ಹೊನ್ನಾವರ:”ಕಲೆಯನ್ನು ವೃತ್ತಿಯಾಗಿಸಿಕೊಳ್ಳುವಲ್ಲಿ ಹಲವು ಸಂಕಷ್ಟಗಳಿರುವುದರಿಂದ ಇದನ್ನು ಪ್ರವೃತ್ತಿಯಾಗಿ ಮಾತ್ರ ಇಟ್ಟುಕೊಂಡು ಬದುಕಿನ ಆಸರೆಗೆ ಬೇರೊಂದು ಉದ್ಯೋಗ ಕಂಡುಕೊಳ್ಳಬೇಕು’ ಎಂದು ಹಿರಿಯ ಪತ್ರಕರ್ತ ಜಿ.ಯು.ಭಟ್ ಯುವ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇಲ್ಲಿನ ಎಸ್.ಡಿ.ಎಂ. ಕಾಲೇಜಿನಲ್ಲಿ 2 ದಿನಗಳ ಕಾಲ ನಡೆಯವ ಕವಿವಿ ಜಿಲ್ಲಾ ಮಟ್ಟದ ಯುವಜನೋತ್ಸವವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು,’ವ್ಯಕ್ತಿತ್ವ ವಿಕಸನಕ್ಕೆ ಕಲೆ ಅಗತ್ಯವಾಗಿದ್ದು ಯಕ್ಷಗಾನ ಸೇರಿದಂತೆ ವಿವಿಧ ಸಾಂಪ್ರದಾಯಿಕ ಕಲಾಪ್ರಕಾರಗಳ ಮೂಲಕ ಸಾಗಿ ಬಂದಿರುವ ರಾಮ,ಕೃಷ್ಣ ಮೊದಲಾದ ಮಹಾತ್ಮರ ಮೌಲ್ಯಗಳನ್ನು ವಿದ್ಯಾರ್ಥಿಗಳು ಬದುಕಿನಲ್ಲಿ ಅಳವಡಿಸಿಕೊಂಡು ಇತರರಿಗೆ ಸಲ್ಲುವ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು’ಎಂದು ಹೇಳಿದರು.
‘ಉಳಿದ ಮೂಲಭೂತ ಸೌಕರ್ಯಗಳ ಕೊರತೆಯಿದ್ದರೂ ಜಿಲ್ಲೆಯಲ್ಲಿ ಸಾಂಸ್ಕøತಿಕ ಶ್ರೀಮಂತಿಕೆಗೆ ಕೊರತೆಯಿಲ್ಲ’ ಎಂದು ಹೇಳಿದ ಅವರು, ದಿ.ಚಿಟ್ಟಾಣಿ ರಾಮಚಂದ್ರ ಹೆಗಡೆ ಸೇರಿದಂತೆ ಹಲವು ಕಲಾವಿದರ ಕೊಡುಗೆಯನ್ನು ಸ್ಮರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ,”ಯುವಜನೋತ್ಸವ ಕಾಟಾಚಾರದ ಕಾರ್ಯಕ್ರಮವಾಗದೆ ಒಟ್ಟಾಗಿರುವ ಅವಿಭಕ್ತ ಕುಟುಂಬದ ಭಾವನೆಯನ್ನು ಪ್ರಚುರಪಡಿಸಬೇಕು.ಶಿಕ್ಷಕ ಹಾಗೂ ಶಾಲೆಯ ಆವರಣವನ್ನು ಸ್ಮರಿಸುವ ಮನೋಭಾವ ವಿದ್ಯಾರ್ಥಿಗಳಲ್ಲಿರಬೇಕು.ಹದಿಹರೆಯದ ಸಂಕ್ರಮಣದ ಕಾಲಘಟ್ಟದಲ್ಲಿ ಎಚ್ಚರ ತಪ್ಪದೆ ಜೀವನದ ಸರಿಯಾದ ಮಾರ್ಗವನ್ನು ಆಯ್ಕೆಮಾಡಿಕೊಂಡು ಆತ್ಮವಿಶ್ವಾಸ ಹಾಗೂ ನಂಬುಗೆಯೊಂದಿಗೆ ವಿದ್ಯಾರ್ಥಿಗಳು ಯಶಸ್ಸು ಸಾಧಿಸಬೇಕು’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಪ್ರೊ.ಎಸ್.ಎಸ್.ಹೆಗಡೆ ಮಾತನಾಡಿ,’ಸ್ಪರ್ಧಿಗಳು ಕ್ರೀಡಾ ಮನೋಭಾವ ತೋರಿ ಯುವಜನೋತ್ಸವದ ಉದ್ದೇಶ ಈಡೇರಿಸುವಲ್ಲಿ ಸಹಕರಿಸಬೇಕು’ ಎಂದು ಹೇಳಿದರು.
ಮಾಜಿ ಶಾಸಕ ಡಾ.ಎಂ.ಪಿ.ಕರ್ಕಿ ಉಪಸ್ಥಿತರಿದ್ದರು.
ಡಾ.ಎಂ.ಆರ್.ನಾಯಕ ಸ್ವಾಗತಿಸಿದರು.ಪ್ರೊ.ನಾಗರಾಜ ಹೆಗಡೆ,ಪ್ರೊ.ಪ್ರಶಾಂತ ಹೆಗಡೆ ನಿರೂಪಿಸಿದರು.ಡಾ.ಡಿ.ಎಲ್.ಹೆಬ್ಬಾರ ವಂದಿಸಿದರು.
Leave a Comment