ಕಾರವಾರ:
ಮಿಶನ್ 2025 ಎಂಬುದು ಸಮಗ್ರ ಅಭಿವೃದ್ದಿಯ ನಕಾಶೆ ಸಿದ್ದ ಪಡಿಸುವ ವೇದಿಕೆಯಾಗಿದೆ ಎಂದು ಸಾರ್ವಜನಿಕ ಇಲಾಖೆ ಉದ್ದಿಮೆಗಳ ಪ್ರಧಾನ ಕಾರ್ಯದರ್ಶಿ ರೇಣುಕಾ ಚಿದಂಬರಂ ಹೇಳಿದರು.
ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ನಡೆದ ವಿನುತನ ನವ ಕರ್ನಾಟಕ ಮಿಶನ್ 2025 ಜಿಲ್ಲಾ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ಮೊದಲ ಬಾರಿಗೆ ಜನರಿಂದ ಸಲಹೆ ಪಡೆಯಲು ಸರ್ಕಾರ ಜಿಲ್ಲಾ ಮಟ್ಟದಲ್ಲಿ ಚಿಂತನಾ ಸಭೆ ನಡೆಸುತ್ತಿದೆ. ಎಲ್ಲರನ್ನೂ ಒಗ್ಗೂಡಿಸಿ ಕರೆದೊಯ್ಯುವ ಮಹತ್ವಾಕಾಂಕ್ಷೆಯೊಂದಿಗೆ ಕಾರ್ಯಗಾರವನ್ನು ಆಯೋಜಿಸಲಾಗಿದೆ. ಈಗಾಗಲೇ 14 ಜಿಲ್ಲೆಗಳಲ್ಲಿ ಕಾರ್ಯಗಾರ ನಡೆಸಿ, ಅದರ ವರದಿಯನ್ನು ರಚಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ವಿಶೇಷ ಸಭೆ ನಡೆಸಲಾಗುತ್ತಿದೆ ಎಂದರು. ಪ್ರತಿ ಜಿಲ್ಲೆಯಲ್ಲಿ ಆಗಬೇಕಾದ ಕೆಲಸ, ಜನರ ಸಮಸ್ಯೆಗಳನ್ನು ಅರಿತು ಅದನ್ನು ಬಗೆಹರಿಸುವ ಪ್ರಯತ್ನ ನಡೆಸಲಾಗುತ್ತದೆ. ಸಾಮಾನ್ಯ ನಾಗರಿಕರೇ ಯೋಜನೆಯ ಕೇಂದ್ರವಾಗಿದ್ದು, ತಜ್ಞರಿಂದ ಸಲಹೆ ಪಡೆದು ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಎಸ್.ಎಸ್. ನಕುಲ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ 18 ಲಕ್ಷ ಜನ ಸಂಖ್ಯೆ ಇದ್ದರೂ 12 ತಾಲೂಕುಗಳಲ್ಲಿ ಹಂಚಿ ಹೋಗಿದ್ದಾರೆ. ಹೀಗಾಗಿ ಸರ್ಕಾರ ಜನಸಂಖ್ಯೆ ಆಧಾರಿತವಾಗಿ ಬಿಡುಗಡೆ ಮಾಡುವ ಅನುಧಾನ ಈ ಜಿಲ್ಲೆಗೆ ಸಾಲುತ್ತಿಲ್ಲ. ಕರಾವಳಿ ಹಾಗೂ ಮಲೆನಾಡನ್ನು ಹೊಂದಿರುವ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಅವಷ್ಯಕತೆ ಇದೆ ಎಂದು ಮನವರಿಕೆ ಮಾಡಿದರು. ಜಿಲ್ಲೆಯ ಉತ್ಪನ್ನಗಳನ್ನು ಹೊರ ಪ್ರಪಂಚಕ್ಕೆ ಪರಿಚಯಿಸಲು “ಪ್ರೊಡೆಕ್ಟ ಆಫ್ ಉತ್ತರ ಕನ್ನಡ” ಎಂಬ ಹೆಸರಿನಲ್ಲಿ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಜಿಲ್ಲೆಯ ಅಪ್ಪೆಮಿಟಿ, ಜೇನುತುಪ್ಪ ಮೊದಲಾದ ಸಾಂಪ್ರದಾಯಿಕ ಆಹಾರ ಪದಾರ್ಥಗಳ ಮಾರಾಟವನ್ನು ಇಲ್ಲಿ ನಡೆಸುವದರ ಮೂಲಕ ಜನರ ಏಳಿಗೆಗೆ ಜಿಲ್ಲಾಡಳಿತ ಶ್ರಮಿಸಲಿದೆ ಎಂದರು.
ಸಭಾ ಕಾರ್ಯಕ್ರಮದ ನಂತರ ವಿವಿಧ ಗುಂಪುಗಳನ್ನು ರಚಿಸಿಕೊಂಡು ಚರ್ಚೆ ನಡೆಸಲಾಯಿತು. ಪ್ರಮುಖ ಐದು ವಿಷಯಗಳ ಕುರಿತು ತಜ್ಞರು ವಿಷಯ ಮಂಡಿಸಿದರು. ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರಿ ಮೋಗೇರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯ್ಕ, ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಇತರರು ಇದ್ದರು. ಸುರೇಶ ಶಟ್ಟಿ ನಿರ್ವಹಿಸಿದರು
Leave a Comment