ಕಾರವಾರ: ಹೊನ್ನಾವರ ತಾಲೂಕಿನ ಕಾಸರಕೋಡು ಟೊಂಕಾ ಗ್ರಾಮ ಅಕ್ರಮ ಚಟುವಟಿಕೆಗಳಿಂದ ಹಾಳಾಗುತ್ತಿದೆ. ಅಕ್ರಮ ಸರಾಯಿ ಹಾಗೂ ಮಟಕಾ ದಂದೆ ಇಲ್ಲಿ ಮಿತಿ ಮೀರಿದೆ. ಇಲ್ಲಿನ ಮಜರೆ-2ದಲ್ಲಿ ಕಳ್ಳಭಟ್ಟಿ ಸರಾಯಿ ತಯಾರಿಸುತ್ತಿದ್ದು, ಇದರಿಂದ ಸಮಾಜದ ಸ್ವಾಸ್ಥ ಕೆಡುತ್ತಿದೆ. ಹೀಗಾಗಿ ಕೂಡಲೇ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ಮಹಿಳೆಯರು ಜಿಲ್ಲಾಡಳಿತಕ್ಕೆ ಮಂಗಳವಾರ ದೂರು ಸಲ್ಲಿಸಿದರು.
ಖಾರ್ವಿ ಸಮಾಜದ ಮೀನುಗಾರರ ಹೆಚ್ಚಾಗಿರುವ ಈ ಊರಿನಲ್ಲಿ ಕೂಲಿ ಮಾಡಿ ಬದುಕುವ ಜನರೇ ಜಾಸ್ತಿಯಿದ್ದಾರೆ. ಊರಿನಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಮಟಕಾ ದಂದೆ ನಡೆಯುತ್ತಿರುವದರಿಂದ ದುಡಿದ ಹಣವನ್ನು ಜನ ದುಷ್ಟಟಗಳಿಗೆ ಬಳಸುತ್ತಿದ್ದಾರೆ. ಹೀಗಾಗಿ ಊರಿನಲ್ಲಿ ಜಗಳ, ಹೊಡೆದಾಟ ಸಾಮಾನ್ಯವಾಗಿದೆ. ಇದರಿಂದ ಗ್ರಾಮದ ಸ್ವಾಸ್ಥ್ಯ ಹಾಳಾಗುತ್ತಿದೆ ಎಂದು ಅಲ್ಲಿನ ಮಹಿಳೆಯರು ದೂರಿದರು. ಬಡ ಮೀನುಗಾರರು ಮೀನುಗಾರಿಕೆಯಿಂದ ಬಂದ ಹಣವನ್ನು ವ್ಯಸನಗಳಿಗೆ ವೆಚ್ಚ ಮಾಡುತ್ತಿರುವದರಿಂದ ಮಹಿಳೆಯರ ಜೀವನ ನಿರ್ವಹಣೆ ಕಷ್ಟವಾಗಿದೆ. ಮಕ್ಕಳ ಭವಿಷ್ಯ ಕೂಡ ಆತಂಕದ ಸ್ಥಿತಿಯಲ್ಲಿದೆ. ಕುಡುಕರ ಸಂಖ್ಯೆಯೂ ಹೆಚ್ಚಾಗಿರುವದರಿಂದ ಮಹಿಳೆ ಹಾಗೂ ಮಕ್ಕಳಿಗೆ ಭದ್ರತೆ ಇಲ್ಲದಂತಾಗಿದೆ. ಹೀಗಾಗಿ ಕೂಡಲೇ ಅಕ್ರಮ ದಂದೆಕೋರರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಮಹಿಳೆಯರು ಒತ್ತಾಯಿಸಿದರು. ಅನಧಿಕೃತವಾಗಿ ಸರಾಯಿ ಮಾರಾಟ ಮಾಡುವ 10ಜನರ ಹೆಸರನ್ನು ನಮೂದಿಸಿ ಜಿಲ್ಲಾಡಳಿತಕ್ಕೆ ದೂರು ನೀಡಿದರು.
ಅಕ್ರಮ ದಂದೆಯಿಂದ ಊರ ಮಹಿಳೆಯರು ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ಅನುಭವಿಸುತ್ತಿದ್ದಾರೆ. ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರು ಈ ಅಕ್ರಮದಲ್ಲಿ ಶಾಮೀಲಾಗಿರುವದರಿಂದ ದಂದೆಕೋರರನ್ನು ಮಟ್ಟ ಹಾಕಲು ಸಾದ್ಯವಾಗುತ್ತಿಲ್ಲ. ಸ್ಥಳೀಯ ಗ್ರಾಮ ಪಂಚಾಯತಗೆ ಮನವಿ ಕೊಟ್ಟರೂ ಯಾವದೇ ಪ್ರಯೋಜನವಾಗಿಲ್ಲ ಎಂದು ದೂರಿದರು. ತಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಅಕ್ರಮಗಳನ್ನು ಮಟ್ಟ ಹಾಕದಿದ್ದರೆ ಉಗ್ರ ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದರು. ಸ್ವ ಸಹಾಯ ಸಂಘದ ಪ್ರಮುಖದಾರ ಸುನಿತಾ, ನಾಗವೇಣಿ, ಪಾರ್ವತಿ, ಮಾಲತಿ, ಲಲತಾ, ಶಾಂತಿ, ತಾರಾ ಇತರರು ಇದ್ದರು.
Leave a Comment