ಕಾರವಾರ:
ಅಶಕ್ತರು, ಮಹಿಳೆಯರು, ಬಡವರು, ಅನ್ಯಾಯಕ್ಕೊಳಗಾದವರ ರಕ್ಷಣೆಗೆ ಪೊಲೀಸರು ಸದಾ ಸಿದ್ದರಿರಬೇಕು ಎಂದು ಪಶ್ಚಿಮ ವಲಯ ಪೊಲೀಸ್ ಮಹಾನಿರ್ದೇಶಕ ಹೇಮಂತ ನಿಂಬಾಳ್ಕರ ಕರೆ ನೀಡಿದರು.
ಕಾಜುಬಾಗದಲ್ಲಿರುವ ಪೊಲೀಸ್ ಮೈದಾನದಲ್ಲಿ ಶನಿವಾರ ನಡೆದ ಜಿಲ್ಲಾ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 11ನೇ ತಂಡದ ನಾಗರಿಕ ಪೊಲೀಸ್ ಕಾನ್ಸ್ಟೆಬಲ್ಗಳ ನಿರ್ಗಮನ ಪಥ ಸಂಚಲನದಲದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಪೊಲೀಸರು ಕರ್ತವ್ಯಕ್ಕೆ ಸೇರುವ ಸಂದರ್ಭದಲ್ಲಿ ತಾವು ತೆಗೆದುಕೊಂಡಿರುವ ಪ್ರತಿಜ್ಞೆಯನ್ನು ಹೊರತು ಪಡಿಸಿ ಉಳಿದೆಲ್ಲವನ್ನು ಮಾಡುತ್ತಿರುವುದು ಕಂಡು ಬರುತ್ತಿದೆ. ಈ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದರಿಂದ ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ಗೌರವವೇ ದೂರವಾಗುತ್ತಿದೆ. ಖಾಕಿ ಧರಿಸಿದ ಮಾತ್ರಕ್ಕೆ ಅದರ ದರ್ಬಾರ್ ತೋರಿಸುವುದು ಪೊಲೀಸರ ಕಾರ್ಯವಲ್ಲ ಎಂದು ಅವರು ಹೇಳಿದರು. ಅಶಕ್ತರು, ಮಹಿಳೆಯರು, ಬಡವರು ಹಾಗೂ ಅನ್ಯಾಯಕ್ಕೆ ಒಳಗಾದವರ ಮೇಲೆ ದರ್ಪ ತೋರುವುದು ಕರ್ತವ್ಯ ಅಲ್ಲ. ಲಾಠಿ, ಬಂದೂಕುಗಳನ್ನು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ನೀಡಿರುವುದೇ ಹೊರತು ದೌರ್ಜನ್ಯ ಎಸಗಲು ಅಲ್ಲ. ನಿಜವಾಗಿ ಪೊಲೀಸರ ಶತ್ರುಗಳು ಕಳ್ಳರಾಗಲೀ, ಇತರ ಅಪರಾಧಿಗಳಲ್ಲ. ಕ್ರೋಧ ಹಾಗೂ ದರ್ಪವೇ ನಮ್ಮ ಪ್ರಮುಖ ಶತ್ರುವಾಗಿದೆ. ಮುಖ್ಯಮಂತ್ರಿಗಳು ಹೇಳುವಂತೆ ಯಾವಾಗಲೂ ಜನಸ್ನೇಹಿ ಪೊಲೀಸರಾಗಬೇಕು ಎಂದು ಹೇಳಿದರು.
ಜನರಿಗೆ ಧೈರ್ಯ ಸಮಾಜಕ್ಕೆ ಸ್ಥೈರ್ಯ ನೀಡುವ ಕಾರ್ಯ ಪೋಲೀಸರದ್ದಾಗಿದೆ. ಆದರೆ ಯಾವುದೇ ಗಲಾಟೆಗಳನ್ನು ಗಮನಿಸಿದರೆ ಇತರ ನೌಕರರಿಗಿಂತ ಪೊಲೀಸರದ್ದೇ ಗಲಾಟೆಗಳು ಹೆಚ್ಚು ಕಂಡು ಬರುತ್ತವೆ. ಪೊಲೀಸರು ತಾಳ್ಮೆ ಕಳೆದು ಕೊಳ್ಳಬಾರದು. ಬೋಧಿಸಲಾಗಿರುವ ಪ್ರತಿಜ್ಞಾ ವಿಧಿಯನ್ನು ಪ್ರತಿಯೊಬ್ಬ ಪೊಲೀಸರು ತಮ್ಮ ಮನೆಯ ಗೋಡೆಗೆ ಫಲಕದಂತೆ ಅಳವಡಿಸಿ ಕೊಂಡು ಅದನ್ನು ಪ್ರತಿದಿನವೂ ಪ್ರಾರ್ಥನೆಯಂತೆ ಓದಬೇಕು ಎಂದು ಸಲಹೆ ನೀಡಿದರು.
