ಕಾರವಾರ:
ತೋಡೂರಿನಲ್ಲಿ ಭಾನುವಾರ ಆಯೋಜಿಸಿದ್ದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಗ್ರಾಮೀಣ ಜನ ಹಾಗೂ ಕಾರ್ಯನಿರತ ಪತ್ರಕರ್ತರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡರು.
ಪುರುಷರಿಗಾಗಿ ಕೆಸರುಗದ್ದೆ ಓಟ, ವಾಲಿಬಾಲ್ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆದವು. ಮಹಿಳೆಯರಿಗೆ ಓಟ, ಥ್ರೋಬಾಲ್ ಸ್ಪರ್ಧೆ, ಚಿಣ್ಣರಿಗೆ ಲಿಂಬು ಚಮಚದ ಓಟದ ಸ್ಪರ್ಧೆಗಳು ಜರುಗಿದವು. ಈ ಎಲ್ಲ ಸ್ಪರ್ಧೆಗಳಲ್ಲೂ ತೊಡೂರು ಹಾಗೂ ಸುತ್ತಮುತ್ತಲಿನ ಅನೇಕ ಗ್ರಾಮಗಳ ಜನರು ಉತ್ಸಾಹದಿಂದ ಪಾಲ್ಗೊಂಡು ಆಟ ಆಡಿದರು. ಪತ್ರಕರ್ತರಿಗೆ ಹಗ್ಗ ಜಗ್ಗಾಟ, ವಾಲಿಬಾಲ್ ಮತ್ತು ಓಟದ ಸ್ಪರ್ಧೆಗಳು ನಡೆದಿದ್ದು ಜಿಲ್ಲಾಕೇಂದ್ರ ಕಾರ್ಯನಿರ ಪತ್ರಕರ್ತರೆಲ್ಲರೂ ಭಾಗವಹಿಸಿದ್ದರು. ದೈಹಿಕ ಶಿಕ್ಷಕರಾದ ಮಾಧವ ರಾಣೆ, ಶಶಿಕಾಂತ ಮಾಂಜ್ರೇಕರ್, ಸಾಯಿನಾಥ ಕೊಠಾರಕರ್, ಮಂಜುನಾಥ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.
ಚಿಕ್ಕ ಮಕ್ಕಳ ಓಟದಲ್ಲಿ ನಾಗರಾಜ ಗೌಡ ಪ್ರಥಮ, ಆಕಾಶ ಚಿಂಚಣಕರ ದ್ವಿತೀಯ, ವಿನೋದ ಗೌಡ ತೃತೀಯ, ಬಾಲಕಿಯರ ಲಿಂಬುಚಮಚ ಓಟದಲ್ಲಿ ತಾನಿಯಾ ಮಡಿವಾಳ ಪ್ರಥಮ, ಶೀಲತ ತಳೇಕರ ದ್ವಿತೀಯ, ಬಾಲಕಿಯರ ಓಟದಲ್ಲಿ ಮೇಘಾ ಗೌಡ ಪ್ರಥಮ, ಸುಮೇಧಾ ಮಹಾಲೆ ದ್ವಿತೀಯ, ಕೃತ್ತಿಕಾ ತಳೇಕರ ತೃತೀಯ, ಬಾಲಕರ ಓಟದಲ್ಲಿ ಮಂಜುನಾಥ ಉಡಿಯಾರ್ ಪ್ರಥಮ, ವೆಂಕಪ್ಪ ಗೌಡ ದ್ವಿತೀಯ, ಗಣಪತಿ ಗೌಡ ತೃತೀಯ, ಹಗ್ಗ ಜಗ್ಗಾಟ ಮಹಿಳೆಯರ ವಿಭಾಗ ಬ್ರಹ್ಮದೇವ ಯುವತಿ ಮಂಡಳ ಪ್ರಥಮ, ದೇವಮಾತಾ ಯುವತಿ ಮಂಡಳ ದ್ವಿತೀಯ, ಹಗ್ಗಜಗ್ಗಾಟ ಪುರುಷರ ವಿಭಾಗದಲ್ಲಿ ಸಿದ್ದರಾಮೇಶ್ವರ ಯುವಕ ಮಂಡಳ ಪ್ರಥಮ, ಬ್ರಹ್ಮದೇವ ಯುವಕರ ಮಂಡಳ ದ್ವಿತೀಯ, ವರದಿಗಾರರ ಹಗ್ಗಜಗ್ಗಾಟ ಪ್ರಿಂಟ್ ಮಿಡಿಯಾ (ಪ್ರಥಮ), ಎಲೆಕ್ಟ್ರಾನಿಕ್ ಮಿಡಿಯಾ ದ್ವಿತೀಯ, ವರದಿಗಾರರ ಓಟ- ದರ್ಶನ್ ನಾಯ್ಕ ಪ್ರಥಮ, ದಿನೇಶ ಎಚ್.ಎಂ. ದ್ವಿತೀಯ, ಟಿ.ಬಿ.ಹರಿಕಾಂತ ತೃತೀಯ ಬಹುಮಾನ ಪಡೆದರು.
* ಸಾಧಕರಿಗೆ ಸನ್ಮಾನ
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಪುರುಷೋತ್ತಮ ಗೌಡ, ತೋಡೂರಿನ ಜಾನಪದ ಕಲಾವಿದರಾದ ದಮ್ಮು ಲಿಂಗಾ ಗೌಡ, ಯಕ್ಷಗಾನ ಕಲಾವಿದ ನಾಗಪ್ಪ ಜಾನು ನಾಯ್ಕ, ಮಾಜಿ ಸೈನಿಕರಾದ ಉಮೇಶ ಶಂಬಾ ನಾಯ್ಕ, ನಾಟಿ ವೈದ್ಯರಾದ ಶೇಷು ಬೀರಾ ಗೌಡ, ಉಮಣಾ ಬೀರಾ ಗೌಡ, ಲಿಂಗಾ ಬೀರಾ ಗೌಡ, ಅರಬಾ ಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ ಸದಸ್ಯೆ ಚೈತ್ರಾ ಸಿ.ಕೊಠಾರಕರ್, ಆಧುನಿಕತೆಯ ಭರದಲ್ಲಿ ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಹೇಳಿದರು. ತಾ.ಪಂ.ಸದಸ್ಯೆ ನಂದಿನಿ ಗುನಗಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂತಹ ಕ್ರೀಡಾಕೂಟ ಆಯೋಜಿಸಿ ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಮೆಚ್ಚುಗೆಗೆ ಅರ್ಹವಾಗಿದೆ ಎಂದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಿ.ಗಾಯತ್ರಿ ಮಾತನಾಡಿ, ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಸರ್ಕಾರ ಯೋಜನೆ ರೂಪಿಸಿದೆ ಎಂದರು. ತೊಡೂರು ಗ್ರಾ.ಪಂ.ಉಪಾಧ್ಯಕ್ಷ ಚಂದ್ರಕಾಂತ ಚಿಂಚಣಕರ್ ಮಾತನಾಡಿದರು. ಪತ್ರಕರ್ತ ಗಣೇಶ್ ಹೆಗಡೆ ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀ ಗೋವಿಂದ ದೇವ ಕ್ರೀಡಾ ಮತ್ತು ಸಾಂಸ್ಕøತಿಕ ಸಂಘದ ಅಧ್ಯಕ್ಷ ವೀರಭದ್ರ ಗೌಡ ವಂದಿಸಿದರು.
Leave a Comment