ಕಾರವಾರ: ಅಂಬುಲೈನ್ಸ, ರಕ್ತನಿಧಿ ಸೇವೆ ಹಾಗೂ ಹೋಂ ಕೇರ್ ಸರ್ವಿಸ್ಗಾಗಿ “ಐ ರಿಲೀಪ್” ಎಂಬ ಮೊಬೈಲ್ ಆಪ್ವೊಂದನ್ನು ಪರಿಚಯಿಸಲಾಗಿದೆ.
ಕುಮಟಾ ಸಮೀಪದ ಹಿರೆಗುತ್ತಿಯಲ್ಲಿ ಬುಧವಾರ ಈ ಮೊಬೈಲ್ ಆಪ್ನ್ನು ಬಿಡುಗಡೆ ಮಾಡಲಾಯಿತು. ನಂತರ ಕಾರವಾರದಲ್ಲಿ ಸುದ್ದಿಗೊಷ್ಟಿ ನಡೆಸಿ ಮಾಹಿತಿ ನೀಡಿದ ಐ ರಿಲೀಪ್ ಕಂಪನಿಯ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಶುಜಾತ ಪಾಶ, ಈ ಆಪ್ ನೀಡುವ ಸೇವೆಗಳು ಕುರಿತು ತಿಳಿಸಿದರು. ಆರೋಗ್ಯ ನಿರ್ವಹಣೆ ಸೇವೆಯನ್ನು ಗಮನದಲ್ಲಿರಿಸಿಕೊಂಡು ಈ ಆಧುನಿಕ ತಂತ್ರಜ್ಞಾನ ಒಳಗೊಂಡ ಮೊಬೈಲ್ ಅಪ್ಲಿಕೇಶನ್ನ್ನು ಅಭಿವೃದ್ದಿ ಪಡಿಸಲಾಗಿದೆ ಎಂದು ಹೇಳಿದರು. ಸರ್ಕಾರದ ಸಹಭಾಗಿತ್ವದಲ್ಲಿ ಸೇವೆ ಸಲ್ಲಿಸುವ ಕಂಪನಿಯೂ ರಕ್ತನಿಧಿ ಕೇಂದ್ರಗಳ ಕುರಿತು ಮಾಹಿತಿ ಒದಗಿಸುತ್ತದೆ. ತುರ್ತು ಸೇವೆಗಳಿಗಾಗಿ ಅಂಬುಲೈನ್ಸಗಳನ್ನು ನೀಡುತ್ತದೆ. ಜೊತೆಗೆ ಮನೆಗೆ ವೈದ್ಯಕೀಯ ಸೇವೆಗಳನ್ನು ಪೂರೈಸುತ್ತದೆ ಎಂದರು. ರಕ್ತನಿಧಿ ಕೇಂದ್ರಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಕಂಪನಿ ಆಪ್ ಮೂಲಕ ರಕ್ತಕ್ಕಾಗಿ ಬೇಡಿಕೆ ಇಡುವವರಿಗೆ ತಕ್ಷಣ ಸ್ಪಂದಿಸಿ ಜೀವ ಉಳಿಸುವ ಪ್ರಯತ್ನ ಮಾಡುತ್ತದೆ. ರಕ್ತದಾನಿಗಳೂ ಈ ಆಪ್ ಮೂಲಕ ನೊಂದಣಿ ಮಾಡಿಕೊಳ್ಳಬಹುದು ಎಂದರು.
ಕುಮಟಾದಲ್ಲಿ ಕಂಪನಿಯೂ ಎರಡು ಅಂಬುಲೈನ್ಸಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಬೇಡಿಕೆ ಇರುವ ಕಡೆಗಳಲ್ಲಿ ಅಂಬುಲೈನ್ಸ ಸೇವೆ ಒದಗಿಸಲಾಗುತ್ತದೆ ಎಂದರು. ಇದರೊಂದಿಗೆ ಮನೆಯಲ್ಲಿಯೇ ಕುಳಿತು ಆಪ್ ಮೂಲಕ ರೋಗಿಗಳು ವೈದ್ಯರ ಸೇವೆ ಪಡೆಯಬಹುದು. ಪ್ರಯೋಗಾಲಯ ಪರೀಕ್ಷೆ, ದಾದಿಯರ ಸೇವೆ, ವೈದ್ಯಕೀಯ ಸಲಕರಣೆಗಳ ಸೇವೆಯನ್ನು ಪಡೆಯಬಹುದು ಎಂದರು. ಈಗಾಗಲೇ ಬೆಂಗಳೂರು ಮೊದಲಾದ ಕಡೆ ಸೇವೆ ಸಲ್ಲಿಸುತ್ತಿರುವ ಕಂಪನಿ ಗುಡ್ಡಗಾಡು ಜಿಲ್ಲೆಯಾಗಿರುವ ಉತ್ತರ ಕನ್ನಡವನ್ನು ಬೌಗೋಳಿಕವಾಗಿ ಸಮೀಕ್ಷೆ ನಡೆಸಿದೆ. ಇಲ್ಲಿಗೆ ಅಗತ್ಯವಿರುವ ಸೇವೆ ಒದಗಿಸಲು ಸಿದ್ದವಾಗಿದೆ ಎಂದು ಹೇಳಿದರು. ಕಂಪನಿಯ ಅಸಿಸ್ಟೆಂಟ್ ಆಪರೇಶನ್ ಮ್ಯಾನೇಜರ್ ರಾಕೇಶ್ ಉತಪ್ಪ ಇದ್ದರು.
Leave a Comment