ಕಾರವಾರ:
ಪ್ರಯಾಣಿಕರನೀರಿನ ದಾಹ ತೀರಿಸಲು ಸರ್ಕಾರಿ ಬಸ್ ಚಾಲಕರೊಬ್ಬರು ಬಸ್ನಲ್ಲಿ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಶಿರಸಿ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಲಕ ಕಮಲಾಕರ ಹಾನಗಲ್-ಶಿರಸಿ-ಪಣಜಿ ಮಾರ್ಗದಲ್ಲಿ ಚಲಿಸುವ ಬಸ್ಸಿನಲ್ಲಿ ಕಾರ್ಯ ನಿರ್ವಹಿಸುತ್ತಾರೆ. ನಿತ್ಯ ಪ್ರಯಾಣಿಕರಿಗಾಗಿ ಸ್ವತ ಖರ್ಚಿನಲ್ಲಿ 20ಲೀಟರ್ನ ನೀರಿನ ಟ್ಯಾಂಕ್ ಅಳವಡಿಸುವ ಮೂಲಕ ಪ್ರಯಾಣಿಕರ ಕುಡಿಯುವ ನೀರಿನ ದಾಹ ತೀರಿಸುತ್ತಿದ್ದಾರೆ. ಬಸ್ಸಿನಲ್ಲಿ ಪ್ರಯಾಣಿಸಬೇಕಾದರೆ ಪ್ರಯಾಣಿಕರಿಗೆ ಕುಡಿಯುವ ನೀರು ಸೇರಿದಂತೆ ಇನ್ನಿತರ ಸಾಮಗ್ರಿಗಳು ಬೇರೆದರೆ ಅವರೇ ತಂದುಕೊಳ್ಳಬೇಕು. ಐಷಾರಾಮಿ ಬಸ್ ಪ್ರಯಾಣಿಕರಿಗೆ ಈ ಹಿಂದೆ ಸಂಸ್ಥೆಯೇ ಕುಡಿಯುವ ನೀರಿನ ಬಾಟಲ್ ಒದಗಿಸುತ್ತಿತ್ತು. ಆದರೆ, ಈಗ ಅದನ್ನು ಸ್ಥಗಿತ ಮಾಡಲಾಗಿದೆ. ಹೀಗಿರುವಾಗ ಕಮಲಾಕರ್, ತಾವೇ ಕುಡಿಯುವ ನೀರಿನ ಪೂರೈಕೆ ಮಾಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಈ ಸೇವೆಯಲ್ಲಿ ತೊಡಗಿರುವ ಕಮಾಲಕರ ಕೆಲಸದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಈ ಬಸ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರಂತೂ ನೀರು ಕುಡಿದು ಸಂತೃಪ್ತರಾಗುತ್ತಿದ್ದಾರೆ. ಬಸ್ನಲ್ಲಿ ನೀರು ಚೆಲ್ಲಿ ಗಲೀಜು ಆಗಬಾರದು ಎಂದು ಚಾಲಕ ಆಸನದ ಪಕ್ಕದಲ್ಲೇ ನೀರಿನ ಟ್ಯಾಂಕ್ ಅಳವಡಿಸಲಾಗಿದೆ. ನೀರು ಖಾಲಿಯಾದರೆ ಮತ್ತೆ ಶುದ್ದ ನೀರನ್ನು ತುಂಬಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗುತ್ತದೆ. ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಮಾಡಬೇಕಿದ್ದ ಕಾರ್ಯವನ್ನು ಚಾಲಕ ಮಾಡಿ ತೋರಿಸಿರುವ ಬಗ್ಗೆ ಪ್ರಯಾಣಿಕರು ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಹಾನಗಲ್ – ಶಿರಸಿ – ಪಣಜಿ ಮಾರ್ಗ ಬಹುದೂರದ ಪ್ರಯಾಣವಾಗಿದೆ. ಸಾಕಷ್ಟು ಜನರು ಬಸ್ಸಿನಲ್ಲಿ ಪ್ರಯಾಣಿಸುತ್ತಾರೆ. ಅದರಂತೆ ಬಡವರು ಸಹ ಬಸ್ಸಿನಲ್ಲಿರುತ್ತಾರೆ. ಹೀಗಾಗಿ ಜನರ ದಾಹ ತಣಿಸಬೇಕು ಎನ್ನವು ದೃಷ್ಟಿಯಿಂದ ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವದಾಗಿ ಚಾಲಕ ಕಮಲಾಕರ ತಿಳಿಸಿದರು.
Leave a Comment