ಕಾರವಾರ: ಜಿಲ್ಲೆಯಲ್ಲಿ ಉದ್ಯೋೀಗ ಖಾತರಿ ಯೋಜನೆಯಲ್ಲಿ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಗೆ ನ್ಯಾಯಯುತವಾಗಿ ದೊರೆಯಬೇಕಾದ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಉದ್ಯೋಗ ಖಾತರಿ ಯೋಜನೆಯಲ್ಲಿ ಸೌಲಭ್ಯ ಪಡೆಯುವ ಫಲಾನುಭವಿಗಳು ಯೋಜನೆಯ ಮಾರ್ಗಸೂಚಿಯಲ್ಲಿ ತಿಳಿಸಿದಂತೆ ಕೆಲವು ಅಗತ್ಯ ದಾಖಲೆಗಳನ್ನ ನೀಡಬೇಕಾಗಿರುವುದು ನಿಯಮವಾಗಿದೆ. ಆದರೆ ಅಷ್ಟು ದಾಖಲೆಗಳನ್ನು ನೀಡಿದಾಗಲೂ ಸರಕಾರದ ಕೆಲವೊಂದು ಅವೈಜ್ಞಾನಿಕವಾದ ನಿಯಮಗಳಿಂದಾಗಿ ಸೌಲಭ್ಯವನ್ನು ಪಡೆಯುವಲ್ಲಿ ವಿಫ¯ರಾಗುವಂತೆ ಮಾಡಿದೆ.
ಗ್ರಾಮೀಣ ಭಾಗದಲ್ಲಿ ಜನರ ವಲಸೆ ತಪ್ಪಿಸುವುದು, ಗ್ರಾಮದಲ್ಲಿ ದುಡಿಯುವ ಕೈಗಳಿಗೆ ಉದ್ಯೋಗ ಒದಗಿಸಿಕೊಡುವ ಜೊತೆಗೆ ದೀರ್ಘಕಾಲಿಕ ಬಾಳಿಕೆ ಬರುವ ಆಸ್ತಿ ನಿರ್ಮಾಣದ ಕಾಮಗಾರಿಗಳ ಅನುಷ್ಠಾನ ಇದು ಉದ್ಯೋಗ ಖಾತರಿಯ ಯೋಜನೆಯ ಕಾಯಿದೆಯಲ್ಲಿ ಸ್ಪಷ್ಟವಾಗಿ ಪ್ರಸ್ತಾಪಿಸಲಾಗಿದೆ.
ಈ ಎಲ್ಲ ಸೌಲಭ್ಯಗಳನ್ನು ಪಡೆಯಬೇಕಾದರೆ ಫಲಾನುಭವಿಗಳು ಅಗತ್ಯ ಮೂಲ ದಾಖಲೆಯ (ರೇಷನ್ ಕಾರ್ಡ್, ಮನೆ ತೆರಿಗೆ ಪಾವತಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಪೋಟೊ) ಜೊತೆಗೆ ಹಿಡುವಳಿ ಪ್ರಮಾಣ ಪತ್ರವನ್ನು ನೀಡಬೇಕೆಂದು ಹೇಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಕುಟುಂಬದ ಶೇ.80 ರಷ್ಟು ಕುಟುಂಬಗಳು ಗ್ರಾಮೀಣ ಭಾಗದಲ್ಲಿ ಸಣ್ಣ ಹಿಡುವಳಿದಾರರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಸೌಲಭ್ಯವನ್ನು ಪಡೆಯುವ ಫಲಾನುಭವಿಗಳಿಗೆ ಹಿಡುವಳಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕೆಂದರೆ ಅದನ್ನು ತಹಸೀಲ್ದಾರರ ಕಚೇರಿಯಿಂದ ಪಡೆಯಬೇಕು.
