ಆಕೆಯದು ಇನ್ನು ಬಾಳಿ ಬದುಕಬೇಕಾದ ವಯಸ್ಸು. ಉದಯೋನ್ಮುಕ ಪ್ರತಿಭೆ. ಗಾಯನ ಕ್ಷೇತ್ರದಲ್ಲಿ ಕೇಳುಗರನ್ನು ಮೋಡಿ ಮಾಡುವ ಮಾಯೆ ಅವಳಲಿತ್ತು. ಆದರೆ, ಈ ಪ್ರತಿಭೆ ಅರಳುವ ಮುನ್ನವೇ ಬಾಡಿ ಹೋಗಿದೆ.
ನಗುವೆ ಅಸ್ತಂಗತವಾದ ಮುಖ. ಆದರೆ ಕೆಲವೊಮ್ಮೆ ಆಗಾಗ ಅರಳು ಹುರಿದಂತೆ ಮಾತಾಡುವ, ಸದಾ ಹಸನ್ಮುಖಿಯಂತಿರುವ, ಸಾಂಸೃತಿಕ ಕ್ರೀಡೆಯಲ್ಲು ಮಿಂಚುವ, ಎಲ್ಲರಿಗೂ ಬೇಕಾಗಿರುವ, ಸರಳತೆ,ಸಜ್ಜನಿಕೆ, ಪ್ರಾಮಾಣಿಕತೆಗಳನ್ನು ಮೈಗೂಡಿಸಿಕೊಂಡು ಓದಿನಲ್ಲೂ ಮುಂಚೂಣಿಯಲ್ಲಿದ್ದಳು ಸಂತೃಪ್ತಿ ಭಾಗ್ವತ.
ಬಾಗಿನಕಟ್ಟಾ ಯಲ್ಲಾಪುರದ ಮಲೆನಾಡಿನ ಸುಂದರ ಕಣಿವೆ ಹಳ್ಳಿ. ಅಲ್ಲಿಯ ಭಾಗ್ವತರ ಮನೆಯೆಂದರೆ ಮಲೆನಾಡಿನ ಅಪ್ಪಟ ಸಾಂಪ್ರದಾಯಿಕ ಹವ್ಯಕರ ಕಟ್ಟಿಗೆಯ ಕಟಾಂಜಣದ ಮನೆ. ಆ ಮನೆಯ ಆದರ್ಶ ಶಿಕ್ಷಕ ದಂಪತಿಗಳಾದ ಶ್ರೀಮತಿ ವೀಣಾ ಹಾಗೂ ಸಣ್ಣಪ್ಪ ಭಾಗ್ವತರ ಮುದ್ದಿನ ಮಗಳೆ ಸಂತ್ರಪ್ತಿ. ಈ ಶಿಕ್ಷಕರಿಬ್ಬರೂ ನನ್ನ ನೆಚ್ಚಿನ ವಿದ್ಯಾರ್ಥಿಗಳಾಗಿದ್ದರು. “ಮಹಾ ಪ್ರತಿಭೆಗಳು, ಅಲ್ಪ ಆಯುಷ್ಯಿಗಳು” ಎಂಬ ಅನುಭವಿಗಳ ಮಾತು ಸಂತೃಪ್ತಿಗು ಅನ್ವಯಿಸಿತು. ಶಾಸ್ತ್ರೀಯ ಹಾಗೂ ಲಘು ಸಂಗೀತಗಳ ಜೊತೆಗೆ ಸಂಗೀತದ ಎಲ್ಲಾ ಪ್ರಕಾರಗಳನ್ನು ಹಾಡಬಲ್ಲ, ಚಿತ್ರಕಲೆಯನ್ನು ಕರಗತ ಮಾಡಿಕೊಂಡ, ಭಾಷಣ ಮಾಡಬಲ್ಲ, ಬಾಲ್ ಬ್ಯಾಡ್ಮಿಂಟನ್ ಹಾಗೂ ಇತರ ಕ್ರೀಡೆಗಳನ್ನು ಆಡಬಲ್ಲ ಕುಮಾರಿ ಸಂತೃಪ್ತಿ ಸಣ್ಣಪ್ಪ ಭಾಗ್ವತ ಇವೆಲ್ಲದರಲ್ಲೂ ನೂರಾರು ಬಹುಮಾನಗಳನ್ನು ಗೆದ್ದು ಎಸ್.ಎಸ್.ಎಲ್.ಸಿ. ಯಲ್ಲಿ ಪ್ರತಿಶತ 95 ಅಂಕಗಳಿಸಿ ಮೂಡಬಿದ್ರೆಯ ಅಳ್ವಾಸ್ ಕಾಲೇಜಿನಲ್ಲಿ ದ್ವಿತಿಯ ಪಿ.