ಕಾರವಾರ: ನಗರ ವ್ಯಾಪ್ತಿಯಲ್ಲಿದ್ದರೂ ಗುಡ್ಡಳ್ಳಿ ಗ್ರಾಮಕ್ಕೆ ಸೂಕ್ತ ರಸ್ತೆ ಸಂಪರ್ಕವಿಲ್ಲ. ಹೀಗಾಗಿ ಅಲ್ಲಿನ ಜನ ನಿತ್ಯ ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ.
ನಗರದಿಂದ ಸುಮಾರು 7 ಕಿ.ಮೀ. ದೂರದಲ್ಲಿ ಸಮುದ್ರ ಮಟ್ಟದಿಂದ ಸುಮಾರು 800 ಅಡಿ ಎತ್ತರದಲ್ಲಿ ಈ ಗುಡ್ಡಳ್ಳಿ ಎಂಬ ಊರು ಇದೆ. ಪ್ರಾರಂಭದಲ್ಲಿ ಗ್ರಾಪಂ ಆಡಳಿತಲ್ಲಿದ್ದ ಈ ಹಳ್ಳಿಯನ್ನು ಕಳೆದ 10 ವರ್ಷಗಳ ಹಿಂದೆ ನಗರ ವ್ಯಾಪ್ತಿಗೆ ಸೇರಿಸಲಾಗಿದೆ. ಆದರೆ ಯಾವುದೇ ಆಧುನಿಕ ಸೌಕರ್ಯಗಳನ್ನು ಕಲ್ಪಿಸಲಾಗಿಲ್ಲ. ಗುಡ್ಡಳ್ಳಿಯಲ್ಲಿ ಸುಮಾರು 30 ಮನೆಗಳಿವೆ. ಇಲ್ಲಿನ ಜನ ದಿನ ನಿತ್ಯ ಉದ್ಯೋಗಕ್ಕಾಗಿ ಹಾಗೂ ಇತರ ಕೂಲಿ ಕಾರ್ಯಗಳಿಗೆ ನಗರವನ್ನು ಅವಲಂಬಿಸಿದ್ದಾರೆ. ಅಲ್ಲದೆ ಮಕ್ಕಲು ಶಾಲಾ ಕಾಲೇಜುಗಳಿಗೆ ನಗರಕ್ಕೆ ಬರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ, ಜನ ಪ್ರತಿನಿಧಿಗಳಿಗೆ ರಸ್ತೆ ದುರಸ್ತಿ ಮಾಡಿಸಿಕೊಡುವಂತೆ ಸತತವಾಗಿ ಆಗ್ರಹಿಸುತ್ತಲೇ ಇದ್ದಾರೆ.
ಕಳೆದ ಮಳೆಗಾಲಕ್ಕೂ ಪೂರ್ವದಲ್ಲಿ ಇಲ್ಲಿಗೆ ಹೊಸ ರಸ್ತೆಯನ್ನು ನಿರ್ಮಾಣ ಮಾಡಲು ನಗರಸಭೆ ಹಾಗೂ ಜಿಲ್ಲಾಡಳಿತ ಕಾಮಗಾರಿ ಆರಂಬಿಸಲಾಗಿತ್ತು. ಸುಮಾರು 5 ಕಿ.ಮೀ. ವರೆಗೆ ಜೆಸಿಬಿ ಬಳಸಿ ಕಚ್ಚಾ ರಸ್ತೆಯನ್ನು ನಿರ್ಮಾಣ ಮಾಡಲಾಗಿತ್ತು. ಇನ್ನೂ 2 ಕಿ.ಮೀ. ಬಾಕಿ ಇರುವಾಗಲೇ ಮಳೆಗಾಲವೂ ಪ್ರಾರಂಭವಾದ ಕಾರಣ ಅದನ್ನು ಅಲ್ಲಿಗೆ ಕೈಬಿಡಲಾಗಿತ್ತು. ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಕೂಗೊಳ್ಳಲಾದ ಈ ಕಾಮಗಾರಿಯು ಮಳೆ ನಿರಿನಲ್ಲಿ ಕೊಚ್ಚಿ ಹೋದಂತಾಗಿದೆ. ಅವೈಜ್ಞಾನಿಕ ಕಾಮಗಾರಿಯ ಪರಿಣಾಮ ವರ್ಷ ಕಳೆಯುವದರೊಳಗೇ ರಸ್ತೆ ಸಂಪೂರ್ಣ ಹಾಳಾಗಿದೆ. ಕಳೆದ ವರ್ಷ ರಸ್ತೆ ನಿರ್ಮಾಣವಾಗುವ ಆಶಾ ಭಾವನೆಯಲ್ಲಿ ಕೆಲವರು ದ್ವಿಚಕ್ರ ವಾಹನಗಳನ್ನು ಖರೀದಿಸಿದ್ದರು. ರಸ್ತೆ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ತಮ್ಮ ವಾಹನಗಳನ್ನು ರಸ್ತೆ ಇರುವಲ್ಲಿಗೆ ಒಯ್ದು ಅಲ್ಲಿಂದ ಮುಂದೆ ನಡೆದು ಹೋಗುತ್ತಿದ್ದರು. ಇದರಿಂದಾಗಿ ಅವರಿಗೆ ತಾವು ತಂದ ವಿವಿಧ ಅವಶ್ಯಕ ವಸ್ತುಗಳನ್ನು ಒಯ್ಯಲು ಕೂಡ ಅನುಕೂಲವಾಗುತ್ತಿತ್ತು. ಆದರೆ ರಸ್ತೆಯು ದುಸ್ಥಿತಿ ತಲುಪಿದ್ದು ತಮ್ಮ ವಾಹನಗಳನ್ನು ನಗರದ ಯಾರಾದರೂ ಪರಿಚಯದವರ ಮನೆ ಬಳಿ ಇರಿಸಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಲವು ವರ್ಷದ ಹಿಂದೆ ಗುಡ್ಡೆಹಳ್ಳಿಗೆ ಪಕ್ಕಾ ರಸ್ತೆಯನ್ನು ನಿರ್ಮಿಸಿಕೊಡುವಂತೆ ಸ್ಥಳೀಯರು ಆಗ್ರಹಿಸಿದ್ದರು. ಆದರೆ ಗುಡ್ಡೆಹಳ್ಳಿಯು ಅರಣ್ಯ ವ್ಯಾಪ್ತಿಯ ಪ್ರದೇಶದಲ್ಲಿ ಇರುವುದರಿಂದ ಅಲ್ಲಿಗೆ ತೆರಳಲು ಯಾವುದೇ ರಸ್ತೆ ಮ್ಯಾಪ್ ಇಲ್ಲದಿರುವುದರಿಂದÀ ಹೊಸ ರಸ್ತೆ ನಿರ್ಮಾಣ ಸಾಧವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ಬ್ರಿಟಿಷರ ಕಾಲದಲ್ಲಿ ಅಲ್ಲಿ ಅರಣ್ಯಾಧಿಕಾರಿಗಳ ಹಾಗೂ ನ್ಯಾಯಾಧೀಶರ ವಸತಿ ಗೃಹಗಳಿದ್ದವು. ಆ ಸಂದರ್ಭದಲ್ಲಿ ಕುದುರೆ ಗಾಡಿ(ಟಾಂಗಾ)ಗಳು ಅಲ್ಲಿ ರಸ್ತೆಯ ಮೂಲಕವೇ ಬರುತ್ತಿದ್ದವು ಎಂದು ಗುಡ್ಡೆಹಳ್ಳಿ ನಿವಾಸಿಗಳು ಹೇಳಿದ್ದು ಅದೇ ರಸ್ತೆಯನ್ನು ದುರಸ್ಥಿ ಮಾಡಿ ಕೊಡಿ ಎಂದು ಆಗ್ರಹಿಸಿದರು. ಮೊದಲು ಗ್ರಾಪಂ ವ್ಯಾಪ್ತಿಯಲ್ಲಿದ್ದ ತಾವು ನಗರಸಭೆ ವ್ಯಾಪ್ತಿಗೆ ಸೇರಿದ ಬಳಿಕ ಹೆಚ್ಚು ಅಭಿವೃದ್ಧಿಯಾಗ ಬಹುದೆಂಬ ಆಶಾಭಾವನೆ ಇತ್ತು. ಆದರೆ ಅದು ನಿರಾಶೆಯಾಗಿಯೇ ಉಳಿದಿದೆ ಎಂದು ಸ್ಥಳೀಯರು ತಮ್ಮ ಅಳಲು ತೋಡಿಕೊಂಡರು.
**************************
ನಗರ ವ್ಯಾಪ್ತಿಯಲ್ಲಿದ್ದರೂ ಸುಮಾರು 7 ಕಿ.ಮೀ. ನಡೆದು ಮನೆ ತಲುಪಬೇಕಾದ ಸ್ಥಿತಿ ನಮ್ಮದಾಗಿದೆ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ ಆದಷ್ಟು ಶೀಘ್ರದಲ್ಲಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
-ಸುರೇಶ ಗೌಡ ಗುಡ್ಡೆಹಳ್ಳಿ ನಿವಾಸಿ
Leave a Comment