ಕಾರವಾರ: ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ದೂರದರ್ಶಿಯಾಗಿದ್ದ ಟಿಪ್ಪು ಸುಲ್ತಾನ್ ಜೀವನ ಅನುಕರಣೀಯ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ ಹೇಳಿದರು.
ಜಿಲ್ಲಾ ರಂಗ ಮಂದಿರದಲ್ಲಿ ಶುಕ್ರವಾರ ನಡೆದ ಹಜರತ್ ಟಿಪ್ಪು ಸುಲ್ತಾನ್ ಜಯಂತೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಟಿಪ್ಪು ಸುಲ್ತಾನ್ ಒಬ್ಬ ರಾಜನಾಗಿದ್ದರೂ ಸೈನಿಕರಂತೆ ಹೋರಾಡಿದ ವ್ಯಕ್ತಿ. ರಾಕೇಟ್ ತಂತ್ರಜ್ಞಾನವನ್ನು ಬಳಸಿಕೊಂಡು ಯುದ್ದ ಸಾರಿದ ಸೇನಾನಿ. ಭೂ ಕಂದಾಯ ಸುದಾರಣಾ ನೀತಿಯಲ್ಲಿಯೂ ಟಿಪ್ಪುವಿನ ಸಾಧನೆ ಮಹತ್ವದ್ದಾಗಿದೆ. ಇಂತಹ ಗಣ್ಯ ವ್ಯಕ್ತಿಗಳ ಮಾದರಿ ಅಂಶಗಳನ್ನು ಮುಂದಿನ ಜನಾಂಗದವರಿಗೆ ಪರಿಚಯಿಸಲು ಅವರ ದಿನಾಚರಣೆಗಳನ್ನು ಆಚರಿಸಲಾಗುತ್ತದೆ ಎಂದರು. ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಮಾತನಾಡಿ, ಟಿಪ್ಪು ಸುಲ್ತಾನ್ರ ಜೀವನ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು. ರಾಜ್ಯ ಮೀನುಗಾರಿಕೆ ಅಭಿವೃದ್ದಿ ನಿಗಮ ಅಧ್ಯಕ್ಷ ರಾಜೇಂದ್ರ ನಾಯ್ಕ, ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಸಂದೀಪ ತಳ್ಳೆಕರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಲ್ ಚಂದ್ರಶೇಖರ ನಾಯಕ, ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ವೇದಿಕೆಯಲ್ಲಿದ್ದರು.
ಉಪನ್ಯಾಸಕ ವಿಠಲ ಭಂಡಾರಿ ವಿಶೇಷ ಉಪನ್ಯಾಸ ನೀಡಿದರು. ವಾರ್ತಾ ಇಲಾಖೆಯಿಂದ ಪ್ರಕಟಿಸಿದ ಮೈಸೂರು ಹುಲಿ ಪುಸ್ತಕ ಬಿಡುಗಡೆ ನಡೆಯಿತು. ದಿನಾಚರಣೆ ಅಂಗವಾಗಿ ನಡೆಸಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರಾಮಕೃಷ್ಣ ನಾಯಕ ಸ್ವಾಗತಿಸಿದರು. ಶಿಕ್ಷಕ ಮಹದೇವ ರಾಣೆ ನಿರ್ವಹಿಸಿ ವಂದಿಸಿದರು.
**********
* ಆರಂಭದಲ್ಲಿ ಗಣೇಶನ ಸ್ಮರಣೆ
ಟಿಪ್ಪು ಜಯಂತಿ ಕಾರ್ಯಕ್ರಮವನ್ನು ಗಣೇಶನ ಸ್ಮರಣೆಯೊಂದಿಗೆ ಆರಂಭಿಸಲಾಯಿತು. ನಿರ್ವಹಣೆ ಜವಾಬ್ದಾರಿ ಹೊತ್ತಿದ್ದ ಶಿಕ್ಷಕ ಮಹದೇವ್ ರಾಣೆ ವಿಘ್ನ ನಿವಾರಕ ವಿನಾಯಕನಿಗೆ ನಮನ ಸಲ್ಲಿಸಿ ಕಾರ್ಯಕ್ರಮ ಆರಂಭಿಸಿದರು. ಉದ್ಘಾಟನಾ ಭಾಷಣದಲ್ಲಿಯೂ ಜಿಲ್ಲಾಧಿಕಾರಿ ಟಿಪ್ಪು ಸುಲ್ತಾನ್ ನಂಜನಗೂಡಿನಲ್ಲಿ ಶಿವಲಿಂಗ ನಿರ್ಮಿಸಿರುವದನ್ನು ಸ್ಮರಿಸಿದರು.
* ಬಿಗಿ ಭದ್ರತೆ
ಜಿಲ್ಲಾ ರಂಗ ಮಂದಿರದಲ್ಲಿ ಟಿಪ್ಪು ಜಯಂತಿ ಆಚರಣೆ ಹಿನ್ನಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವವರನ್ನು ಪೊಲೀಸರು ತಪಾಸಣೆ ನಡೆಸಿದರು. ವಿಶೇಷ ಉಪನ್ಯಾಸ ನೀಡಲು ಸಂಘಟಕರ ಸೂಚನೆ ಮೇರೆಗೆ ಸಿದ್ದಾಪುರದಿಂದ ಆಗಮಿಸಿದ ವಿಠಲ ಭಂಡಾರಿಯವರನ್ನು ಪೊಲೀಸರು ತಪಾಸಣೆಗೊಳಪಡಿಸಿದರು. ನಂತರ ಹೆಸರು, ವಿಳಾಸಗಳನ್ನು ವಿಚಾರಿಸಿದರು.
Leave a Comment