈ ಮಂತ್ರಾಲಯದ ಮೇಲಿತ್ತು. ಪ್ರಧಾನಿಯವರೇ ತನಗೆ ಮನೆಗೆ ಆಮಂತ್ರಿಸಿ ಆ ಸವಾಲನ್ನು ನನ್ನ ಹೆಗಲಿಗೇರಿಸಿದರು. ಆಕಸ್ಮಿಕವಾಗಿ ಬಂದ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸುವಂತೆ ಸೂಚಿಸಿದರು ಎನ್ನುತ್ತ ಅನಂತಕುಮಾರ ಹೆಗಡೆ ಸಚಿವರಾಗುವ ಹಿಂದಿನ ದಿನ ನಡೆದ ಘಟನಾವಳಿಗಳನ್ನು ಬಿಚ್ಚಿಟ್ಟರು. ಮಂತ್ರಿಯಾಗುವ ಹಿಂದಿನ ದಿನದವರೆಗೂ ನನಗೆ ಈ ಬಗ್ಗೆ ಮಾಹಿತಿಯಿರಲಿಲ್ಲ. ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ತಲೆ ಕೆಡಿಸಿಕೊಂಡಿರಲಿಲ್ಲ. ಸದ್ಯ ಪ್ರಧಾನಿಯವರು ನೀಡಿದ ಕೌಶಲ್ಯ ವಿಕಾಸ ಹಾಗೂ ಉದ್ಯಮ ಶೀಲತೆಯ ಜವಾಬ್ದಾರಿಯನ್ನು ಸವಾಲಾಗಿ ಸ್ವೀಕರಿಸಬೇಕಾಗಿದೆ. ಜನರ ಪ್ರೀತಿ ವಿಶ್ವಾಸದೊಂದಿಗೆ ಹೊಸ ಸವಾಲನ್ನು ಎದುರಿಸುವೆ ಎಂದು ಹೇಳಿದರು.
ಎಲ್ಲಡೆ ಹೊಸ ಕ್ಷೇತ್ರ ಹಾಗೂ ಹೊಸ ಉದ್ಯಮವನ್ನು ಸ್ಥಾಪಿಸಬೇಕು. ಬದಲಾವಣೆಗೆ ತಕ್ಕಂತೆ ನಾವು ಬದಲಾಗಬೇಕು. ವೇಗವನ್ನು ಹೆಚ್ಚಿಸಿಕೊಂಡು ಕೆಲಸ ಮಾಡುವ ಜವಾಬ್ದಾರಿ ಮಂತ್ರಾಲಯದ ಮೇಲಿದೆ ಎಂದರು. ನಾವು ವೇಗ ಹೆಚ್ಚಿಸಿಕೊಳ್ಳದಿದ್ದರೆ ಜಗತ್ತು ಮುಂದೆ ಹೋಗುತ್ತದೆ. ನಾವು ಹಿಂದುಳಿಯುತ್ತೇವೆ. 25 ವರ್ಷಗಳ ಹಿಂದೆ ಜನರಿಗೆ ಮೊಬೈಲ್ ಬ್ಯಾಂಕಿಂಗ್ ತಿಳಿದಿರಲಿಲ್ಲ. ಯಂತ್ರೋಪಕರಣಗಳ ಮೂಲಕ ಆಬರಣ ತಯಾರಿಕೆ ಮಾಡುವ ವಿಧಾನ ಗೊತ್ತಿರಲಿಲ್ಲ. ಆದರೆ ವೇಗಕ್ಕೆ ತಕ್ಕಂತೆ ನಾವು ಬದಲಾಗಿದ್ದೇವೆ. ಬದಲಾಗದಿದ್ದವರೂ ಹಿಂದೆ ಉಳಿದಿದ್ದಾರೆ ಎಂದರು. ವೇಗಕ್ಕೆ ತಕ್ಕಂತೆ ಬದಲಾಗುವದು ಮೇಲ್ನೋಟಕ್ಕೆ ಅಸಾದ್ಯ ಎನಿಸಿದರೂ ಮಾಡಲೇ ಬೇಕಿದೆ. ಅಸಾದ್ಯವಾದದನ್ನು ಮಾಡುವದೇ ಸವಾಲಾಗಿದೆ. ಕೇವಲ ಮಂತ್ರಾಲಯಕ್ಕೆ ಮಾತ್ರ ಸೀಮಿತವಾಗಿ ನಮ್ಮ ಜವಾಬ್ದಾರಿಯಿಲ್ಲ. ಇದರೊಂದಿಗೆ ಕ್ಷೇತ್ರ ಹಾಗೂ ರಾಜ್ಯದ ಸಮಸ್ಯೆಗಳನ್ನು ಪರಿಹರಿಸಬೇಕಿದೆ. ಈಗಾಗಲೇ ನೌಕಾನೆಲೆ ಸೇರಿದಂತೆ ಹಲವು ಸಮಸ್ಯೆಗಳ ತಾರ್ಕಿಕ ಅಂತ್ಯ ಮುಗಿದಿದೆ. ವ್ಯವಹಾರಿಕವಾಗಿ ಅಂತ್ಯ ಕಾಣಿಸಬೇಕಿದೆ ಎಂದರು.
ಉನ್ನತ ಪದವಿ ಪಡೆದವರಿಗೆ ಈಗ ಕೆಲಸ ಸಿಗುತ್ತಿಲ್ಲ. ಕಾರಣ ಎಲ್ಲರಲ್ಲಿಯೂ ಪದವಿ ಇದೆ. ಆದರೆ, ಪದವಿಗೆ ತಕ್ಕ ಕೌಶಲ್ಯವಿಲ್ಲ. ಅಂತವರಿಗೆ ಕೌಶಲ್ಯ ತರಭೇತಿ ನೀಡಿ ಜನರಿಗೆ ಕೆಲಸ ಸಿಗಬೇಕು. ಸ್ಥಳೀಯ ಜನರಿಗೆ ಯೋಗ್ಯತೆಗೆ ತಕ್ಕ ಕೆಲಸ ನೀಡುವ ಪ್ರಯತ್ನ ನಡೆಸಲಾಗುವದು ಎಂದು ಹೇಳಿದರು. ನಿಜವಾದ ವಿದ್ಯಾವಂತರಿಗೆ ಸೂಕ್ತ ಉದ್ಯೋಗ ನೀಡುವ ಕೆಲಸ ಮಂತ್ರಾಲಯದ ಮೇಲಿದೆ. ಶ್ರಮ ಆಗದೇ ಕೆಲಸ ಆಗಬೇಕು ಎಂಬ ಮನಸ್ಥಿತಿಯಿಂದ ಜನ ಹೊರಬರಬೇಕು. ಶ್ರಮ ಇಲ್ಲದಿದ್ದರೆ ಬದುಕಿಗೆ ಅರ್ಥವೇ ಇರುವದಿಲ್ಲ. ಹೀಗಾಗಿ ಯುವಕರು ದುಡಿದು ತಿನ್ನುವ ಪ್ರಯತ್ನ ಮಾಡಬೇಕು ಎಂದು ಕಿವಿಮಾತು ಹೇಳಿದರು. ಭೃಷ್ಠ ವ್ಯವಸ್ಥೆ ಮತದಾರನಲ್ಲದೇ ದೇಶವನ್ನೇ ಹಾಳು ಮಾಡುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
Leave a Comment