ಕಾರವಾರ:
ಬೈತಖೋಲ್ ನಗರ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಹಾಗೂ ಗಾಂಜಾ ಮಾರಾಟ ಎಗ್ಗಿಲ್ಲದೆ ನಡೆಯುತಿದ್ದು, ಈ ಬಗ್ಗೆ ಪೊಲೀಸರಿಗೆ ಗೊತ್ತಿದ್ದರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಸ್ಥಳೀಯ ಮಹಿಳೆಯರು ಪ್ರತಿಭಟನೆ ನಡೆಸಿದರು.
ಕಳೆದ ಕೆಲ ವರ್ಷಗಳಿಂದ ಬೈತಖೋಲ ನಗರಸಭಾ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ಅಕ್ರಮ ಮದ್ಯ ಹಾಗೂ ಗಾಂಜಾ ದಂಧೆ ನಡೆಸಲಾಗುತ್ತಿದೆ. ಮನೆಗಳಲ್ಲಿಯೇ ಮದ್ಯ ಮಾರಾಟದ ಅಡ್ಡವಾಗಿಸಿಕೊಳ್ಳಲಾಗಿದೆ. ಇಂತಹ ಮನೆಗಳಿಗೆ ಮಧ್ಯ ರಾತ್ರಿ ವೇಳೆ ಬೈಕ್, ಕಾರು, ರೀಕ್ಷಾ ಮೂಲಕ ಅಕ್ರಮವಾಗಿ ಗೋವಾ ಮದ್ಯವನ್ನು ಆಯಾ ಸಾಗಾಟ ಮಾಡಲಾಗುತ್ತದೆ. ಈ ಬಗ್ಗೆ ಪೊಲೀಸರಿಗೆ ಸಾಕಷ್ಟು ಭಾರಿ ದೂರು ನೀಡಲಾಗಿದೆಯಾದರು ಯಾವುದೇ ಪ್ರಯೋಜನವಾಗುತ್ತಲ್ಲ. ಪೊಲೀಸರೆದುರೆ ಮದ್ಯವನ್ನು ಸಾಗಾಟ ಮಾಡಿದರು ಅದನ್ನು ತಡೆಯಲು ಮುಂದಾಗುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು. ಮನೆ ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದರಿಂದ ಇಲ್ಲಿನ ಗಂಡಸರು ಕುಡಿತದ ಚಟಕ್ಕೆ ಬಲಿಯಾಗಿ ಅದೇಷ್ಟೋ ಜನರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಚಟಕ್ಕೆ ಸಣ್ಣ ಮಕ್ಕಳು, ಯುವಕರು ಬಲಿಯಾಗುತ್ತಿದ್ದು, ಇದು ತೀವ್ರ ಆತಂಕ ತಂದಿದೆ. ಈ ಮದ್ಯವ್ಯಸನಿಗಳಿಂದ ಕಾಲೋನಿಗಳಲ್ಲಿ ನಮ್ಮದಿಯೇ ಇಲ್ಲದಂತಾಗಿದ್ದು, ಮನೆಯಲ್ಲಿನ ಹೆಂಡತಿ ಮಕ್ಕಳು ಉಪವಾಸ ಇರುವ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ವಿಪರಿತ ಕುಡಿದು ಪ್ರತಿನಿತ್ಯ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆಯುವುದರಿಂದ ಜೀವನ ನಡೆಸುವುದೇ ಕಷ್ಟಕರವಾಗಿದೆ ಎಂದು ದೂರಿದರು.
ಊರಿನಲ್ಲಿ ನಿತ್ಯ ಕೆಲಸಕ್ಕೆ ಹೋಗುವವರಿಗೆ ಹಣದ ಬದಲು ಮದ್ಯ ನೀಡಿ ಸರಿಯಾಗಿ ಸಂಬಳ ನೀಡದೆ ವಂಚಿಸುತ್ತಿದ್ದಾರೆ. ಶಾಲೆಗೆ ತೆರಳುವ ಚಿಕ್ಕ ಮಕ್ಕಳು ಕೂಡ ಗಾಂಜಾ, ಮದ್ಯ ಸೇವಿಸುತ್ತಿದ್ದಾರೆ. ಊರಿನವರೆಲ್ಲ ಮುತ್ತಿಗೆ ಹಾಕಿ ಮಾರಾಟ ಮಾಡುವವರನ್ನು ಪ್ರಶ್ನಿಸಿದರೆ, ಯಾರಿಗೆ ಬೇಕಾದರೂ ಹೇಳಿಕೊಳ್ಳಿ. ಎಲ್ಲರಿಗೂ ಹಫ್ತಾ ನೀಡುತ್ತಿದ್ದೇವೆ. ನಮಗೇನು ಮಾಡುವುದಿಲ್ಲ ಎಂದು ರಾಜಾರೋಷವಾಗಿ ಹೇಳುತ್ತಾರೆ ಎಂದು ಆರೋಪಿಸಿದರು.
ಬೈತ್ಖೋಲ್ ಗ್ರಾಮದ ಯಾವ್ಯಾವ ಬೀದಿಗಳಲ್ಲಿ ಹಾಗೂ ಯಾವ್ಯಾವ ಮನೆಯಲ್ಲಿ ಅಕ್ರಮ ಮದ್ಯ ಹಾಗೂ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎನ್ನುವುದರ ಕುರಿತು ನಕ್ಷೆ ತಯಾರಿಸಿರುವ ಗ್ರಾಮಸ್ಥರು ಅದನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಅವರಿಗೆ ಸಲ್ಲಿಸಿದರು.
ಸ್ಥಳೀಯರಾದ ವಿನಾಯಕ ಹರಿಕಂತ್ರ, ಸಂಜಯ ಗೌಡ, ಜಯಶ್ರೀ ಗುನಗಾ, ಸತೀಶ ಗೌಡ, ರಾಧಿಕಾ ಗೌಡ, ಶಾಂತಿ ಗೌಡ ಹಾಜರಿದ್ದರು.
Leave a Comment