ಹಿಡುವಳಿ ಪ್ರಮಾಣ ಪತ್ರದಿಂದ ಒಬ್ಬ ವ್ಯಕ್ತಿ ಎಷ್ಟು ಎಕರೆ ಜಾಗವನ್ನು ಹೊಂದಿದ್ದಾನೆ. ಆತ ದೊಡ್ಡ/ಮಧ್ಯಮ/ಸಣ್ಣ ಹಿಡುವಳಿದಾರನೆ? ಹಾಗೂ ಆ ವ್ಯಕ್ತಿಯು ತಾಲೂಕಿನ ಯಾವ ಯಾವ ಭಾಗದಲ್ಲಿ ಜಮೀನು ಹೊಂದಿದ್ದಾನೆ ಎನ್ನುವ ಮಾಹಿತಿಯು ಹಿಡುವಳಿ ಪ್ರಮಾಣ ಪತ್ರವು ಹೊಂದಿರುತ್ತದೆ. ಇದನ್ನು ಫಲಾನುಭವಿ ಪಡೆಯಬೇಕೆಂದರೆ ತಹಸೀಲ್ದಾರ್ ಕಚೇರಿಯಲ್ಲಿ ಪಡೆಯಬೇಕು.
ಜಿಲ್ಲೆಯ ಬಹುತೇಕ ಹಳ್ಳಿಗಳು ಗುಂಪು ಕುಟುಂಬಗಳಿಂದ ಕೂಡಿವೆ. ಹಾಲಕ್ಕಿ, ಗುನಗಿ, ಕೋಮಾರಪಂಥ, ಮರಾಠಿ, ಸಿದ್ದಿ ಮೊದಲಾದ ಕುಟುಂಬಗಳು ಸೀಮಿತ ಕ್ಷೇತ್ರದ ಸ್ಥಳವನ್ನು ಹೊಂದಿದ್ದು ಒಂದು ಹಾಲಕ್ಕಿ ಕುಟುಂಬ 10 ಗುಂಟೆ ಜಾಗವನ್ನು ಹೊಂದಿದ್ದರೆ ಅದರಲ್ಲಿ ಅವರ ಅಣ್ಣ ತಮ್ಮಂದಿರು ಹಾಗೂ ದಾಯಾದಿಗಳು ಪಾಲುದಾರರಾಗಿರುತ್ತಾರೆ. ಅಂದರೆ ಒಂದು ಕ್ಷೇತ್ರದ ಭೂಮಿಯಲ್ಲಿ ಎಲ್ಲರೂ ಸಮಪಾಲುದಾರರಾಗಿದ್ದು ಪ್ರತ್ಯೇಕವಾಗಿ ತಮ್ಮ ಕ್ಷೇತ್ರವನ್ನು ನಿರ್ಧರಿಸುವ ಪಹಣಿಯನ್ನು ಹೊಂದಿರುವದಿಲ್ಲ.
ಈ ಹಿಡುವಳಿಯ ಪತ್ರವನ್ನು ಪಡೆಯಬೇಕಾದರೆ ಸೌಲಭ್ಯ ಪಡೆಯುವ ಫಲಾನುಭವಿಯು ತಹಸೀಲ್ದಾರ್ ಕಚೇರಿಗೆ ಹೋಗಬೇಕು. ಅಲ್ಲಿ ತನಗೆ ಹಿಡುವಳಿ ಪ್ರಮಾಣ ಪತ್ರ ನೀಡುವಂತೆ ಅರ್ಜಿ ಸಲ್ಲಿಸಿದರೆ ಅವನಿಗೆ ಆ ಪ್ರಮಾಣ ಪತ್ರ ನೀಡಲು ಸಾಧ್ಯವಿಲ್ಲ ಎನ್ನುತ್ತಾರೆ ಕಂದಾಯ ಅಧಿಕಾರಿಗಳು.
