ಹೊನ್ನಾವರ ಟೊಂಕಾ ಭಾಗದ ಮೀನುಗಾರಿಕಾ ಬಂದರಿಗೆ ಹೋಗುವ ರಸ್ತೆಗಳಲ್ಲಿ ದೊಡ್ಡ ದೊಡ್ಡ ಹೊಂಡಗಳು ಬಿದ್ದಿದ್ದು ಇಲ್ಲಿನ ಸಾರ್ವಜನಿಕರು, ಬೈಕ್ ಸವಾರರು, ಆಟೋ ಹಾಗೂ ಮೀನು ಸಾಗಾಟ ವಾಹನಗಳು ಓಡಾಟಕ್ಕೆ ತೊಂದರೆಯಾಗುತ್ತಿದ್ದು, ರಸ್ತೆಯನ್ನು ಒಂದು ತಿಂಗಳೊಳಗೆ ಸರಿಪಡಿಸಬೇಕೆಂದು ಆಟೋರಿಕ್ಷಾ ಡ್ರೈವರ್ ಯುನಿಯನ್ ಹಾಗೂ ಪಿಕಪ್ ರಿಕ್ಷಾಗಳ ಚಾಲಕರು ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ ಮಾಡಿದರು.
ಟೊಂಕಾ ಮೀನುಗಾರಿಕಾ ಬಂದರಿಗೆ ಹೋಗುವ ರಸ್ತೆಯ ಶೇ.40 ರಷ್ಟು ಕಾಂಕ್ರೆಟ್ ರಸ್ತೆ ಆಗಿದ್ದು ಉಳಿದ ಶೇ.60 ಡಾಂಬರಿಕರಣ ಮಾಡಲಾಗಿತ್ತು. ಸದ್ಯ ಈ ಭಾಗದಲ್ಲಿ ಒಟ್ಟೂ 700 ಮೀ. ರಸ್ತೆ ಮಂಜೂರಿಯಾಗಿದ್ದು ಮಳೆಯ ಕಾರಣದಿಂದ ಕಾಮಗಾರಿ ಪ್ರಾರಂಭವಾಗಿರಲಿಲ್ಲ. ಈಗಾಗಲೇ ಶಾಸಕ ವೈದ್ಯ ರೂ.20 ಲಕ್ಷ ಅನುದಾನ ಮಂಜೂರಿ ಮಾಡಿದ್ದಾರೆ. ಬಂದರು ಇಲಾಖೆಯಿಂದ 850 ಮೀ. ರಸ್ತೆಗೆ ಒಟ್ಟೂ 98 ಲಕ್ಷದ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ.
ಈ ಭಾಗದ ಹೊರರಾಜ್ಯದಿಂದ ಮೀನು ಸಾಗಾಟ ವಾಹನಗಳು ಓಡಾಡುವುದರಿಂದ ಹಾಗೂ ಮಳೆಯಿಂದ ಇಲ್ಲಿ ಡಾಂಬರು ರಸ್ತೆ ಮಾಡಿದರೆ ಆರೇ ತಿಂಗಳಲ್ಲಿ ರಸ್ತೆ ಹಾಳಾಗಿ ಹೊಂಡ ಬೀಳುತ್ತವೆ, ಆದ್ದರಿಂದ ಇಲ್ಲಿ ಡಾಂಬರು ರಸ್ತೆಯ ಬದಲು ಸಂಪೂರ್ನ ಕಾಂಕ್ರಿಟ್ ರಸ್ತೆ ಮಾಡಬೇಕೆಂದು ರಿಕ್ಷಾ ಯುನಿಯನ್ ಅಧ್ಯಕ್ಷ ಶಿವರಾಜ ಮೇಸ್ತ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಮೀನುಗಾರಿಕಾ ಮುಖಂಡ ಉಮೇಶ ಮೇಸ್ತ, ಉಮೇಶ ಸಾರಂಗ, ಭಾಸ್ಕರ ತಾಂಡೇಲ ಮುಂತಾದವರು ಪಾಲ್ಗೊಂಡಿದ್ದರು.
Leave a Comment