ಕಾರವಾರ:
ಚೆಂಡಿಯಾದಲ್ಲಿರುವ ನಾಗರಮಡಿ ಜಲಪಾತದಲ್ಲಿ ಪ್ರಕೃತಿ ವಿಕೋಪದಿಂದ ಮೃತ ಪಟ್ಟವರ ಕುಟುಂಬದವರಿಗೆ ಸರಕಾರದಿಂದ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಜಿಲ್ಲಾಡಳಿತಕ್ಕೆ ಗುರುವಾರ ಮನವಿ ಸಲ್ಲಿಸಿದರು.
ಜಿಲ್ಲೆಯ ಅನೇಕ ಭಾಗಗಳು ಪ್ರವಾಸಿ ತಾಣಗಳಾಗಿ ಬೆಳೆಯುತ್ತಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಈ ಪ್ರವಾಸಿತಾಣಗಳ ಪಟ್ಟಿಗೆ ಸೇರಿದ ನಾಗರಮಡಿ ಜಲಪಾತವೂ ಕೂಡ ಪ್ರೇಕ್ಷಣೀಯ ಸ್ಥಳವಾದ ಕಾರಣ ಇದರ ವೀಕ್ಷಣೆಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ವಿವಿಧ ಮಾಧ್ಯಮಗಳ ಮೂಲಕ ಈ ಸ್ಥಳದ ಬಗ್ಗೆ ತಿಳಿದುಕೊಂಡ ಹೊರ ರಾಜ್ಯದ ಪ್ರವಾಸಿಗರೂ ಕೂಡ ಇಲ್ಲಿ ಆಗಮಿಸಿ ಖುಷಿ ಪಡುತ್ತಿದ್ದರು. ಆದರೆ ಈ ಪ್ರದೇಶವು ಅಷ್ಟೇ ಅಪಾಯಕಾರಿಯೂ ಆಗಿದ್ದು ಹಿಂದಿನ ವರ್ಷಗಳಲ್ಲಿ ಅನೇಕ ಸಾವು ನೋವುಗಳು ಸಂಭವಿಸಿವೆ. ಆದರೂ ಕೂಡ ಜಿಲ್ಲಾಡಳಿತವು ಈ ಪ್ರದೇಶದ ಬಗ್ಗೆ ಸೂಕ್ತ ಪ್ರತಿಬಂಧವನ್ನು ಹೇರಿರಲಿಲ್ಲ. ಅಲ್ಲಿ ಯಾವುದೇ ಕಾವಲುಗಾರರನ್ನು ನೇಮಿಸಿಲ್ಲ. ಹಾಗೂ ನಿಷೇಧಿತ ಪ್ರದೇಶವೆಂಬ ಸೂಷನಾ ಫಲಕವನ್ನು ಕೂಡ ಅಳವಡಿಸಿಲ್ಲ ಎಂದು ಆರೋಪಿಸಿದರು.
ಸೆ.17 ರಂದು ಗೋವಾ ರಾಜ್ಯದಿಂದ ತಂಡ ತಂಡವಾಗಿ ಪ್ರವಾಸಿಗರು ನಾಗರ ಮಡಿಯ ಸೌಂದರ್ಯ ಸವಿಯಲು ಬಂದಿದ್ದರು. ಆದರೆ ಆ ದಿನ ಭಾರೀ ಮಳೆ ಸುರಿದ ಪರಿಣಾಮವಾಗಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಬಂಡೆಗಲ್ಲುಗಳ ಮೇಲೆ ನಿಂತಿದ್ದ ಪ್ರವಾಸಿಗರ ತಂಡದಲ್ಲಿದ್ದ ಸಮೀರ ಗಾವಡೆ(32), ಸಿದ್ದೇಶ ಚಾರಿ(22), ಪಿಯೊನಾ ಪಾಚಿಕೊ(29), ರೇಣುಕಾ(23), ಮಾರ್ಸೆಲಿನಾ(32) ಹಾಗೂ ಪ್ರಾಸಿಲಾ ಪ್ಯಾರಿಸ್(38) ಈ ಆರು ಜನರು ಏಕಾ ಏಕಿ ಬಂದ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಅದೇ ದಿನ 2 ಮೃತದೇಹಗಳು ದೊರಕಿದ್ದು ಮಾರನೇ ದಿನ ಸೆ.18ರಂದು 3 ಹಾಗೂ ಸೆ.19 ರಂದು ಇನ್ನುಳಿದ 1 ಮೃತದೇಹವು ದೊರಕಿದೆ. ಈ ಎಲ್ಲ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆ ಮಾಡಿಸಿ ಸಂಬಂಧ ಪಟ್ಟವರಿಗೆ ಹಸ್ತಾಂತರಿಸಲಾಗಿದೆ. ಈ ಘಟನೆಯು ಪ್ರಕೃತಿ ವಿಕೋಪದಿಂದ ಉಂಟಾಗಿರುವ ಕಾರಣ ಸರಕಾರದಿಂದ ದೊರೆಯುವ ತಲಾ 6 ಲಕ್ಷ ರೂ. ಪರಿಹಾರವನ್ನು ಅವರ ಕುಟುಂಬದವರಿಗೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಫಕೀರಪ್ಪ ಭಂಡಾರಿ, ರಾಜು ನಾಯ್ಕ, ಸುರೇಶ ನಾಯ್ಕ, ವಿಲ್ಸನ್ ಫರ್ನಾಂಡೀಸ್ ಇದ್ದರು.
Leave a Comment