ಆ ವ್ಯಕ್ತಿ ಹೊಂದಿದ ಜಮೀನಿನಲ್ಲಿ ಇವನೊಬ್ಬನ ಹೆಸರು ಇರದೆ ಈತನ ಅಣ ್ಣತಮ್ಮನ ಜೊತೆ ಆತನ ದಾಯಾದಿಗಳ ಹೆಸರು ಅಲ್ಲಿರುತ್ತದೆ. ಜಮೀನು ಕೂಡ ಫೊಡಿ ಆಗಿರುವದಿಲ್ಲ. ಕುಟುಂಬಗಳ ಭೂಮಿ ಪ್ರತ್ಯೇಕವಾಗಿ ಕಂದಾಯ ದಾಖಲೆಯಲ್ಲಿ ಎಂಟ್ರಿಯಾಗದ ಕಾರಣ ಕಂದಾಯ ಅಧಿಕಾರಿಗಳು ಹಿಡುವಳಿಯ ಪತ್ರವನ್ನು ನೀಡುವುದಿಲ್ಲ. ಯೋಜನೆಯಲ್ಲಿ ಸೌಲಭ್ಯಪಡೆಯಲು ಗ್ರಾಮಸ್ಥರು ಪಂಚಾಯತ್ ಅಥವಾ ಕೆಲವು ಕಚೇರಿಗೆ ಹೋದರೆ ಹಿಡುವಳಿ ಕಡ್ಡಾಯವಾಗಿ ನೀಡಬೇಕು. ಅಂದರೆ ಮಾತ್ರ ಸೌಲಭ್ಯ ಇಲ್ಲವಾದರೆ ಇಲ್ಲ ಎಂದು ಹೇಳಿರುವದರಿಂದ ಸಾಕಷ್ಟು ಬಡ ಕುಟುಂಬಗಳು ಸೌಲಭ್ಯದಿಂದ ವಂಚಿತರಾಗುವಂತಾಗಿದೆ.
ಯೋಜನೆಯಲ್ಲಿ ತಿಳಿಸಿರುವಂತೆ ಗ್ರಾಮೀಣ ಭಾಗದಲ್ಲಿ ಜನರು ದನದಕೊಟ್ಟಿಗೆ, ಅಡಿಕೆ, ತೆಂಗು, ಕಾಳುಮೆಣಸು, ಕೃಷಿ ಬಾವಿ, ಎರೆಹುಳು ಗೊಬ್ಬರದ ತೊಟ್ಟಿ, ಕೃಷಿ ಹೊಂಡ, ಕೋಳಿ ಗೂಡು, ಹಂದಿಗೂಡು, ಕುರಿ ದೊಡ್ಡಿಗಳನ್ನು ವಯಕ್ತಿಕವಾಗಿ ಮಾಡಿಕೊಳ್ಳಲು ಅವಕಾಶವಿದೆ. ಈ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅದಕ್ಕೆ ಅದರದೆ ಅದ ಪ್ರತ್ಯೇಕವಾದ ಅನುದಾನದ ಅಂದಾಜು ಪಟ್ಟಿ ಇದೆ. ಸಂಬಂಧಿಸಿದ ಇಲಾಖೆಗಳು ಈ ಕಾಮಗಾರಿಗಳನ್ನು ಗ್ರಾಮ ಪಂಚಾಯತ್ ಹಂತದಲ್ಲಿ ಅನುಷ್ಠಾನದ ಜವಾಬ್ದಾರಿ ಹೊತ್ತಿದೆ. ಉದ್ಯೋಗ ಖಾತರಿ ಯೋಜನೆ ಸೇರಿದಂತೆ ಇತರೆ ಯೋಜನೆಗಳಿಗೆ ಸೌಲಭ್ಯವನ್ನು ಪಡೆಯಲು ಹಿಡುವಳಿ ಪ್ರಮಾಣ ಪತ್ರದಿಂದ ವಿನಾಯತಿ ನೀಡಬೇಕು ಎನ್ನುವುದು ಹಲವು ಗ್ರಾಮ ಪಂಚಾಯತ್ ಪ್ರತಿನಿಧಿಗಳ ಆಗ್ರಹವಾಗಿದೆ.
Leave a Comment