ಕಾರವಾರ: ಇಲ್ಲಿನ ರವೀಂದ್ರನಾಥ ಟ್ಯಾಗೋರ ಕಡಲತೀರದಲ್ಲಿ ಸಿದ್ದಗೊಳ್ಳುತ್ತಿರುವ ರಾಕ್ ಗರ್ಡನ್ನಲ್ಲಿ ಮೀನುಗಾರಿಕೆಯನ್ನು ಅಭಿವ್ಯಕ್ತಿಸುವ ಸುಮಾರು 22 ಅಡಿ ಎತ್ತರದ ಸೆಲಿಬ್ರೆಷನ್ ಕಲ್ಚರ್ ಎಂಬ ಹೊಸ ಕಲಾಕೃತಿಯನ್ನು ಬೆಂಗಳೂರಿನಲ್ಲಿ ಸಿದ್ದಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಹೇಳಿದರು.
ನಗರದ ಮಯೂರವರ್ಮ ವೇದಿಕೆಯಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ಜನಪರ ಸಿಮೆಂಟ್ ಶಿಲ್ಪಕಲಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರದಲ್ಲಿ ಕಳೆದ ವರ್ಷ ಆಯೋಜಿಸಿದ್ದ ಶಿಬಿರದಲ್ಲಿ ಸುಮಾರು 15ಕ್ಕೂ ಹೆಚ್ಚು ಕಲಾಕೃತಿಗಳನ್ನು ಮೂಡಿಬಂದಿದ್ದು, ಅದನ್ನು ರಾಕ್ ಗಾರ್ಡನ್ಗೆ ಬಳಸಲಾಗುತ್ತಿದೆ. ಅದೇ ರಿತಿ ಈ ವರ್ಷ ಕೂಡ ರಾಜ್ಯದ ವಿವಿಧ ಭಾಗಗಳಿಂದ ಕಲಾವಿದರು ಆಗಮಿಸಿದ್ದು, ಇನ್ನಷ್ಟು ಕಲಾಕೃತಿಗಳು ಲಭ್ಯವಾಗವು ಭರವಸೆ ಇದೆ. ರಾಕ್ ಗಾರ್ಡನ್ನಲ್ಲಿ ಮೀನುಗಾರರು ಮೀನು ಹಿಡಿಯುವ ಮತ್ತು ಮೀನುಗಳು ಸಿಕ್ಕಾಗ ಸಂಭ್ರಮಿಸುವ ಕುರಿತ ಕಲಾಕೃತಿ ಕೂಡ ಸಿದ್ದಗೊಳ್ಳುತ್ತಿದೆ ಎಂದು ಹೇಳಿದರು.
ಜಿಲ್ಲೆಯ ವಿವಿಧ ಜನಾಂಗಗಳ ರೂಪಕಗಳನ್ನು ಬಿಡಸಲಾಗಿದೆ. ಈಗಾಗಲೇ ಒಟ್ಟು 45 ಕಲಾಕೃತಿಗಳು ಸಿದ್ದವಾಗಿದ್ದು, ಅವುಗಳನ್ನು ವಿಂಗಡಿಸಿ ಆರು ಗುಂಪುಗಳಲ್ಲಿ ಇಡಲಾಗುವುದು. ಆದ್ದರಿಂದ ಕಲಾವಿದರಿಗೆ ಸಿಮೆಂಟ್ ಮೂಲಕ ಉತ್ತಮ ಕಲಾಕೃತಿಗಳನ್ನು ತಯಾರಿಸಲು ಒಂದು ಉತ್ತಮ ವೇದಿಕೆ ದೊರೆತಿದ್ದು, ಅದನ್ನು ಸಾಕಾರಗೊಳಿಸಲು ಹೆಚ್ಚು ಗಮನ ನೀಡಬೇಕು ಎಂದು ಹೇಳಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ರಿಜಿಸ್ಟ್ರಾರ್ ಇಂದ್ರಮ್ಮ ಎಚ್.ವಿ ಮಾತನಾಡಿ, ಜಿಲ್ಲೆಯಲ್ಲಿ ಶಿಲ್ಪಕಲಾ ಶಿಬಿರ ನಡೆಸಬೇಕೆಂಬ ಕೋರಿಕೆ ಬಂದಾಗ ಒಮ್ಮೆ ಅದು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಎದುರಾದ ತೊಡಕುಗಳನ್ನು ನಿವಾರಿಸಿಕೊಂಡು ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 20 ಹಿರಿಯ ಹಾಗೂ ಕಿರಿಯ ಕಲಾಕಾರರ ಆಗಮಿಸಿದ್ದಾರೆ. 15 ದಿನಗಳ ಕಲಾ ನಡೆಯುವ ಶಿಬಿರದಲ್ಲಿ ವಿವಿಧ ಕಲಾಕೃತಿಗಳ ತಮ್ಮಲ್ಲಿರುವ ಕಲೆಯನ್ನು ಸಿಮೆಂಟ್ ಮೂಲಕ ಪ್ರಸ್ತುತಪಡಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯ ಸಂಚಾಲಕ ಪಿ. ಬಾಬು, ವೆಂಕಟೇಶ ಇದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ನಾಯಕ ಉಪಸ್ಥಿತರಿದ್ದರು.
Leave a Comment