ಕಾರವಾರ:
ನಗರದ ಹೃದಯಭಾಗದಲ್ಲಿ ಕುಟುಂಬವೊಂದು ಶೋಚನೀಯ ಬದುಕು ನಡೆಸುತ್ತಿರುವದು ಬೆಳಕಿಗೆ ಬಂದಿದೆ.
ಪಂಚರಾಶಿವಾಡದಲ್ಲಿ ಶೌಚಾಲಯವೂ ಇಲ್ಲದ ಮುರುಕಲು ಮನೆಯಲ್ಲಿ ತುಂಬಿಕೊಂಡಿರುವ ಕಸದ ರಾಶಿ ಮದ್ಯಯೇ 30 ವರ್ಷಗಳಿಂದ ಚಂದ್ರಕಲಾ ಮಾಳ್ಸೆಕರ್ ಎಂಬಾತರು ಕುಟುಂಭದವರೊಂದಿಗೆ ವಾಸವಿದ್ದಾರೆ. ಚಂದ್ರಕಲಾ ಮಾಳ್ಸೇಕರ್ಗೆ ಸುಮಿತಾ ಎಂಬ 23 ವರ್ಷದ ಮಗಳಿದ್ದು, ಆಕೆ ಮಾನಸಿಕ ಅಸ್ವಸ್ಥೆಯಾಗಿರುವದು ಗಮನಕ್ಕೆ ಬಂದಿತು. ಚಂದ್ರಕಲಾರ ಪತಿ ಕೂಡ ಮಾನಸಿಕ ಅಸ್ವಸ್ಥರಾಗಿದ್ದಾರೆ. ನಗರದಲ್ಲಿ ಅಲೆದಾಡುತ್ತಿದ್ದಾರೆ. ಇವರಿಗೆ ಇಬ್ಬರು ಪುತ್ರಿಯರಿದ್ದು, ಒಬ್ಬಳು ಈ ಹಿಂದೆ ಮಾನಸಿಕ ಸ್ಥಿರತೆ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಚಂದ್ರಕಲಾ ವಿವರಿಸಿದರು. ಕಳೆದ 10 ವರ್ಷಗಳಿಂದ ಸುಮಿತಾ ಕೂಡ ಮಾನಸಿಕವಾಗಿ ಜರ್ಜರಿತವಾಗಿದ್ದಾರೆ. ಗೋವಾದ ಬಾಂಬೋಲಿಯಲ್ಲಿ ಈಕೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಔಷಧಿ ಕೂಡ ಪಡೆಯಲು ವೈದ್ಯರು ತಿಳಿಸಿದ್ದರು. ಆದರೆ ಬಡತನದ ಕಾರಣದಿಂದ ಔಷಧಿಯನ್ನು ಪೂರೈಸುವ ಸಾಮಥ್ರ್ಯ ಕುಟುಂಬಕ್ಕಿಲ್ಲ. ಹೀಗಾಗಿ ಸುಮಿತಾ ಮಾಳ್ಸೆಕರ್ ಜೀವನ ಕಸದ ರಾಶಿಯಲ್ಲಿಯೇ ಕೊರಗುತ್ತಿದೆ.
ಈ ಕುಟುಂಬ ನಗರಸಭೆಗೆ ಮನೆ ತೆರಿಗೆ ಪಾವತಿಸುತ್ತದೆ. ಹೆಸ್ಕಾಂಗೆ ವಿದ್ಯುತ್ ಬಿಲ್ ಕಟ್ಟುತ್ತದೆ. ಹೀಗಿರುವಾಗ ಮೂರು ದಶಕಗಳಿಂದ ಇಲ್ಲಿ ವಾಸವಿದ್ದರೂ ಇವರ ಬದುಕಿನ ಬಗ್ಗೆ ಕೇಳುವವರಿಲ್ಲದಂತಾಗಿದೆ. ಸರ್ಕಾರ ಜಾರಿಗೆ ತರುವ ಯೋಜನೆಗಳು ಇವರಿಗೆ ದೊರಕುತ್ತಿಲ್ಲ. ಈ ವಿಷಯ ಅರಿತ ಜನಶಕ್ತಿ ವೇದಿಕೆಯವರು ಬದುಕು ಸಾಗಿಸುತ್ತಿದ್ದ ಈ ಕುಟುಂಬಕ್ಕೆ ಆಸರೆಯಾಗಲು ಮುಂದೆ ಬಂದಿದ್ದು, ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದರು. ಕಳೆದ ಕೆಲ ದಿನಗಳ ಹೊಂದೆ ಇಂತಹುದೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದ್ದನ್ನು ವೇದಿಕೆಯವರು ನೆನಪಿಸಿಕೊಂಡರು. ಸರ್ಕಾರ ಎಲ್ಲಡೆ ಶೌಚಾಲಯ ನಿರ್ಮಾಣಕ್ಕೆ ಪ್ರಚಾರ ನೀಡುತ್ತಿದೆ. ಆದರೆ, ನಗರ ವ್ಯಾಪ್ತಿಯಲ್ಲಿಯೇ ಇಂತಹ ಕುಟುಂಬವಿದ್ದರೂ ಅವರ ಅಳಲು ಆಲಿಸುವವರಿಲ್ಲ ಎಂದು ಮಾಧವ ನಾಯಕ ಅಸಮಧಾನ ವ್ಯಕ್ತಪಡಿಸಿದರು. ಮಾನಸಿಕ ಅಸ್ವಸ್ಥರಾದವರನ್ನು ಆಸ್ಪತ್ರೆಗೆ ಕಳುಹಿಸಿದ ವೇದಿಕೆಯವರು, ಶೋಚನಿಯ ಸ್ಥಿತಿಯಲ್ಲಿ ಬದುಕುತ್ತಿರುವವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಸಬೇಕು ಎಂದು ಆಗ್ರಹಿಸಿದರು.
Leave a Comment