ಯು.ಸಿ. ವಿಜ್ನಾನ ಓದುತ್ತಿದ್ದಳು. ಅವಳ ಪೌಢಶಾಲಾ ಶಿಕ್ಷಕರಾದ ಪ್ರಸನ್ನ ಹೆಗಡೆಯವರು ‘ಅತ್ಯಂತ ಕ್ರೀಯಾಶೀಲಳಾದ ಅವಳಲ್ಲಿಯ ಜೀವನೋತ್ಸಾಹ ನಾನೂ ಯಾರಲ್ಲಿಯೂ ಕಾಣಲಿಲ್ಲ. ಅವಳು ನಮಗೆಲ್ಲರಿಗೂ ಅತಿ ಪ್ರೀತಿಯ ವಿದ್ಯಾರ್ಥಿನಿಯಾಗಿದ್ದಳು’ ಎಂದು ಮಾತುಮುಗಿಸುವ ಮೊದಲೆ ಉಕ್ಕಿಬಂದ ಅವರ ಕಣ್ಣೀರು ಉಳಿದ ಶಿಕ್ಷಕರನ್ನು ಮಾತಾಡಿಸುವ ನನ್ನ ಧೈರ್ಯಕ್ಕೆ ಕತ್ತರಿಯಾಯಿತು.
ತೊದಲು ಮಾತನಾಡುವ ವಯಸ್ಸಿನಲ್ಲಿ ತಾಯಿ ವೀಣಾ ಅನಿವಾರ್ಯವಾಗಿ ಸಂತೃಪ್ತಿಯನ್ನು ತರಬೇತಿಯೊಂದಕ್ಕೆ ಕರೆ ತಂದ್ದಿದ್ದರಂತೆ. ಅಂದಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ದಿವಾಕರ ಶೆಟ್ಟರು ದಿಢೀರನೆ ಬೇಟಿಕೊಟ್ಟಾಗ ಸಂತೃಪ್ತಿ ತನ್ನ ತೊದಲು ನುಡಿಯಲ್ಲಿ ದಿವಾಕರ ಶೆಟ್ಟರನ್ನು ಅಪ್ಪಿಕೊಂಡು ‘ನೀ…..ಎನ್ನ ಅಮ್ಮಂಗೆ ಬೈಯಡಾ’ ಎಂದಿದ್ದಳಂತೆ! ಕೆಲವೆ ವಾರಗಳ ಹಿಂದೆ ಸಣ್ಣಪ್ಪ ಭಾಗವತರು ನಮ್ಮ ಮನೆಗೆ ಬಂದಾಗ ಸಂತೃಪ್ತಿ ಮೂಡುಬಿದ್ರೆಯಿಂದ ದೂರವಾಣಿಯಲ್ಲಿ ಮಾತನಾಡುತ್ತಾ ಅನೇಕ ವಿಷಯಗಳನ್ನು ಹಂಚಿಕೊಂಡಳು. ನಾನು ಅಲ್ಲಿಯ ಊಟದ ವಿಷಯ ತೆಗೆದಾಗ ‘ ಸರ್, ನಾವಿಲ್ಲಿ ಬಂದಿರೋದು ಓದೋದಕ್ಕೆ. ಊಟ ಮಾಡೋಕಲ್ಲ. ಊಟ ಸೆಕೆಂಡರಿ. ಎಲ್ಲಕ್ಕೂ ಹೊಂದ್ಕೊಳ್ಳಬೇಕಲ್ವಾ’ ಎಂದು ಪ್ರಭುದ್ಧಳಾಗಿ ನುಡಿದಳು! ‘ಕೆಲವೊಮ್ಮೆ ಜ್ವರ ಬಂದಾಗ ಊಳಿದವರು ಫ್ಯೆನ್ ಹಚ್ಚ್ತಾರೆ. ಹಾಸ್ಟೆಲ್ ಎಂದ್ಮೇಲೆ ಅವಕ್ಕೆಲ್ಲ ಒಗ್ಗಿ ಕೊಳ್ಲೆ ಬೇಕು ಸರ್’ ಎನ್ನುವ ಅವಳ ನುಡಿಯಲ್ಲಿ ಹೊಂದಾಣಿಕೆಯ ಗುಣ ಎದ್ದು ಕಾಣುತಿತ್ತು.
ನಮ್ಮ ಮನೆಯ ಅಂಗಳದಲ್ಲಿಯೆ ಉತ್ತಮವಾದ ಶಾಲಾಕಾಲೇಜುಗಳು ಇರವಾವಾಗ ಪಾಲಕರು ದೂರದ ಊರಿನ ಗೋಜಿಗೆ ಹೋಗುವಾಗ ನೂರುಬಾರಿ ವಿಚಾರಮಾಡುವ ಪಕ್ವಕಾಲ ಈಗ ಕೂಡಿ ಬಂದಿದೆ. ನೂರಾರು ಕನಸುಗಳೊಂದಿಗೆ ತಮ್ಮ ಮಕ್ಕಳನ್ನು ದೂರದ ಕಾಲೇಜಿಗೆ ಸೇರಿಸಿ, ಕನಸು ಕಮರುವ ಭಯದಿಂದ ಕೆಲವೆ ದಿನ, ಕೆಲವೆ ವಾರ, ಕೆಲವೆ ತಿಂಗಳು, ಒಂದು ವರುಷದಲ್ಲಿ ತಮ್ಮ ಮಕ್ಕಳನ್ನು ತವರೂರಿಗೆ ಕರೆಸಿಕೊಂಡ ಉದಾಹರಣೆಗಳಿವೆ. ಯಲ್ಲಾಪುರದಿಂದ ಇಪ್ಪೆತ್ತೆರಡು ಕಿ.ಮೀ. ದೂರದ ಬಾಗಿನಕಟ್ಟಾದ ಸಂತೃಪ್ತಿಯ ಮನೆಯನ್ನು ಪ್ರಮೋದ ಹೆಗಡೆಯವರ ಜೊತೆ ತಲುಪಿದಾಗ ಕ್ರೀಯಾಶೀಲೆ ಸಂತೃಪ್ತಿ ಕ್ರೀಯಾಹೀನಳಾಗಿ ಜಗತ್ತಿನ ಯಾವ ಪರಿವೆಯಿಲ್ಲದೆ ಮನೆಯ ತೆಣೆಯ ಮೇಲೆ ಮಲಗಿದ್ದಳು. ಒಮ್ಮೆ ಸಂತೃಪ್ತಿ ತನ್ನ ಮುಸುಕು ತೆಗೆದು ಮುದ್ದ ಮುಖವನ್ನರಳಿಸಿ ಮತ್ತೆ ಮಾತಾಡಬಾರದೆ ಎಂದೆನಿಸಿತು. ಬಾರದ ಲೋಕಕ್ಕೆ ತೆರಳಿರುವ ಸಂತೃಪ್ತಿ ಆತ್ಮಕ್ಕೆ ಶಾಂತಿ ಸಿಗಲಿ…
–ಬೀರಣ್ಣ ನಾಯಕ ಮೊಗಟಾ.
Leave a Comment