2017ರ ಫೆ.22 ರಿಂದ ಪ್ರಾರಂಭವಾದ ಈ ತರಬೇತಿಯಲ್ಲಿ ಮೈಸೂರಿನ 46, ಗುಲ್ಬರ್ಗಾದ 25, ಕೋಲಾರದ 17, ಶಿವಮೊಗ್ಗದ 13, ದಾವಣಗೆರೆಯ 11 ಹಾಗೂ ಹುಬ್ಬಳ್ಳಿ-ಧಾರವಾಡದ 9 ಪೊಲೀಸ್ ಪೇದೆಗಳು ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ಇವರಲ್ಲಿ 6 ಸ್ನಾತಕೋತ್ತರ ಪದವೀಧರರು, 77 ಪದವೀಧರರು, 8 ಬಿಎಡ್ ಪದವೀಧರರು, 5 ಡಿಎಡ್ ಪದವಿಧರರು ಹಾಗೂ 5 ಮಂದಿ ಮಾಜಿ ಸೈನಿಕರು ಇದ್ದರು. ತರಬೇತಿಯ ಅವಧಿಯಲ್ಲಿ ಇವರಿಗೆ ಹಲವು ವಿಷಯಗಳ ಕುರಿತು ಬೋಧನೆಯನ್ನೂ ಮಾಡಲಾಗಿದೆ. ಒಳಾಂಗಣ ವಿಷಯಗಳಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ.ವಿಶ್ವನಾಥ ಎಂ. ನಾಯ್ಕ ಇವರು ಆಧುನಿಕ ಭಾರತದಲ್ಲಿ ಪೊಲೀಸರ ಪಾತ್ರ ಈ ವಿಷಯದ ಕುರಿತು, ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕಿ ಸುಮನ್ ಜಿ.ಸಾವಂತ ಇವರು ಮನಃಶಾಸ್ತ್ರ ಮತ್ತು ಅಪರಾಧ ಶಾಸ್ತ್ರ ಈ ವಿಷಯದ ಕುರಿತು ಹಾಗೂ ನಿವೃತ್ತ ಎ.ಎಸ್.ಐ. ರಾಮಾ ನಾಯ್ಕ ಇವರು ಪೊಲೀಸ್ ಮ್ಯಾನುವಲ್ ಭಾಗ-2 ಹಾಗೂ ಭಾಗ-3 ಈ ವಷಯಗಲ ಕುರಿತು ಪ್ರಶಿಕ್ಷಣಾರ್ಥಿಗಳಿಗೆ ಉಪನ್ಯಾಸ ನೀಡಿದ್ದಾರೆ. ಜೊತೆಗೆ ಹೊರಾಂಗಣ ವಿಷಯಗಳಲ್ಲಿ ಯೋಗವನ್ನು ಡಾ. ಪ್ರಕಾಶ ಎ.ಜೆ., ಕರಾಟೆಯನ್ನು ಜಿಲ್ಲೆಯ ಹಿರಿಯ ಕರಾಟೆ ಶಿಕ್ಷಕ ಸಿ.ರಾಜನ್ ಹಾಗೂ ಸ್ವಿಮ್ಮಿಂಗನ್ನು ಉಮೇಶ ತಾಂಡೇಲ ಬೋಧಿಸಿದ್ದಾರೆ.
ತರಬೇತಿಯಲ್ಲಿ ವಿವಿಧ ವಿಭಾಗಗಳಲ್ಲಿ ಸಾಧನೆ ತೋರಿದವರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಒಳಾಂಗಣ ವಿಷಯಗಳ ಪರೀಕ್ಷೆಯಲ್ಲಿ ಮೈಸೂರಿನ ಅವಿನಾಶ್ ಪ್ರಥಮ, ಹುಬ್ಬಳ್ಲಿ-ಧಾರವಾಡದ ಈರಣ್ಣ ಕುಂಬಾರ ದ್ವಿತೀಯ, ಮೈಸೂರಿನ ಅಮರೇಶ ತೃತೀಯ ಸ್ಥಾನ ಪಡೆದರು. ಹೊರಾಂಗಣ ಪರೀಕ್ಷೆಯಲ್ಲಿ ಮೈಸೂರಿನ ರಾಘವೇಂದ್ರ ಪ್ರಥಮ, ಮೈಸೂರಿನ ಚಿನ್ನಪ್ಪ ಕಲ್ಲೋಳಿ ದ್ವಿತೀಯ, ಕೋಲಾರದ ಮಧುಸೂದನ ರೆಡ್ಡಿ ತೃತೀಯ ಬಹುಮಾನ ಪಡೆದರು. ಫೈರಿಂಗ್ನಲ್ಲಿ ಮೈಸೂರಿನ ಮೋಹನ್ಕುಮಾರ್ ಎನ್. ಪ್ರಥಮ, ಶಿವಮೊಗ್ಗದ ಅರಿಹಂತ ಶಿರಹಟ್ಟಿ ದ್ವಿತೀಯ, ಮೈಸೂರಿನ ರಾಜಾ ಸಾಬ್ ತೃತೀಯ ಸ್ಥಾನ ಪಡೆದರು. ಮೈಸೂರಿನ ಅವಿನಾಶ್ ಸರ್ವೋತ್ತಮ ಪ್ರಶಸ್ತಿಗೆ ಪಾತ್ರರಾದರು. ಕರ್ನಾಟಕ ರಾಜ್ಯ ಪೊಲೀಸ್ ಮುಖ್ಯಸ್ಥರ ಟ್ರೋಫಿಯನ್ನು ಮೈಸೂರಿನ ಅಮರೇಶ ಪಡೆದುಕೊಂಡರು.
ಒಟ್ಟೂ 121 ಪೊಲೀಸ್ ಪೇದೆಗಳು 6 ತಂಡವಾಗಿ ಶನಿವಾರದ ನಿರ್ಗಮನ ಪಥಸಂಚಲನದಲ್ಲಿ ಪಾಲ್ಗೊಂಡರು. ಉಪ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಬ್ಯಾಕೋಡ್ ಇವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ವಿ. ಪಾಟೀಲ್ ಸ್ವಾಗತಿಸಿದರು. ಡಿವೈಎಸ್ಪಿ ಪ್ರಮೋದ್ರಾವ್ ಇದ್ದರು.
Leave a Comment