ಕಾರವಾರ: ಪ್ರಯಾಣಿಕರೊಬ್ಬರನ್ನು ಅರ್ಧ ದಾರಿಯಲ್ಲಿ ಬಿಟ್ಟು ಬಂದ ಕಾರಣ ಮಹಿಳಾ ಬಸ್ ಕಂಡಕ್ಟರ್ಗೆ 5 ಸಾವಿರ ದಂಡ ವಿಧಿಸಿ ಗ್ರಾಹಕರ ನ್ಯಾಯಾಲಯ ಆದೇಶಿಸಿದೆ.
ಬಸ್ ಹತ್ತಿದ ನಂತರ ಅವರ ಸುರಕ್ಷತೆ ಮತ್ತು ಜವಾಬ್ದಾರಿ ಬಸ್ ಕಂಡಕ್ಟರದ್ದು ಎಂದು ಅಭಿಪ್ರಾಯಪಟ್ಟಿರುವ ಗ್ರಾಹಕರ ನ್ಯಾಯಾಲಯ ಪ್ರಯಾಣಿಕರು ಕಳೆದುಕೊಂಡ 5 ಸಾವಿರ ರೂ. ನಗದನ್ನೂ ದಂಡದ ಜತೆಗೆ ಭರಿಸುವಂತೆ ಕಂಡಕ್ಟರ್ ಹೇಮಾವತಿ ಎಚ್.ಎಂ. ಎಂಬಾತರಿಗೆ ಸೂಚಿಸಿದೆ.
2016 ರ ಮಾರ್ಚ್ನಲ್ಲಿ ನಡೆದ ಶಿರಸಿ ಜಾತ್ರೆಗೆ ತೆರಳಿದ್ದ ಕಾರವಾರದ ಉಮಾಕಾಂತ ರಾಘೋಬಾ ಬಾಂದೇಕರ್ ಎನ್ಡಬ್ಲುೃಕೆಆರ್ಟಿಸಿ ಅಂಕೋಲಾ ಡಿಪೆÇದ ಜಾತ್ರೆ ವಿಶೇಷ ಬಸ್ನಲ್ಲಿ ಮಾ.26 ರಂದು ವಾಪಸಾಗುತ್ತಿದ್ದರು. ಬಸ್ ಬಂಡಲ್ ಬಳಿಯ ಸಣ್ಣ ಹೋಟೆಲ್ ಎದುರು ನಿಂತಿತ್ತು. ಬಸ್ ಕಂಡಕ್ಟರ್ ಮತ್ತು ಡ್ರೈವರ್ ಪ್ರಯಾಣಿಕರಿಗೆ ಯಾವುದೇ ಮಾಹಿತಿ ನೀಡದೇ ಊಟಕ್ಕೆ ತೆರಳಿದ್ದರು. ಕೆಲ ಹೊತ್ತಿನಲ್ಲಿ ಬಸ್ನಿಂದ ಕೆಳಗಿಳಿದ ಉಮಾಕಾಂತ ಬಾಂದೇಕರ್ ಚಹಾ ಕುಡಿಯಲಾರಂಭಿಸಿದ್ದರು. ಆದರೆ, ಬಸ್ ಅವರನ್ನು ಬಿಟ್ಟು ಮುಂದೆ ತೆರಳಿತ್ತು. ಬಾಂದೇಕರ್ 5 ಸಾವಿರ ನಗದು ಹಾಗೂ ದಾಖಲೆಗಳಿರುವ ಕೊಟ್ಟೆಯೊಂದನ್ನು ಬಸ್ನಲ್ಲಿ ಇಟ್ಟಿದ್ದರು. ಮತ್ತೊಂದು ಬಸ್ ಹಿಡಿದು ಅಂಕೋಲಾಕ್ಕೆ ತೆರಳಿದ ಬಾಂದೇಕರ್ ಕಂಡಕ್ಟರಲ್ಲಿ ವಿಚಾರಿಸಿದಾಗ ಉಡಾಫೆಯ ಉತ್ತರ ನೀಡಿ, ಸಾರ್ವಜನಿಕರೆದುರು ಅವಮಾನಿಸಿದರು. ಇದರಿಂದ ನೊಂದ ಬಾಂದೇಕರ್ ಗ್ರಾಹಕರ ನ್ಯಾಯಾಲಯಕ್ಕೆ ಅಂಕೋಲಾ ಡಿಪೆÇ ಮ್ಯಾನೇಜರ್ ಹಾಗೂ ಕಂಡಕ್ಟರ್ ವಿರುದ್ಧ ದೂರಿದ್ದರು.
ಬಸ್ಗೆ ಬಂಡಲ್ ಬಳಿ ನಿಲುಗಡೆ ಇರಲಿಲ್ಲ. ಆದರೆ, ಬಸ್ನ ಟಯರ್ ಹಾಳಾಗಿದ್ದರಿಂದ ಬಂಡಲ್ನಲ್ಲಿ ನಿಲ್ಲಿಸಲಾಗಿತ್ತು ಎಂದು ಕಂಡಕ್ಟರ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು. ನ್ಯಾಯಾಲಯ ಡಿಪೆÇ ಮ್ಯಾನೇಜರ್ ಹಾಗೂ ಎನ್ಡಬ್ಲುಕೆಆರ್ಟಿಸಿ ಶಿರಸಿ ವಿಭಾಗೀಯ ಅಧಿಕಾರಿಗಳನ್ನು ವಿಚಾರಿಸಿದಾಗ ಕಂಡಕ್ಟರ್ ಹೇಳಿಕೆಗೆ ಬೆಂಬಲ ನೀಡಲು ನಿರಾಕರಿಸಿದ್ದರು. ಇದರಿಂದ ನ್ಯಾಯಾಲಯ ಕಂಡಕ್ಟರ್ಗೆ 3 ಸಾವಿರ ರೂ. ದಂಡ, 2 ಸಾವಿರ ರೂ. ದಾವೆಯ ವೆಚ್ಚ ಹಾಗೂ ಬಾಂದೇಕರ್ ಕಳೆದುಕೊಂಡ 5 ಸಾವಿರ ಸೇರಿ ಒಟ್ಟು 10 ಸಾವಿರ ರೂ.ಗಳನ್ನು ಒಂದು ತಿಂಗಳಲ್ಲಿ ಪಾವತಿಸುವಂತೆ ಸೂಚಿಸಿದೆ.
Leave a Comment