ಕಾರವಾರ: 2009ರ ಅಕ್ಟೋಬರ್ 2ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಬಾರೀ ಮಳೆಗೆ ಕಡವಾಡದಲ್ಲಿ ಗುಡ್ಡ ಕುಸಿತ ನಡೆದು 22 ಮಂದಿ ಸಾವನಪ್ಪಿದ್ದರು. ಹೀಗೆ ಸಾವನಪ್ಪಿದವರ ಕುಟುಂಬದವರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ತಲಾ 1 ಲಕ್ಷ ರೂ ಪರಿಹಾರ ಘೋಷಿಸಿದ್ದು, ಎಂಟು ವರ್ಷ ಕಳೆದರೂ ಕೇಂದ್ರ ಸರ್ಕಾರದ ಪರಿಹಾರ ಬಂದಿಲ್ಲ.
ಅಂದು ಸುರಿದ ಮಳೆಗೆ ಉತ್ತರ ಕನ್ನಡ ಜಿಲ್ಲೆ ಸಂಪೂರ್ಣವಾಗಿ ನಲುಗಿ ಹೋಗಿತ್ತು. ಕಡವಾಡದ ಝರಿವಾಡ ಗ್ರಾಮದಲ್ಲಿನ ಗುಡ್ಡ ಕುಸಿದಿತ್ತು. ಈ ದುರಂತದಲ್ಲಿ 1,636 ಮನೆಗಳು ಹಾನಿಗೊಳಗಾಗಿದ್ದವು. 2,461 ಮಂದಿ ಸಂತ್ರಸ್ತರಾಗಿದ್ದರು. 21 ಗಂಜಿ ಕೇಂದ್ರಗಳನ್ನು ತೆರೆದು ಸಂತ್ರಸ್ಥರಿಗೆ ಆಶ್ರಯ ಒದಗಿಸಲಾಗಿತ್ತು. ಘಟನೆಯಲ್ಲಿ 22 ಮಂದಿ ಮಣ್ಣಿನಡಿ ಸಿಲುಕಿ ಸಾವು ಕಂಡಿದ್ದರು. ವಾರಗಳ ನಂತರ ಒಬ್ಬರಾದ ಮೇಲೆ ಒಬ್ಬರಂತೆ ಮೃತ ದೇಹಗಳು ದೊರೆತಿದ್ದವು. 200ಕ್ಕೂ ಅಧಿಕ ಮಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಕೆಲವರ ಕುರುಹುಗಳು ಮಾತ್ರ ದೊರೆತಿದ್ದು, ಉಳಿದವು ಮಣ್ಣಿನಲ್ಲಿಯೇ ಮಣ್ಣಾಗಿ ಹೋಗಿದ್ದವು. ಘಟನೆ ನಂತರ ಹಲವು ನಾಯಕರು ಸ್ಥಳ ಭೇಟಿ ಮಾಡಿದರು. ವಿವಿಧ ಆಶ್ವಾಸನೆಗಳನ್ನು ನೀಡಿದರು. ಅಂದಿನ ರಾಜ್ಯ ಸರ್ಕಾರ ಮೃತರ ಕುಟುಂಬದವರಿಗೆ 1 ಲಕ್ಷ ರೂ ಪರಿಹಾರ ಘೋಷಿಸಿತು. ಕೇಂದ್ರ ಸರ್ಕಾರವೂ 1 ಲಕ್ಷ ರೂ ಪರಿಹಾರ ಘೋಷಿಸಿತು. ಆದರೆ, ಘಟನೆಯಿಂದ ನೊಂದಿರುವ ರಾಜನ್ ಕೊಠಾರಕರ್ ಎಂಬಾತರಿಗೆ ಈವರೆಗೂ ಕೇಂದ್ರ ಸರ್ಕಾರ ಘೋಷಿಸಿದ ಹಣ ಬಂದಿಲ್ಲ.
