ಕಾರವಾರ: ನಗರದ ವಿವಿಧ ವಾರ್ಡಗಳಲ್ಲಿ ನಡೆಯುವ ಅಭಿವೃದ್ದಿ ಕೆಲಸಗಳ ಕುರಿತು ಅಧಿಕಾರಿಗಳು ಸ್ಥಳೀಯ ಸದಸ್ಯರಿಗೆ ಸೂಕ್ತ ಮಾಹಿತಿ ಒದಗಿಸಬೇಕು ಎಂದು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಸೂಚಿಸಿದರು.
ಮಂಗಳವಾರ ನಗರಸಭೆಯಲ್ಲಿ ನಡೆದ ಸಭೆಯಲ್ಲಿ ಅವರು, ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದರು.
ನಗರದ ಜನತಾ ಬಜಾರ್ ಮುಂಭಾಗ ಮರವೊಂದನ್ನು ಕಡಿಯಲಾಗಿದೆ. ಇದರಿಂದ ನಗರದ ಸೌಂದರ್ಯಕ್ಕೆ ದಕ್ಕೆ ಉಂಟಾಗಿದೆ. ರಸ್ತೆ ಅಗಲೀಕರಣದ ವೇಳೆ ಮರ ಕಟಾವಿಗೆ ವಿರೋಧ ವ್ಯಕ್ತಪಡಿಸಿದ್ದ ಪರಿಸರವಾದಿಗಳು ಈಗ ಸುಮ್ಮನಿದ್ದಾರೆ. ಮರ ಕಡಿತ ನಂತರ ಕಟ್ಟಿಗೆ ಸಾಗಾಟದ ಬಗ್ಗೆಯೂ ಅನುಮಾನಗಳಿವೆ. ಮರ ಕಟಾವಿನ ಕುರಿತು ನಗರಸಭೆ ಅಧಿಕಾರಿಗಳು ಜನಪ್ರತಿನಿಧಿಗಳ ಗಮನಕ್ಕೆ ತಂದಿಲ್ಲ ಎಂದು ಸದಸ್ಯ ಗಣಪತಿ ಉಳ್ವೇಕರ್ ಆರೋಪಿಸಿದರು. ಇದಲ್ಲದೇ ವಿವಿಧ ಕಾಮಗಾರಿಗಳ ಅನುಷ್ಟಾನದ ವೇಳೆಯಲ್ಲಿಯೂ ಸದಸ್ಯರಿಗೆ ಅಧಿಕಾರಿಗಳು ಸೂಕ್ತ ಮಾಹಿತಿ ನೀಡುತ್ತಿಲ್ಲ ಎಂದು ಕೆಲ ಸದಸ್ಯರು ಆಕ್ಷೇಪ ವ್ಯಕ್ತ ಪಡಿಸಿದರು. ಈ ವೇಳೆ ನಗರಸಭೆಯಲ್ಲಿ ನಡೆಸಲಾಗುವ ಎಲ್ಲಾ ಚಟುವಟಿಕೆಗಳ ಕುರಿತು ಸದಸ್ಯರಿಗೆ ಸೂಕ್ತ ಮಾಹಿತಿ ಒದಗಿಸುವಂತೆ ಅಧ್ಯಕ್ಷರು ತಾಕೀತು ಮಾಡಿದರು.
ನಗರದಲ್ಲಿ ನಡೆಯುವ ಜಾತ್ರಾ ಮಹೋತ್ಸವಗಳಿಗೆ ಬೆಳಕಿನ ತೊಂದರೆಯಾಗುತ್ತಿದೆ ಎಂದು ಸದಸ್ಯರು ಅಸಮಧಾನ ವ್ಯಕ್ತಪಡಿಸಿದರು. ನಗರಸಭೆ ಬಳಿ ಪ್ಲೆಡ್ಲೈಟ್ಗಳಿದ್ದು ಅದನ್ನು ವಿಶೇಷ ಹಬ್ಬ ಹರಿದಿನ ಹಾಗೂ ಜಾತ್ರಾ ಮಹೋತ್ಸವಗಳಲ್ಲಿ ಅಳವಡಿಸಬೇಕು ಎಂದು ಆಗ್ರಹಿಸಿದರು. ಸದಸ್ಯ ರಮೇಶ್ ಗೌಡ ಮಾತನಾಡಿ, ನಗರಸಭೆ ವ್ಯಾಪ್ತಿಗೆ ಬರುವ ಗುಡ್ಡಳ್ಳಿ ಇನ್ನು ಹಿಂದೂಳಿದ ಪ್ರದೇಶವಾಗಿದೆ. ಈ ಗ್ರಾಮದಲ್ಲಿ ವಿದ್ಯುತ್ ಇಲ್ಲ. ನಗರಸಭೆಗೆ ಮನವಿ ಸಲ್ಲಿಸಿದ ನಂತರ ಗುಡ್ಡಳ್ಳಿಗೆ ಕೆಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಜಿಲ್ಲಾಡಳಿತ ಹಾಗೂ ನಗರಸಭೆ ಸಹಕಾರದಲ್ಲಿ ಶೌಚಾಲಯ, ಕುಡಿಯುವ ನೀರು ಹಾಗೂ ರಸ್ತೆ ನಿರ್ಮಾಣ ಕೆಲಸ ಮಾಡಲಾಗುತ್ತಿದೆ. ಹೀಗಿದ್ದರೂ ಕೆಲವರು ನಗರಸಭೆ ವಿರುದ್ದ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಗುಡ್ಡಳ್ಳಿ ಗ್ರಾಮದ ಜನತೆಗೆ ಬೆಳಕಿನ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ಇನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಬಂದ ಅನುಧಾನ ಸರಿಯಾಗಿ ಬಳಕೆಯಾಗುತ್ತಿಲ್ಲ ಎಂದು ಸದಸ್ಯರು ಆರೋಪಿಸಿದರು. ಹಗಲಿನಲ್ಲಿಯೂ ಬೀದಿ ದೀಪ ಉರಿಯುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಬೀದಿ ದೀಪ ನಿರ್ವಹಣಾ ಸಮಿತಿ ನಿರ್ಲಕ್ಷ ವಹಿಸಿದವರಿಗೆ 10ಸಾವಿರ ದಂಡ ವಿಧಿಸಿರುವದಾಗಿ ಪೌರಾಯುಕ್ತ ಯೋಗೇಶ್ವರ ಸಭೆಗೆ ತಿಳಿಸಿದರು. ಉಪಾಧ್ಯಕ್ಷೆ ಲೀಲಾಬಾಯಿ ಠಾಣೆಕರ್ ಹಾಗೂ ಇತರೆ ಸದಸ್ಯರು ಸಭೆಯಲ್ಲಿದ್ದರು
Leave a Comment