ಕಾರವಾರ: ಡಿಸೆಂಬರ್ 8ರಿಂದ 10ರ ವರೆಗೆ “ಕರಾವಳಿ ಉತ್ಸವ” ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಮಂಗಳವಾರ ಸಂಜೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ನಡೆಸಿದ ಸಭೆಯಲ್ಲಿ ಕರಾವಳಿ ಉತ್ಸವದ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ಕರಾವಳಿ ಉತ್ಸವ ಹಾಗೂ ಉತ್ಸವದ ಅಂಗವಾಗಿ ನಡೆಸಬೇಕಾದ ಚಟುವಟಿಕೆಗಳ ಕುರಿತು ಚರ್ಚೆ ನಡೆಸಿದರು. ನಂತರ ಡಿಸೆಂಬರ್ 8, 9, 10ರಂದು ಉತ್ಸವ ಆಯೋಜಿಸುವ ಕುರಿತು ಘೋಷಿಸಿದರು. ಈ ಬಾರೀ ಕಾರವಾರ, ಹಳಿಯಾಳ ಹಾಗೂ ಹೊನ್ನಾವರದಲ್ಲಿ ಉತ್ಸವ ನಡೆಯಲಿದೆ ಎಂದು ತಿಳಿಸಿದರು. ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕು. ಅಂತರಾಷ್ಟ್ರೀಯ ಕಲಾವಿದರನ್ನು ಕರೆಯಿಸಬೇಕು. ಜೊತೆಗೆ ಜನರ ಸಹಭಾಗಿತ್ವದಲ್ಲಿ ಉತ್ಸವಗಳನ್ನು ನಡೆಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
* ಸ್ಕೂಬಾ ಡೈವಿಂಗ್ ಉತ್ಸವ
ಭಟ್ಕಳ ಸಮೀಪದ ಮುರ್ಡೇಶ್ವರ ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್ ಉತ್ಸವ ನಡೆಸುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು. ಜನವರಿ 6 ಮತ್ತು 7ರಂದು ಎರಡು ದಿನಗಳ ಕಾಲ ಸ್ಕೂಬಾ ಡೈವಿಂಗ್ ಉತ್ಸವ ನಡೆಸುವ ಬಗ್ಗೆ ಚರ್ಚೆ ನಡೆಯಿತು. ಪ್ರವಾಸೋಧ್ಯಮ ಬೆಳವಣಿಗೆಗೆ ಪೂರಕವಾಗಿ ಈ ಉತ್ಸವ ನಡೆಸುವಂತೆ ಸಚಿವರು ಸೂಚಿಸಿದರು. ಅಂತರಾಷ್ಟ್ರೀಯ ಹಾಗೂ ಪರಿಣಿತ ಸ್ಕೂಬಾ ಡೈವಿಂಗ್ ತಂಡವನ್ನು ಉತ್ಸವಕ್ಕೆ ಆಮಂತ್ರಿಸುವಂತೆ ಸಲಹೆ ನೀಡಿದರು.
* ವೈನ್ ಫೆಸ್ಟಿವಲ್
ಕಾರವಾರದ ಕಾಳಿ ಸಂಗಮದಲ್ಲಿ ನವೆಂಬರ್ 24ರಿಂದ 26ರ ವರೆಗೆ ದ್ರಾಕ್ಷಾರಸ ಉತ್ಸವ ನಡೆಯಲಿದೆ. ತೋಟಗಾರಿಕಾ ಇಲಾಖೆ, ಕರ್ನಾಟಕ ದ್ರಾಕ್ಷಾರಸ ಮಂಡಳಿ ಹಾಗೂ ಉತ್ತರ ಕನ್ನಡ ಜಿಲ್ಲಾಡಳಿತವೂ ಕಾಳಿ ರಿವರ್ ಗಾರ್ಡನ್ನಲ್ಲಿ ಈ ಉತ್ಸವ ನಡೆಸಲಿದೆ. ಶೇ. 10ರ ರಿಯಾಯತಿ ದರದಲ್ಲಿ ವೈನ್ಗಳ ಮಾರಾಟ ನಡೆಸಲು ನಿರ್ಧರಿಸಲಾಗಿದೆ. 20ರೂ ಪ್ರವೇಶ ಶುಲ್ಕ ಇರಿಸಲಾಗಿದ್ದು, 21 ವರ್ಷ ಮೇಲ್ಪಟ್ಟವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.
* ಹಾರ್ನಬಿಲ್ ಉತ್ಸವ
ಪಕ್ಷಿ ವೀಕ್ಷಣೆಗೆ ಅನುಕೂಲವಾಗಿರುವ ದಾಂಡೇಲಿಯಲ್ಲಿ ಹಾರ್ನಬಿಲ್ ಉತ್ಸವ ನಡೆಸಲು ಜಿಲ್ಲಾಡಳಿತ ಸಿದ್ದತೆ ನಡೆಸಿದೆ. ಜನವರಿ 27 ಹಾಗೂ 28ರಂದು ಈ ಉತ್ಸವ ನಡೆಯುವ ಸಾಧ್ಯತೆ ಇದ್ದು, ಈ ಬಗ್ಗೆಯೂ ಸಚಿವರು ಚರ್ಚೆ ನಡೆಸಿದರು. ಪಕ್ಷಿತಜ್ಞರಿಂದ ಸರ್ವೆ ನಡೆಸುವ ಕುರಿತು ಸಲಹೆಗಳು ಬಂದವು. ಶಾಸಕ ಸತೀಶ್ ಸೈಲ್, ಜಿಲ್ಲಾಧಿಕಾರಿ ಎಸ್.ಎಸ್.ನಕುಲ, ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಇತರರು ಸಭೆಯಲ್ಲಿದ್ದರು.
Leave a Comment