ಕಾರವಾರ: ಟಿಪ್ಪುವಿನ ಸಾಧನೆ ಕೊಂಡಾಡಿದ್ದ ಬಿಜೆಪಿ ಮುಖಂಡರೇ ಈಗ ಟಿಪ್ಪು ಜಯಂತಿ ಕುರಿತು ವಿರೋಧ ವ್ಯಕ್ತಪಡಿಸುತ್ತಿರುವದು ರಾಜಕೀಯ ಕೆಸರಾಟವಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ, ಜಗದೀಶ ಶೇಟ್ಟರ್, ಸದಾನಂದ ಗೌಡ ಅವರು ಟಿಪ್ಪುವನ್ನು ಕೊಂಡಾಡಿದ್ದರು. ಆದರೆ, ಚುನಾವಣೆ ಸಮೀಪಿಸುತ್ತಿದ್ದಂತೆ ಟಿಪ್ಪು ವಿರೋಧಿ ಹೇಳಿಕೆ ನೀಡಲಾರಂಭಿಸಿದ್ದಾರೆ ಎಂದು ದೂರಿದರು. ಮುಖಂಡರಾದವರಿಗೆ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ಶಕ್ತಿ ಇರಬೇಕು. ಜಾತ್ಯಾತೀತ ವ್ಯವಸ್ಥೆಯಲ್ಲಿ ಎಲ್ಲರೂ ವಿಶ್ವಾಸವಿಡಬೇಕು. ರಾಜಕೀಯಕ್ಕಾಗಿ ಬಣ್ಣ ಬದಲಿಸಬಾರದು ಎಂದು ಅಭಿಪ್ರಾಯಪಟ್ಟರು. ಸರ್ಕಾರದಿಂದ ಆಚರಿಸುವ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಪದ್ದತಿಯಂತೆ ಕೇಂದ್ರ ಸಚಿವರನ್ನು ಆಮಂತ್ರಿಸುತ್ತೇವೆ. ಸಚಿವ ಅನಂತಕುಮಾರ ಹೆಗಡೆಯವರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿ ಕಾರ್ಯಕ್ರಮಕ್ಕೂ ಕರೆಯಲಾಗುತ್ತದೆ. ವೇದಿಕೆಗೆ ಬರುವದು, ಬಿಡುವದು ಅವರವರ ಇಷ್ಟ. ಗೌರವ ಕೊಡುವದು ನಮ್ಮ ಜವಾಬ್ದಾರಿ ಎಂದರು. ವಿರೋಧ ಪಕ್ಷದವರು ಕಾಂಗ್ರೆಸ್ ಮುಖಂಡರ ವಿರುದ್ದ ಆರೋಪ ಮಾಡುವ ಬದಲು ದಾಖಲೆಗಳನ್ನು ಬಹಿರಂಗ ಪಡಿಸಬೇಕು. ವಿನಾಕಾರಣ ಸುಳ್ಳು ಆರೋಪಗಳನ್ನು ಮಾಡಬಾರದು ಎಂದರು.
Leave a Comment