ಹಳಿಯಾಳ:
ಪಟ್ಟಣದ ದೇಶಪಾಂಡೆನಗರÀ ಚವ್ಹಾಣಪ್ಲಾಟ್ನ ಪಡಿತರ ಚೀಟಿದಾರರು ಪಡಿತರ ವಿತರಣೆಯಲ್ಲಿ ಆಗುತ್ತಿರುವ ತೊಂದರೆಯನ್ನು ಕೂಡಲೇ ಪರಿಹರಿಸುವಂತೆ ಆಗ್ರಹಿಸಿ ಹಳಿಯಾಳ ಬಿಜೆಪಿ ಘಟಕ ಪ್ರತಿಭಟನೆ ನಡೆಸಿ ತಹಶೀಲ್ದಾರ ವಿದ್ಯಾಧರ ಗುಳಗುಳಿಯವರಿಗೆ ಮನವಿ ಸಲ್ಲಿಸಿತು.
ಮನವಿಯಲ್ಲಿ ಪಟ್ಟಣದ ರೈತರ ಸೇವಾ ಸಹಕಾರಿ ಸಂಘದವರು ನಡೆಸುತ್ತಿರುವ ಪಡಿತರ ಅಂಗಡಿಯಲ್ಲಿ ಸುಮಾರು 3 ಸಾವಿರಕ್ಕಿಂತಲೂ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿದ್ದು ಪಡಿತರದಾರರಿಗೆ ವಿತರಿಸಲು ತೊಂದರೆ ಆಗುತ್ತಿರುವ ಕಾರಣ ದೇಶಪಾಂಡೆನಗರದಲ್ಲಿ ಉಪ ಪಡಿತರ ಅಂಗಡಿ ತೆರೆದಿದ್ದು ಅಲ್ಲಿ ಪಡಿತರ ವಿತರಿಸದೆ ಇರುವುದರಿಂದ ಬಡ ಜನರಿಗೆ ತೊಂದರೆಯಾಗುತ್ತಿದ್ದು ಕೂಲಿ ಕೆಲಸವನ್ನು ಬಿಟ್ಟು ಬೆಳಿಗ್ಗೆ 6 ರಿಂದ ಸರತಿ ಸಾಲಿನಲ್ಲಿ ನಿಂತು ಸಂಜೆಯವರೆಗೂ ತೊಂದರೆ ಅನುಭವಿಸುವಂತಾಗಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಆಗಿರುವ ಸಮಸ್ಯೆಯನ್ನು ಸರಿಪಡಿಸಬೇಕು.
ರಾಜ್ಯ ಸರ್ಕಾರ ಮಹತ್ವಕಾಂಕ್ಷೆ ಯೋಜನೆಯಾದ “ಅನ್ನ ಭಾಗ್ಯ” ಯೊಜನೆಯ ಪಡಿತರ ಉಚಿತವಾಗಿ ನೀಡುತ್ತಿದ್ದರು ಕೂಡಾ ದೂರದಿಂದ ಬಂದು ಅದನ್ನು ಪಡೆದು ಸಾಗಿಸಲು ರಿಕ್ಷಾ ಇನ್ನಿತರ ಬಾಡಿಗೆ ವಾಹನದಲ್ಲಿ ಬರಬೇಕಾಗಿದೆ ಪ್ರತಿ ತಿಂಗಳ ಕೊನೆಯ 5 ದಿನ ಮಾತ್ರ ಪಡಿತರ ವಿತರಿಸುವುದರಿಂದ ಆಗುತ್ತಿರುವ ಸಮಸ್ಯೆಯನ್ನು ನಿವಾರಿಸಲು ದೇಶಪಾಂಡೆನಗರ, ಚವ್ಹಾಣಪ್ಲಾಟ್ನಲ್ಲಿ ಪಡಿತರ ಸಿಗುವ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಲಾಗಿದ್ದು ಆಗಿರುವ ಸಮಸ್ಯೆಗೆ ಪರಿಹಾರ ದೊರೆಯದೆ ಇದ್ದರೇ ಮುಂದಿನ ಕೆಲವೆ ದಿನಗಳಲ್ಲಿ ಪ್ರತಿಭಟನೆಯ ಹಾದಿ ತುಳಿಯಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ.
ಪ್ರತಿಭಟನೆಯಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಮುಖಂಡರಾದ ಅನೀಲ ಮುತ್ನಾಳೆ, ರಾಘವೆಂದ್ರ ನಾಯ್ಕ, ನಾರಾಯಣ ಬೆಳಗಾಂವಕರ, ಗಣಪತಿ ಕರಂಜೇಕರ, ವಾಸುದೇವ ಪೂಜಾರಿ, ಇಲಿಯಾಸ ಬಳಿಗಾರ, ರಾಘವೆಂದ್ರ ಚಲವಾದಿ, ಅನೀಲ ಗಿರಿ, ನಾರಾಯಣ ಅಂತ್ರೋಳಕರ, ಲಕ್ಷ್ಮಣ ಗಜಾಕೊಶ, ಬಾಬಿ ತೊರ್ಲೆಕರ ಇನ್ನಿತರರು ಇದ್ದರು.
Leave a Comment