ಘಟನೆ ನಡೆದ ದಿನ ರಾಜನ್ ಗೋವಾದಲ್ಲಿದ್ದರು. ಕೂಲಿ ಕೆಲಸ ಮಾಡಿ ಬದುಕುವ ಇವರಿಗೆ ಗೋವಾದಲ್ಲಿ ಕೆಲಸವಿದ್ದ ಕಾರಣ ಬದುಕುಳಿದರು. ರಭಸ ಮಳೆಯಿದ್ದ ಕಾರಣ ನಾಲ್ಕೈದು ದಿನಗಳ ಕಾಲ ಯಾವದೇ ಸಂಪರ್ಕ ಸಾದ್ಯವಾಗಿರಲಿಲ್ಲ. ಕೆಲಸ ಮುಗಿಸಿ ಬರುವ ವೇಳೆಗಾಗಲೇ ತಾಯಿ, ತಂಗಿ ಹಾಗೂ ತಮ್ಮ ದುರಂತದಲ್ಲಿ ಮಣ್ಣುಪಾಲಾಗಿದ್ದರು. ಇದಾಗಿ ತಿಂಗಳ ನಂತರ ಇವರ ಖಾತೆಗೆ ರಾಜ್ಯ ಸರ್ಕಾರ ಘೋಷಿಸಿದ 1ಲಕ್ಷ ರೂ ಪರಿಹಾರ ಬಂದಿದೆ. ಆದರೆ, ಕೇಂದ್ರ ಸರ್ಕಾರ ಇನ್ನು ಹಣ ನೀಡಿಲ್ಲ. ಈ ಘಟನೆಯಲ್ಲಿ ಮಣ್ಣು ಪಾಲಾಗಿದ್ದ ಬಹುತೇಕ ಕುಟುಂಬದವರಿಗೆ ಕೇಂದ್ರದಿಂದ ಪರಿಹಾರ ಬಂದಿದೆ. ಆದರೆ, ಇವರಿಗೆ ಅದು ತಪ್ಪಿ ಹೋಗಿದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳನ್ನು ಭೇಟಿ ಮಾಡಿದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ರಾಜನ್ ಅಳಲು ತೋಡಿಕೊಂಡರು.
*********************
ಗುಡ್ಡ ಕುಸಿತದ ವೇಳೆ ಪಾಲಕರನ್ನು ಕಳೆದುಕೊಂಡು ಅನಾಥರಾಗಿದ್ದ ಮೂವರು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಳ್ಳುವದಾಗಿ ಸಂಸದ ಅನಂತಕುಮಾರ ಹೆಗಡೆ ಘೋಷಿಸಿದ್ದರು. ಆದರೆ, ಈವರೆಗೂ ಅವರಿಗೆ ಅನಂತರಿಂದ ಯಾವದೇ ಸಹಾಯವಾಗಿಲ್ಲ. ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ನಿರಾಶ್ರಿತರಾದ ವಿದ್ಯಾವಂತರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಅದೂ ಈಡೇರಿಲ್ಲ. ಹೀಗಾಗಿ ರಾಜನ್ ಈ ಬಗ್ಗೆ ಜಿಲ್ಲಾಡಳಿತದ ಮೂಲಕ ಪ್ರಧಾನಿಗೆ ಪತ್ರ ಬರೆದಿದ್ದಾರೆ.
********************
1. ಗುಡ್ಡ ಕುಸಿತದಿಂದ ಸಂತ್ರಸ್ಥರಾದವರಿಗೆ ಸರ್ಕಾರ ನ್ಯಾಯ ಕೊಡಿಸಬೇಕು. ರಾಜನ್ರಂತಹ ಹಲವು ಕುಟುಂಬದವರಿಗೆ ಪರಿಹಾರ ಸಿಗದ ಸಾದ್ಯತೆಗಳಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಜರುಗಿಸಬೇಕು.
– ಮಾಧವ ನಾಯಕ, ಅಧ್ಯಕ್ಷರು ಜನಶಕ್ತಿ ವೇದಿಕೆ
2. ಕೇಂದ್ರ ಸರ್ಕಾರದಿಂದ ಪರಿಹಾರ ಬಾರದಿರುವ ಬಗ್ಗೆ ವಿಚಾರಿಸಲಾಗುವದು. ರಾಜನ್ ಅವರಿಂದ ಸ್ವೀಕರಿಸಿದ ಮನವಿಯನ್ನು ಪ್ರಧಾನಿ ಕಚೇರಿಗೆ ರವಾನಿಸಿ ಸಂತ್ರಸ್ಥರಿಗೆ ನ್ಯಾಯ ದೊರಕಿಸಿಕೊಡುವ ಪ್ರಯತ್ನ ನಡೆಸಲಾಗುತ್ತದೆ.
– ಎಚ್. ಪ್ರಸನ್ನ, ಅಪರ ಜಿಲ್ಲಾಧಿಕಾರಿ. ಉತ್ತರ ಕನ್ನಡ
Leave a Comment