ಕಾರವಾರ: ದೇಶದ ಗಡಿ ಕಾಯುವ ಸೈನಿಕರಿಗೆ ಸರಿ ಸಮಾನವಾಗಿ ಕೆಲಸ ಮಾಡುವ ಪೊಲೀಸರನ್ನು ಜನತೆ ಗೌರವಿಸಬೇಕಿದೆ ಎಂದು ಜಿಲ್ಲಾ ನ್ಯಾಯಾದೀಶ ವಿ.ಎಸ್. ಧಾರವಾಡಕರ್ ಹೇಳಿದರು.
ಪೊಲೀಸ್ ಪೇರೆಡ್ ಮೈದಾನದಲ್ಲಿ ಶನಿವಾರ ನಡೆದ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮತರಾದ ಪೊಲೀಸರಿಗೆ ಭಾವಪೂರ್ಣ ಶೃದ್ದಾಂಜಲಿ ಸಲ್ಲಿಸಿ ಅವರು ಮಾತನಾಡಿದರು.
ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವದಾಗಿದೆ. ಕರ್ತವ್ಯದಲ್ಲಿದ್ದಾಗ ಮಡಿದ ಪೊಲೀಸರನ್ನು ಸ್ಮರಿಸುವ ಹಾಗೂ ಅವರ ಕುಟುಂಬಕ್ಕೆ ದೈರ್ಯ ತುಂಬುವ ಕೆಲಸವಾಗಬೇಕಿದೆ ಎಂದು ಅವರು ಹೇಳಿದರು. ಹಗಲು ರಾತ್ರಿ ಎನ್ನದೇ ದಿನವಿಡಿ ಜನರ ರಕ್ಷಣೆಗಾಗಿ ದುಡಿಯುವ ಪೊಲೀಸರ ಕಾರ್ಯವನ್ನು ಸ್ಮರಿಸಬೇಕು ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಗೋಪಾಲ ಬ್ಯಾಕೋಡ್ ಮಾತನಾಡಿ, 1959ರಲ್ಲಿ ಚೀನಾ ಹಾಗೂ ಭಾರತದ ನಡುವೆ ನಡೆದ ಹೋರಾಟದಲ್ಲಿ 10 ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದರು. ಅವರ ಸ್ಮರಣೆಗಾಗಿ ಹುತಾತ್ಮರ ದಿನ ಆಚರಿಸಲಾಗುತ್ತಿದೆ ಎಂದರು. ಕಳೆದ ಒಂದು ವರ್ಷದ ಅವದಿಯಲ್ಲಿ 370 ಪೊಲೀಸರು ಕರ್ತವ್ಯದಲ್ಲಿರುವಾಗ ಸಾವನಪ್ಪಿದ ಬಗ್ಗೆ ತಿಳಿಸಿದರು. ಪೊಲೀಸ್ ಕುಟುಂಬದವರು, ಸಾರ್ವಜನಿಕರು ಪೊಲೀಸ್ ಹುತಾತ್ಮರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಶಸಸ್ತ್ರ ಮೀಸಲು ಪಡೆಯ ತುಕಡಿಯಲ್ಲಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಪೊಲೀಸ್ ತಂಡದಿಂದ ರಾಷ್ಟ್ರಗೀತೆ ಮೊಳಗಿತು. ಪೊಲೀಸ್ ದ್ವಜವನ್ನು ಅರ್ಧಕ್ಕೆ ಇಳಿಸಿ ಮೇಲೇರಿಸಲಾಯಿತು. ಎರಡು ನಿಮಿಷಗಳ ಕಾಲ ಮೌನಾರಣೆಯನ್ನು ನಡೆಸಲಾಯಿತು.
Leave a Comment