ಹಳಿಯಾಳ: ಲಿಂಗಾಯತ ಧರ್ಮದಲ್ಲಿ ವಿವಿಧ ಜಾತಿ, ಪಂಗಡಗಳಿವೆ. ಅವರೆಲ್ಲರೂ ಬಸವಣ್ಣನವರ ತತ್ತ್ವಾದರ್ಶಗಳನ್ನು ಆಚರಿಸುತ್ತಿದ್ದು, ಮಾನವೀಯ ಸಿದ್ಧಾಂತ, ನಂಬಿಕೆ, ಆಚರಣೆ, ಸಂಪ್ರದಾಯ ಹೊಂದಿರುವ ಲಿಂಗಾಯತ ಧರ್ಮಕ್ಕೆ ಜಾಗತಿಕ ಮಟ್ಟದ ಮನ್ನಣೆ ಹಿಂದೆಯೇ ಸಿಗಬೇಕಿತ್ತು ಎಂದಿರುವ
ಗಣಿ ಮತ್ತು ಭೂವಿಜ್ಞಾನ ಸಚಿವ ಮತ್ತು ರಾಷ್ಟ್ರೀಯ ಬಸವ ಸೇನೆಯ ಅಧ್ಯಕ್ಷ ವಿನಯ ಕುಲಕರ್ಣಿ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಯಿಂದ ಧರ್ಮದ ಎಲ್ಲ ಪಂಗಡಗಳಿಗೂ ಸೌಲಭ್ಯ ದೊರೆಯಲಿದ್ದು ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಇತಿಹಾಸ ಸೃಷ್ಠಿಸಲಿದೆ ಎಂದರು.
ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದ ಪುರಸಭಾ ಸಭಾಭವನದಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಹೋರಾಟ ಸಮಿತಿ ರಾಷ್ಟ್ರೀಯ ಬಸವ ಸೇನೆಯ ಸಂಘಟನೆಗೆ ಚಾಲನೆ ಮತ್ತು ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಕುರಿತು ಆಯೋಜಿಸಿದ್ದ ಸಮಾಲೋಚನಾ ಸಭೆಯನ್ನು ಉಧ್ಘಾಟಿಸಿ ಅವರು ಮಾತನಾಡಿದರು.
ಸಮುದಾಯದ ಸರ್ವಾಂಗೀಣ ಏಳ್ಗೆಗಾಗಿ ಸ್ವತಂತ್ರ ಧರ್ಮ ಮಾನ್ಯತೆಗೆ ಆಗ್ರಹಿಸಿ ಹೋರಾಟ ನಡೆಯುತ್ತಿದ್ದು ನ.5ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆಯುವ ರ್ಯಾಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಬೆಂಬಲ ನೀಡುವಂತೆ ಕರೆ ನೀಡಿದರು.
ಪುರಸಭಾಧ್ಯಕ್ಷ ಉಮೇಶ ಬೊಳಶೆಟ್ಟಿ ಮಾತನಾಡಿ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಯಿಂದ ನಮ್ಮ ಸಮಾಜಕ್ಕೆ ಒಳ್ಳೆಯದಾಗುವುದಾದರೇ ಭಿನ್ನಾಭಿಪ್ರಾಯ ಮರೆತು ಬೆಂಬಲ ಸೂಚಿಸುವುದು ಸೂಕ್ತವಾಗಿದ್ದು, ನಾವೆಲ್ಲ ಬೆಂಬಲಿಸುತ್ತೇವೆಂದು ಭರವಸೆ ನೀಡಿದರು.
ಸಾನಿಧ್ಯ ವಹಿಸಿದ್ದ ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹುಬ್ಬಳ್ಳಿಯ ರ್ಯಾಲಿಗೆ ಭಿನ್ನಭಿಪ್ರಾಯ ಮರೆತು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶಿವದೇವ ದೇಸಾಯಿಸ್ವಾಮಿ ಮತ್ತು ತಾಲೂಕಾ ಘಟಕದ ಅಧ್ಯಕ್ಷ ಲಿಂಗರಾಜ ಹಿರೇಮಠ ಮಾತನಾಡಿ “ವೀರಶೈವ ಲಿಂಗಾಯತ” ಒಂದೇ ಎಂದು ಈ ಹಿಂದೆ ತಾವುಗಳೇ ಜನಗಣತಿಯಲ್ಲಿ ಬರೆಸಿದ್ದಿರಿ ಈಗ ಪುನಃ ತಾವುಗಳೇ ಲಿಂಗಾಯತ ಸ್ವತಂತ್ರ್ಯ ಧರ್ಮ ಎಂದು ಹೋರಾಟ ಪ್ರಾರಂಭಿಸಿದ್ದು ಈ ಬಗ್ಗೆ ಸ್ಪಷ್ಟಿಕರಣ ನೀಡುವಂತೆ ಹಾಗೂ ಧರ್ಮದಲ್ಲಿರುವ ಕೆಲವೊಂದು ಭಿನ್ನಾಭಿಪ್ರಾಯಗಳ ಕುರಿತು ಸಚಿವರನ್ನು ಪ್ರಶ್ನೀಸಿದಾಗ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.
ಸಚಿವ ಕುಲಕರ್ಣಿ ಮಾತನಾಡಿ ಈ ಬಗ್ಗೆ ಈಗ ಚರ್ಚೆ ಬೇಡ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಕುರಿತು ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿವಂತೆ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು.
ಇದೇ ಸಂದರ್ಭದಲ್ಲಿ ಸಚಿವ ವಿನಯ ಕುಲಕರ್ಣಿಯವರು ರವಿ ತೋರಣಗಟ್ಟಿಯವರ ನೇತೃತ್ವದಲ್ಲಿ ಸಂಘಟನೆಗೊಳ್ಳುತ್ತಿರುವ ಬಸವ ಸೇನೆಗೆ ನವಿನ ಕಾಟ್ಕರ್ ಮತ್ತೀತರ ಯುವಕರಿಗೆ ಬಸವ ಧ್ವಜ ನೀಡಿ ಸಂಘಟನೆಗೆ ಚಾಲನೆ ನೀಡಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ, ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಹೋರಾಟ ಸಮಿತಿಯ ಚಂದ್ರಕಾಂತ ಅಂಗಡಿ, ಶರಣ ಸಾಹಿತ್ಯ ಪರಿಷತ್ಯನ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶಂಭು ಹೆಗಡ್ಯಾಳ, ಪತ್ರಕರ್ತೆ ಸುಮಂಗಲಾ ಅಂಗಡಿ, ಲಿಂಗಾಯತ ಸಮಾಜದ ಶಿವಪುತ್ರಪ್ಪ ನುಚ್ಚಂಬ್ಲಿ, ಮಲ್ಲೇಶಿ ಉಪ್ಪಿನ ಇದ್ದರು. ದೀಪಾ ಗಾಣಿಗೇರ ಕಾರ್ಯಕ್ರಮ ನಿರ್ವಹಿಸಿದರು.
Leave a Comment